ಆ್ಯಪ್ನಗರ

ಹಿಂದೂ ಸಂಘಟನೆಗಳ ಒತ್ತಡ, ಭಯದಿಂದ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕ - ಸಿದ್ದರಾಮಯ್ಯ ಆರೋಪ

ನಂಜನಗೂಡಿನ ದೇವಸ್ಥಾನ ತೆರವು ವಿಚಾರವಾಗಿ ಹಿಂದೂ ಪರ ಸಂಘಟನೆಗಳ ವಿರೋಧ, ಒತ್ತಡದಿಂದಾಗಿ ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ವಿಧೇಯಕ ತರಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 21 Sep 2021, 9:29 pm

ಹೈಲೈಟ್ಸ್‌:

  • ಹಿಂದೂ ಪರ ಸಂಘಟನೆಗಳ ವಿರೋಧ, ಒತ್ತಡದಿಂದಾಗಿ ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ವಿಧೇಯಕ ತರಲಾಗಿದೆ ಎಂದ ಸಿದ್ದರಾಮಯ್ಯ
  • ನಂಜನಗೂಡಿನ ದೇವಸ್ಥಾನ ತೆರವು ವಿಚಾರವಾಗಿ ಪ್ರತಿಭಟನೆಗೆ ಇಳಿದಿದ್ದ ಹಿಂದೂ ಪರ ಸಂಘಟನೆಗಳ
  • ನೀವೇ ದೇವಸ್ಥಾನ ಒಡೆದು ಹಾಕಿ, ಇದೀಗ ನೀವೇ ಕಾನೂನು ತರುವುದು ವಿಪರ್ಯಾಸ ಅಲ್ಲವಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Siddaramaiah

ಬೆಂಗಳೂರು: ಮೈಸೂರು ಜಿಲ್ಲೆಯ ನಂಜನಗೂಡಿನ ದೇವಸ್ಥಾನ ತೆರವು ವಿಚಾರವಾಗಿ ಹಿಂದೂ ಪರ ಸಂಘಟನೆಗಳ ವಿರೋಧ ಹಾಗೂ ಒತ್ತಡದಿಂದಾಗಿ ಕರ್ನಾಟಕ ಧಾರ್ಮಿಕ ಕಟ್ಟಡಗಳ ( ಸಂರಕ್ಷಣೆ) ವಿಧೇಯಕ ತರಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದರು.
ವಿಧಾನಸಭೆಯಲ್ಲಿ ವಿಧೇಯಕ ವಿಚಾರವಾಗಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, "ನೀವೇ ದೇವಸ್ಥಾನ ಒಡೆದು ಹಾಕಿ, ಇದೀಗ ನೀವೇ ಕಾನೂನು ತರುವುದು ವಿಪರ್ಯಾಸ ಅಲ್ಲವಾ?" ಎಂದು ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಅಧಿಕಾರಿಗಳ ತಪ್ಪು ಇಲ್ಲ, ಸರ್ಕಾರದ ಗಮನಕ್ಕೆ ಬಂದಿರಲೇ ಬೇಕು.‌ ಸುಪ್ರೀಂ ಕೋರ್ಟ್ ಆದೇಶ ಬಂದು 11 ವರ್ಷ ಮೇಲಾಗಿದೆ. ಈಗಾಗಲೇ ಎಷ್ಟೋ ದೇವಸ್ಥಾನ ಒಡೆದು ಹಾಕಲಾಗಿದೆ. ‌ಹಿಂದೆ ಒಡೆದು ಹಾಕಿದ ದೇವಸ್ಥಾನಗಳಿಗೆ ಏನು ಪರಿಹಾರ? ಎಂದು ಪ್ರಶ್ನಿಸಿದರು.

ಹಿಂದೂ ಮಹಾಸಭಾ, ಹಿಂದೂ ಜಾಗರಣಾ ವೇದಿಕೆ ಸಂಘಟನೆಗಳ ವಿರೋಧ, ಭಯ ಹಾಗೂ ಒತ್ತಡದಿಂದ ಈ ವಿಧೇಯಕ ತಂದಿದ್ದೀರಿ ಎಂದು ಆರೋಪ ಮಾಡಿದರು. ನನ್ನ ಮಗನ ಕ್ಷೇತ್ರದಲ್ಲಿ ದೇವಸ್ಥಾನ ಕೆಡವಿದರು, ಆದರೆ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಾವು ಸುಮ್ಮನಾದೆವು. ನೀವೇ ಒಡೆದು ಹಾಕಿ ನೀವೇ ಕಾನೂನು ತರುವುದು ವಿಪರ್ಯಾಸ ಅಲ್ಲವಾ ಎಂದರು.‌
ದೇವಸ್ಥಾನಗಳ ರಕ್ಷಣೆಗೆ ಮಸೂದೆಯ ಮೊರೆ ಹೋದ ಸರ್ಕಾರ. ಪಾಸ್ ಆದ್ರೂ ರಾಜ್ಯಪಾಲರ ಅಂಕಿತ ಡೌಟ್‌!

ನಿಮಗೆ ಗೊತ್ತಿಲ್ಲದೆ ದೇವಸ್ಥಾನ ಒಡೆದರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇದಕ್ಕೆ ಮಾಧುಸ್ವಾಮಿ ಉತ್ತರಿಸಿ, ನಮಗೆ ಗೊತ್ತಿಲ್ಲದೆ ಒಡೆದು ಹಾಕಿದ್ದಾರೆ ಎಂದರು. ಹಾಗಾದರೆ ಜಿಲ್ಲಾಧಿಕಾರಿ ಮೇಲೆ ಕ್ರಮ ಕೈಗೊಳ್ಳಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಈ ವೇಳೆ ಮಧ್ಯ ಪ್ರವೇಶ ಮಾಡಿದ ಮಾಧುಸ್ವಾಮಿ, ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಅವಕಾಶ ಇದ್ದರೂ, ಅಧಿಕಾರಿಗಳು ಓವರ್ ಆಕ್ಟಿಂಗ್‌ನಿಂದ ದೇವಸ್ಥಾನ ತೆರವು ಮಾಡಿದ್ದಾರೆ ಎಂದರು.

ಆದರೆ ಮಸೂದೆಯಲ್ಲಿ ಅಧಿಕಾರಿಯ ವಿರುದ್ಧ ಕ್ರಮ ಇಲ್ಲ. ಸದ್ಭಾವನೆಯಿಂದ ತೆರವು ಎಂದಿದ್ದೀರಿ. ಸರ್ಕಾರದ ಗಮನದಲ್ಲಿ ಇದ್ದು ದೇವಸ್ಥಾನ ತೆರವು ಮಾಡಲಾಗಿದೆ. ಅತ್ಯುತ್ಸಾಹದಿಂದ ತೆರವು ಮಾಡಿಲ್ಲ ಬದಲಾಗಿ ಸುಪ್ರೀಂ ಕೋರ್ಟ್ ಆದೇಶದಿಂದ ತೆರವುಗೊಳಿಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ವೇಳೆ ಸದನದಲ್ಲಿ ಆಡಳಿತ ವಿರೋಧ ಪಕ್ಷಗಳ ನಡುವೆ ವಾಗ್ವಾದ ನಡೆಯಿತು.

ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, 2009ರಲ್ಲಿ ಸುಪ್ರೀಂ ಕೋರ್ಟ್ ಆದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹಲವಾರು ಧಾರ್ಮಿಕ ಕ್ಷೇತ್ರಗಳನ್ನು ಸ್ಥಳಾಂತರ ಆಗಿದೆ, ಕೆಲವು ತೆರವುಗೊಳಿಸಲಾಗಿದೆ. ಮೈಸೂರಿನಲ್ಲಿ ಹಲವಾರು ದೇವಸ್ಥಾನ ಈ ಹಿಂದೆಯೂ ತೆರವಾಗಿದೆ. ಇದು ಮೊದಲ ಬಾರಿಯಲ್ಲ.‌ ಸುಪ್ರೀಂ ಕೋರ್ಟ್‌ ಆದೇಶ ಹೇಗೆ ಪರಿಪಾಲನೆ ಮಾಡಬೇಕು ಎಂಬುದು ಮೂಲ ಪ್ರಶ್ನೆಯಾಗಿದೆ.‌ ಈ ನಿಟ್ಟಿನಲ್ಲಿ ಬಿಲ್ ತರಲಾಗಿದೆ ಎಂದು ಸಮಜಾಯಿಷಿ ನೀಡಿದರು.

ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಮಸೂದೆಯಲ್ಲಿ ಅಧಿಕಾರಿ ಸದ್ಭಾವನೆಯಿಂದ ತೆರವು ಮಾಡಿದ್ದಾರೆ ಎಂದು ಇದೆ. ಈ ಪದ ಹೇಗೆ ಬಳಸುತ್ತೀರಿ? ಕೋರ್ಟ್ ಆದೇಶದಿಂದ ತೆರವು ಎಂದು ಹೇಳಬೇಕಿತ್ತು. ಅವರ ವಿರುದ್ಧ ಕ್ರಮದ ಬಗ್ಗೆ ಏಕೆ ಉಲ್ಲೇಖ ಮಾಡಿಲ್ಲ. ಸದ್ಭಾವನೆ ಪದ ತೆಗೆದುಹಾಕಲು ಸಲಹೆ ನೀಡಿದರು. ಇದನ್ನು ತಿದ್ದುಪಡಿ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಒಪ್ಪಿಗೆ ಸೂಚಿಸಿದರು. ಪರ ವಿರೋಧ ಚರ್ಚೆಯ ಬಳಿಕ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ