ಆ್ಯಪ್ನಗರ

ಬಡ್ತಿ ಮೀಸಲು ಪ್ರಕರಣ: ಪರಿಶಿಷ್ಟರ ಹಿತ ಕಾಯಲು ಬದ್ಧ

ಬಡ್ತಿ ಮೀಸಲು ಪ್ರಕರಣದಲ್ಲಿ ಪರಿಶಿಷ್ಟ ಅಧಿಕಾರಿಗಳು ಹಾಗೂ ನೌಕರರ ಹಿತ ಕಾಯಲು ಸರಕಾರ ಬದ್ಧವಾಗಿದೆ...

Vijaya Karnataka 14 Jul 2018, 5:00 am
ಬೆಂಗಳೂರು : ಬಡ್ತಿ ಮೀಸಲು ಪ್ರಕರಣದಲ್ಲಿ ಪರಿಶಿಷ್ಟ ಅಧಿಕಾರಿಗಳು ಹಾಗೂ ನೌಕರರ ಹಿತ ಕಾಯಲು ಸರಕಾರ ಬದ್ಧವಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಜುಲೈ 27 ರಂದು ವಿಚಾರಣೆ ಬಾಕಿಯಿದ್ದು ಅದಕ್ಕಾಗಿ ಕಾಯಲಾಗುತ್ತಿದೆ ಎಂದು ರಾಜ್ಯ ಸರಕಾರ ಸ್ಪಷ್ಟ ಪಡಿಸಿದೆ.
Vijaya Karnataka Web krishna


ವಿಧಾನಸಭೆಯಲ್ಲಿ ಶುಕ್ರವಾರ ಈ ಸಂಬಂಧ ಗಂಭೀರ ಚರ್ಚೆಯಾಯಿತು. ''ಎಸ್‌ಸಿ,ಎಸ್‌ಟಿಗಳ ಹಿತರಕ್ಷಣೆ ಸಂಬಂಧ ಕಾನೂನು ತಂದ ಬಳಿಕವೂ ಅನುಷ್ಠಾನ ಮಾಡಿಲ್ಲ,''ಎಂದು ಕುಡಚಿ ಶಾಸಕ ಪಿ. ರಾಜೀವ್‌ ನಿಲುವಳಿ ಸೂಚನೆ ಮಂಡಿಸಲು ಪಟ್ಟು ಹಿಡಿದರು. ಪರಿಶಿಷ್ಟ ಸಮುದಾಯ ಪ್ರತಿನಿಧಿಸುವ ಹಲವು ಶಾಸಕರೂ ಇದಕ್ಕೆ ದನಿಗೂಡಿಸಿದರು.

ಸರಕಾರದ ಪರ ಉತ್ತರ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಕೃಷ್ಣ ಬೈರೇಗೌಡ, ''ಪರಿಶಿಷ್ಟರ ಹಿತ ಕಾಯುವ ಕಾಳಜಿಯಿಂದಲೇ ವಿಧೇಯಕ ತರಲಾಗಿದೆ. ಅದಕ್ಕೆ ರಾಷ್ಟ್ರಪತಿಯವರು ಅಂಕಿತ ಹಾಕಿದ್ದು ಗೆಜೆಟ್‌ ಅಧಿಸೂಚನೆ ಹೊರಡಿಸಲಾಗಿದೆ. ವಿಧೇಯಕವು ಕಾನೂನಿನ ಸ್ವರೂಪ ಪಡೆದುಕೊಂಡಿದೆ. ಇದರಿಂದ ಹಿಂದೆ ಸರಿಯುವ ಅಥವಾ ಪುನರ್‌ ಪರಿಶೀಲಿಸುವ ಪ್ರಶ್ನೆಯಿಲ್ಲ. ಆದರೆ, ಸುಪ್ರೀಂಕೋರ್ಟ್‌ನಲ್ಲಿ ನಡೆಯಬೇಕಿದ್ದ ಪ್ರಕರಣದ ವಿಚಾರಣೆ ಜುಲೈ 27ಕ್ಕೆ ಮುಂದೂಡಿಕೆಯಾಗಿದೆ. ಸುಪ್ರೀಂಕೋರ್ಟ್‌ ತೀರ್ಪಿನವರೆಗೆ ಕಾನೂನು ಜಾರಿ ಬೇಡವೆಂದು ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ನೀಡಿದ್ದಾರೆ.ಹೀಗಾಗಿ ಕಾಯಲಾಗುತ್ತಿದೆ,'' ಎಂದು ತಿಳಿಸಿದರು.

''ಪ್ರಮುಖ ಇಲಾಖೆಗಳಲ್ಲಿ ತರಾತುರಿಯಲ್ಲಿ ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಸಭೆ ನಡೆಸಲಾಗುತ್ತಿದೆ,'' ಎಂದು ಬಿಜೆಪಿಯ ಗೋವಿಂದ ಕಾರಜೋಳ ಆಕ್ಷೇಪಿಸಿದರು. ಡಿಪಿಸಿಯಲ್ಲಿ ಎಸ್‌ಸಿ, ಎಸ್‌ಟಿ ಪ್ರತಿನಿಧಿಗಳೂ ಇಲ್ಲವೆಂದು ಗೂಳಿಹಟ್ಟಿ ಶೇಖರ್‌ ಹೇಳಿದರು.

ಸೂಪರ್‌ಸೀಡ್‌ ಆಗಲಿದೆ

ಮಧ್ಯೆ ಪ್ರವೇಶಿಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ, ''ರಾಷ್ಟ್ರಪತಿಗಳ ಅಂಕಿತದೊಂದಿಗೆ ಬಂದಿರುವ ರಾಜ್ಯದ ಕಾಯಿದೆ ಅನುಷ್ಠಾನಗೊಂಡರೆ ಡಿಪಿಸಿ ಸಭೆಯಲ್ಲಿ ಕೈಗೊಂಡ ತೀರ್ಮಾನಗಳೆಲ್ಲವೂ ಸೂಪರ್‌ಸೀಡ್‌ ಆಗಲಿವೆ. ಯಾವುದೇ ಆತಂಕ ಬೇಡ. ಡಿಪಿಸಿಯಲ್ಲಿ ಎಸ್‌ಸಿ, ಎಸ್‌ಟಿ ಪ್ರತಿನಿಧಿಗಳನ್ನು ನೇಮಿಸುವ ಸಂಬಂಧ ಡಿಸಿಎಂ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ,'' ಎಂದು ಸಮಜಾಯಿಷಿ ನೀಡಿದರು.

ನೆಪ ಹೇಳಬೇಡಿ

ಈ ವಿಚಾರವಾಗಿ ಮಾತನಾಡಿದ ಸ್ಪೀಕರ್‌ ಕೆ.ಆರ್‌. ರಮೇಶ್‌ಕುಮಾರ್‌, ''ಜುಲೈ 27 ರ ಬಳಿಕ ರಾಜ್ಯದ ಕಾನೂನು ಜಾರಿಯಾಗುವಂತೆ ನೋಡಿಕೊಳ್ಳಬೇಕು. ಕೋರ್ಟ್‌ ವಿಚಾರಣೆ ನೆಪ ಹೇಳಿಕೊಂಡು ಮುಂದೂಡುವುದು ಸರಿಯಲ್ಲ. ಪದೇಪದೆ ಈ ವಿಚಾರಣೆ ಮುಂದೂಡಿಕೆಯಾದರೆ ಕಷ್ಟ. ಹಾಗಾಗಿ ಜುಲೈ 27 ರ ನಂತರ ಕಾಯಿದೆ ಜಾರಿ ಸಂಬಂಧ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಿ,''ಎಂದು ಸ್ಪೀಕರ್‌ ಸರಕಾರಕ್ಕೆ ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ