ಆ್ಯಪ್ನಗರ

ಮುಂಬಡ್ತಿಗೆ ಸುಪ್ರೀಂ ತಡೆ

ಬಿ.ಕೆ.ಪವಿತ್ರ ಪ್ರಕರಣದ ತೀರ್ಪಿನಿಂದ ಸಂತ್ರಸ್ತರಾಗಿದ್ದ ಎಸ್‌ಸಿ, ಎಸ್‌ಟಿ ನೌಕರರು ಹಾಗೂ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್‌ ಶುಕ್ರವಾರ ತಡೆಯಾಜ್ಞೆ ನೀಡಿದೆ. ಇದರೊಂದಿಗೆ ಪರಿಶಿಷ್ಟರ ಹಿತ ಕಾಯುವ ಸರಕಾರದ ಯತ್ನಕ್ಕೆ ಹಿನ್ನಡೆಯಾದಂತಾಗಿದೆ.

Vijaya Karnataka 2 Mar 2019, 5:00 am
ಬೆಂಗಳೂರು/ಹೊಸದಿಲ್ಲಿ : ಬಿ.ಕೆ.ಪವಿತ್ರ ಪ್ರಕರಣದ ತೀರ್ಪಿನಿಂದ ಸಂತ್ರಸ್ತರಾಗಿದ್ದ ಎಸ್‌ಸಿ, ಎಸ್‌ಟಿ ನೌಕರರು ಹಾಗೂ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್‌ ಶುಕ್ರವಾರ ತಡೆಯಾಜ್ಞೆ ನೀಡಿದೆ. ಇದರೊಂದಿಗೆ ಪರಿಶಿಷ್ಟರ ಹಿತ ಕಾಯುವ ಸರಕಾರದ ಯತ್ನಕ್ಕೆ ಹಿನ್ನಡೆಯಾದಂತಾಗಿದೆ.
Vijaya Karnataka Web haamer


ಪರಿಶಿಷ್ಟರ ಹಿತರಕ್ಷಣೆ ಉದ್ದೇಶದ ಕಾಯಿದೆ ಜಾರಿ ಸಂಬಂಧ ರಾಜ್ಯ ಸರಕಾರ ಫೆಬ್ರವರಿ 27ರಂದು ಅಧಿಕೃತ ಆದೇಶ ಹೊರಡಿಸಿತ್ತು. ಪವಿತ್ರ ಪ್ರಕರಣದ ತೀರ್ಪು ಹೊರಬಿದ್ದ ಬಳಿಕ ಹಿಂಬಡ್ತಿಗೆ ಒಳಗಾಗಿದ್ದ 3790ಕ್ಕೂ ಹೆಚ್ಚು ಎಸ್‌ಸಿ, ಎಸ್‌ಟಿ ನೌಕರರಿಗೆ ಹಿಂಬಡ್ತಿಗೆ ಮೊದಲು ಅವರಿದ್ದ ಹುದ್ದೆಯನ್ನೇ ನೀಡುವ ಅಂಶ ಈ ಕಾಯಿದೆಯಲ್ಲಿದೆ. ಅಂದರೆ ಪುನಃ ಮುಂಬಡ್ತಿಯೆಂದು ಅರ್ಥ. ತಕ್ಷಣವೇ ಈ ಪ್ರಕ್ರಿಯೆ ಕೈಗೊಳ್ಳುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.

ಆದರೆ, ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಕೇವಲ ಎರಡು ದಿನದ ಅಂತರದಲ್ಲೇ ಈ ಕಾಯಿದೆ ಜಾರಿಗೆ ತಡೆಯುಂಟಾದಂತಾಗಿದೆ. ರಾಜ್ಯದ ಕಾಯಿದೆಗೆ ತಡೆ ಕೋರಿ ಸಾಮಾನ್ಯ ವರ್ಗದ ನೌಕರರ ಪರ ವಕೀಲರಾದ ರಾಜೀವ್‌ ಧವನ್‌ ಹಾಗೂ ಕುಮಾರ್‌ ಪರಿಮಳ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾ. ಯು.ಯು.ಲಲಿತ್‌ ಅವರಿದ್ದ ಸುಪ್ರೀಂಕೋರ್ಟ್‌ನ ಪೀಠವು ಶುಕ್ರವಾರ ಕೈಗೆತ್ತಿಕೊಂಡಿತು. ರಾಜ್ಯದ ಕಾಯಿದೆಯ ಸಿಂಧುತ್ವ ಪ್ರಶ್ನಿಸಿ ಬಿ.ಕೆ.ಪವಿತ್ರ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ಅಂತಿಮ ಹಂತದಲ್ಲಿದೆ. ಈ ಸಂದರ್ಭದಲ್ಲಿ ಕಾಯಿದೆ ಜಾರಿಯ ಅಗತ್ಯವಿರಲಿಲ್ಲವೆಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಜತೆಗೆ ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಹಿಂಬಡ್ತಿಗೆ ಒಳಗಾಗಿದ್ದ ಪರಿಶಿಷ್ಟರಿಗೆ ತಕ್ಷಣವೇ ಮೊದಲಿನ ಸ್ಥಾನ ಕಲ್ಪಿಸಿ ಮುಂಬಡ್ತಿ ಕೊಡಬೇಕು. ಅವರನ್ನು ನಿಯುಕ್ತಿಗೊಳಿಸಲು ಕಾರ್ಯಕಾರಿ ಸ್ಥಾನವಿಲ್ಲದಿದ್ದರೆ ಸಂಖ್ಯಾಧಿಕ ಕೋಟಾ (ಸೂಪರ್‌ ನ್ಯೂಮರರಿ ಕೋಟಾ) ಸೃಜಿಸಬೇಕು. ಅದಾದ ಬಳಿಕ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಬೇಕು. ಈ ಎಲ್ಲವೂ ಸುಪ್ರೀಂಕೋರ್ಟ್‌ನ ಮುಂದಿನ ಆದೇಶದ ಷರತ್ತಿಗೆ ಒಳಪಟ್ಟಿರುತ್ತದೆ ಎಂಬ ಅಂಶವನ್ನು ರಾಜ್ಯದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿತ್ತು. ವಿಚಾರಣೆ ಬಾಕಿಯಿರುವಾಗ ಇಷ್ಟೊಂದು ತರಾತುರಿಯಿಂದ ಆದೇಶ ಹೊರಡಿಸುವುದು ಔಚಿತ್ಯವಲ್ಲವೆಂದೂ ಕೋರ್ಟ್‌ ಆಕ್ಷೇಪಿಸಿದೆ.

ಈ ಕುರಿತ ಮುಂದಿನ ವಿಚಾರಣೆಯನ್ನು ಮಾರ್ಚ್‌ 6ಕ್ಕೆ ಮುಂದೂಡಲಾಗಿದೆ. ರಾಜ್ಯ ಸರಕಾರದ ಪರವಾಗಿ ಬಸವಪ್ರಭು ಪಾಟೀಲ್‌ ವಾದ ಮಂಡಿಸಿದರು. ಮಾರ್ಚ್‌ 30ರ ಒಳಗೆ ಈ ಪ್ರಕರಣ ಸಂಬಂಧ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ