ಆ್ಯಪ್ನಗರ

ನದಿ ಜೋಡಣೆಯಲ್ಲಿ ರಾಜ್ಯಕ್ಕೆ ನ್ಯಾಯೋಚಿತ ಪಾಲು ಬೇಕು: ಡಿಕೆಶಿ

ನದಿ ಜೋಡಣೆ ಯೋಜನೆ ರೂಪಿಸುವಾಗ ಕರ್ನಾಟಕಕ್ಕೆ ತನ್ನ ನ್ಯಾಯೋಚಿತ ಪಾಲು ...

Vijaya Karnataka 21 Aug 2018, 7:45 am
ಹೊಸದಿಲ್ಲಿ: ನದಿ ಜೋಡಣೆ ಯೋಜನೆ ರೂಪಿಸುವಾಗ ಕರ್ನಾಟಕಕ್ಕೆ ತನ್ನ ನ್ಯಾಯೋಚಿತ ಪಾಲು ಸಿಗಲೇ ಬೇಕು. ಇಲ್ಲವಾದರೆ, ಈ ಬಗ್ಗೆ ತೀರ್ಮಾನ ಮಾಡಲು ನ್ಯಾಯಾಧಿಕರಣ ರಚನೆ ಮಾಡುವಂತೆ ಒತ್ತಾಯ ಮಾಡುವುದು ನಮಗೆ ಅನಿವಾರ‍್ಯವಾಗಲಿದೆ ಎಂದು ರಾಜ್ಯದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web dks


ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ನದಿ ಜೋಡಣೆ ಸಮಿತಿಯ 15ನೇ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ''ಹೆಚ್ಚು ನೀರು ಇರುವ ನದಿಗಳಿಂದ ಕಡಿಮೆ ನೀರಿರುವ ನದಿಗೆ ನೀರು ಹರಿಯುವಂತೆ ಮಾಡಲು ನದಿ ಜೋಡಣೆ ಯೋಜನೆ ಕೈಗೆತ್ತಿಕೊಂಡಿರುವಾಗ ಯಾವುದೇ ರಾಜ್ಯದ ಹಿತಕ್ಕೆ ಧಕ್ಕೆ ಆಗಬಾರದು,'' ಎಂದರು.

''ರಾಜ್ಯದ ಕೃಷ್ಣಾ ಮತ್ತು ಕಾವೇರಿ ಕೊಳ್ಳದ ಪ್ರದೇಶಗಳು ತೀವ್ರ ಬರಪೀಡಿತ ಪ್ರದೇಶಗಳಾಗಿವೆ. ಈ ಎರಡೂ ನದಿಗಳ ಕಣಿವೆ ಪ್ರದೇಶದಲ್ಲಿ ಕುಡಿಯುವ ಮತ್ತು ನೀರಾವರಿ ಉದ್ದೇಶಕ್ಕಾಗಿ ನೀರಿನ ಅಗತ್ಯವಿದೆ. ನಮ್ಮ ರಾಜ್ಯಕ್ಕೆ ಅಗತ್ಯವಿರುವಷ್ಟು ನೀರು ಮತ್ತು ನ್ಯಾಯೋಚಿತ ಪಾಲು ನಮಗೆ ಸಿಗದೇ ಹೋದರೆ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಲೇಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ನ್ಯಾಯಾಧಿಕರಣ ಸ್ಥಾಪನೆ ಮಾಡುವಂತೆ ನಾವು ಒತ್ತಾಯಿಸಲಿದ್ದೇವೆ,'' ಎಂದರು

''ಈಗ ರೂಪಗೊಳ್ಳುತ್ತಿರುವ ನದಿ ಜೋಡಣೆ ತಾಂತ್ರಿಕ ಕಾರ‍್ಯಸಾಧ್ಯತೆ ವರದಿಯ ಪ್ರಕಾರ ಗೋದಾವರಿ ಉಪಕೊಳ್ಳದ ಇಂದ್ರಾವತಿಯಿಂದ 247 ಟಿಎಂಸಿ ನೀರನ್ನು ಗೋದಾವರಿ-ಕೃಷ್ಣಾ, ಕೃಷ್ಣಾ-ಪೆನ್ನಾರ್‌ ಮತ್ತು ಪೆನ್ನಾರ್‌-ಕಾವೇರಿ ನದಿಗಳ ಜೋಡಣೆ ಮೂಲಕ ಆಂಧ್ರ ಪ್ರದೇಶ ಹಾಗೂ ತಮಿಳುನಾಡಿಗೆ ಕೊಡಬಹುದು ಎಂದು ಉಲ್ಲೇಖಿಸಲಾಗಿದೆ. ಆದರೆ, ಈ ವರದಿಯಲ್ಲೂ ಕರ್ನಾಟಕಕ್ಕೆ ನೀರು ಕೊಡುವ ಬಗ್ಗೆ ಪ್ರಸ್ತಾಪವೇ ಇಲ್ಲ. ಈ ಲೋಪವನ್ನು ಕೇಂದ್ರ ಸರಕಾರ ಸರಿಪಡಿಸಲೇಬೇಕು,'' ಎಂದು ಸಚಿವ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ