ಆ್ಯಪ್ನಗರ

ಮತ್ತೆ ಉಕ್ಕಿ ಹರಿಯುತ್ತಿವೆ ನದಿಗಳು, ತೀರದ ತಳಮಳ

ಕಾಳಿ ಪ್ರವಾಹದಿಂದ ಹಳೇ ದಾಂಡೇಲಿ ಮುಳುಗಡೆ, ಕೃಷ್ಣೆಯಿಂದ ವಿಜಯಪುರದಲ್ಲಿ ಆತಂಕ, ಮುನಿದ ಮಲಪ್ರಭಾ

Vijaya Karnataka 9 Sep 2019, 10:21 am
ದಾಂಡೇಲಿ (ಉತ್ತರ ಕನ್ನಡ), ಬೆಳಗಾವಿ, ಬೆಂಗಳೂರು: ಸೂಪಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಕಾಳಿ ನದಿಗೆ ಬಿಟ್ಟಿರುವ ಕಾರಣ ನದಿ ತೀರದ ಪ್ರದೇಶಗಳು ಭಾನುವಾರ ಜಲಾವೃತಗೊಂಡಿವೆ.
Vijaya Karnataka Web Hale Dandeli

ಇಲ್ಲಿನ ಹಳೇದಾಂಡೇಲಿ, ಬೈಲಪಾರ, ದಾಂಡೇಲಪ್ಪ ದೇವಸ್ಥಾನದ ಭಾಗದಲ್ಲಿ ಹಾಗೂ ಕೋಗಿಲಬನದ ಮನೆಗಳಲ್ಲಿ ನದಿ ನೀರು ನುಗ್ಗಿದೆ.

ಹಳೆದಾಂಡೇಲಿ ಹತ್ತಿರದ ಸೇತುವೆ ಮೇಲೆ ಅಂದಾಜು 5 ಅಡಿ ನೀರು ಹರಿದು ಜೋಯಿಡಾ, ಕಾರವಾರಕ್ಕೆ ಸಂಪರ್ಕ ಕಡಿತವಾಗಿದೆ. ಹಳೆದಾಂಡೇಲಿಯ ಹಲವಾರ ಮನೆಗಳು ಜಲಾವೃತಗೊಂಡು ಹಾನಿಗೊಳಗಾಗಿವೆ.
ಅಲ್ಲದೇ ಬೈಲಪಾರ ಹಾಗೂ ದಾಂಡೇಲಪ್ಪ ನಗರದ ಮನೆಗಳಿಗೂ ನೀರು ನುಗ್ಗಿದೆ. ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೂಪಾ ಜಲಾಶಯದ ಒಳಹರಿವು ಹೆಚ್ಚಾಗಿ ಜಲಾಶಯ ತುಂಬಿದೆ. ಜಲಾಶಯದ ಗರಿಷ್ಠ ಮಟ್ಟ 564 ಮೀಟರ್‌ ದೆ. ಸದ್ಯ 563.5 ಮೀ.ವರೆಗೆ ನೀರು ತುಂಬಿದೆ. ಸುಮಾರು 58 ಸಾವಿರ ಕ್ಯೂಸೆಕ್‌ ನೀರಿನ ಒಳಹರಿವಿದ್ದು, ಅಷ್ಟೇ ಪ್ರಮಾಣದ ನೀರನ್ನು ಕಾಳಿ ನದಿಗೆ ಬಿಡಲಾಗುತ್ತಿದೆ.

ಮಳೆ ತಗ್ಗಿದರೆ ಮಾತ್ರ ಕಾಳಿ ಶಾಂತಳಾಗಬಹುದು, ನದಿ ತೀರಿದ ಜನರು ನಿರಾಳರಾಗಬಹುದು.


‘ನೆರೆ ಸಮೀಕ್ಷೆಗೆ ಮೋದಿ ಬರಬೇಕಾಗಿಲ್ಲ’

ನಾರಾಯಣಪುರ ಭರ್ತಿ, ರಾಯಚೂರಿಗೆ ಕಂಟಕ ಹುಬ್ಬಳ್ಳಿ: ನೆರೆ ಹಾವಳಿ ಪ್ರದೇಶಗಳನ್ನು ಪ್ರಧಾನಿ ನರೇಂದ್ರ ಮೋದಿ ಸಮೀಕ್ಷೆ ಮಾಡಬೇಕೆಂದೇನೂ ಇಲ್ಲ. ಈ ಬಗ್ಗೆ ಕೇಂದ್ರ
ಗೃಹ ಸಚಿವ ಅಮಿತ್‌ ಶಾ ಈಗಾಗಲೇ ಎಲ್ಲವನ್ನೂ ಗಮನಿಸಿದ್ದಾರೆ. ಇದು ಕಾಂಗ್ರೆಸ್‌ ಮುಖಂಡರಿಗೂ ಗೊತ್ತಿದೆ. ಅವರು ಸುಖಾ ಸುಮ್ಮನೆ ಈ ಸಂಗತಿಯನ್ನು ರಾಜಕೀಕರಣ
ಗೊಳಿಸುತ್ತಿದ್ದಾರೆ ಎಂದು ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ದೂರಿದ್ದಾರೆ.


ವಿಶೇಷ ಅರ್ಥ ಕಲ್ಪಿಸಬೇಡಿ:

‘‘ಸಂತ್ರಸ್ತರಿಗೆ 10 ಸಾವಿರ ನೀಡಿದ್ದೇ ದೊಡ್ಡದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌ ಈಶ್ವರಪ್ಪ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಸರಕಾರ ಮಾನವೀಯ ದೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ 25 ಸಾವಿರ ರೂ.ಗಳಿಂದ 1 ಲಕ್ಷದವರೆಗೆ ಪರಿಹಾರಧನ ಕೊಡುತ್ತಿದೆ’’, ಎಂದು ತಿಳಿಸಿದರು.

ನಾರಾಯಣಪುರ ಭರ್ತಿ, ರಾಯಚೂರಿಗೆ ಕಂಟಕ

ರಾಯಚೂರು: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ರಾಯಚೂರು ಜಿಲ್ಲೆಯ ಕೃಷ್ಣಾ ನದಿಯಲ್ಲಿ ಮತ್ತೆ ಪ್ರವಾಹ ಉಂಟಾಗಿದ್ದು, ನದಿ ತೀರದ
ಗ್ರಾಮಗಳಲ್ಲಿ ಆತಂಕ ಶುರುವಾಗಿದೆ. ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಜಾಗ್ರತೆಯಿಂದಿರುವಂತೆ ಜಿಲ್ಲಾಡಳಿತ
ಎಚ್ಚರಿಸಿದೆ. ನಾರಾಯಣಪುರ ಜಲಾಶಯದಿಂದ ಹೊರ ಬಿಡುವ ನೀರು 3 ಲಕ್ಷ ಕ್ಯೂಸೆಕ್‌ಗೆ ಏರಿಕೆಯಾದರೆ ರಾಯಚೂರು ಜಿಲ್ಲೆಯ ನದಿ ತೀರದಲ್ಲಿ ಸೋಮವಾರದ ವೇಳೆಗೆ ಪ್ರವಾಹ ತಲೆದೋರುವ ಸಾಧ್ಯತೆ ಇದೆ.

ನೆರೆಗೆ ಬೆದರಿ ರಾಮದುರ್ಗ ತೊರೆಯುತ್ತಿರುವ ಜನ

ಬೆಳಗಾವಿ: ಭಾನುವಾರ ಮಹಾರಾಷ್ಟ್ರದ ಕೃಷ್ಣಾ ಕಣಿವೆ ಪ್ರದೇಶದಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದ್ದು, ಚಿಕ್ಕೋಡಿ ತಾಲೂಕಿನಲ್ಲಿ ಕೃಷ್ಣಾ ನದಿ
ತೀರದ ಗ್ರಾಮಸ್ಥರು ನಿರಾಳರಾಗಿದ್ದಾರೆ. ಆದರೆ, ಮಲಪ್ರಭಾ ನದಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದ್ದರಿಂದ ರಾಮದುರ್ಗ ಹಾಗೂ ಸವದತ್ತಿ ತಾಲೂಕಿನ ನದಿ ತೀರದ ಗ್ರಾಮಗಳ ಜನರಿಗೆ ಪುನಃ ಪ್ರವಾಹ ಭೀತಿ ಎದುರಾಗಿದೆ.

ಮಲಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ನದಿ ಪಾತ್ರದ ಗ್ರಾಮಸ್ಥರು ತಮ್ಮ ಸರಂಜಾಮು ಸಮೇತ ಸುರಕ್ಷಿತ ಸ್ಥಳಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ರಾಮದುರ್ಗ ತಾಲೂಕು ಆಡಳಿತ ಅಧಿಕಾರಿಗಳ ಸಭೆ ನಡೆಸಿ ಹೈ ಅಲರ್ಟ್‌ ಘೋಷಣೆ ಮಾಡಿದೆ.

ಶಾಸಕರು ಹಾಗೂ ತಹಸೀಲ್ದಾರ ಸೂಚನೆ ಮೇರೆಗೆ ನೋಡಲ್‌ ಅಧಿಕಾರಿಗಳು ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ನದಿಗೆ ಮತ್ತೆ ನೀರು ಬರುತ್ತಿದ್ದು, ಸುರಕ್ಷಿತ
ಸ್ಥಳಕ್ಕೆ ತೆರಳುವಂತೆ ಜನರ ಮನವೊಲಿಸುತ್ತಿದ್ದಾರೆ.


ಕೊಚ್ಚಿ ಹೋದ ವೃದ್ಧೆ


ಖಾನಾಪುರ: ಪಟ್ಟಣದ ಮಲಪ್ರಭಾ ನದಿ ತೀರದಲ್ಲಿ ಭಾನುವಾರ ನೀರಿನ ಹರಿವು ವೀಕ್ಷಿಸಲು ತೆರಳಿದ್ದ ಸುಶೀಲಾ ಭರಮಾಜಿ ಬೋಗಾರ (85) ಕೊಚ್ಚಿ ಹೋಗಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಈಜು ಪರಿಣಿತರು ವೃದ್ಧೆಗಾಗಿ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

ಬೈಕ್ ಸವಾರರ ರಕ್ಷಣೆ


ಪ್ರವಾಹ ಏರುತ್ತಿರುವ ಸಂದರ್ಭದಲ್ಲಿ ಕೊಣ್ಣೂರು ಬಳಿ ಹುಬ್ಬಳ್ಳಿ-ವಿಜಯಪುರ ಹೆದ್ದಾರಿ ಮೇಲೆ ರಭಸವಾಗಿ ಹರಿಯುತ್ತಿದ್ದ ನೀರನ್ನು ದಾಟಲು ಯತ್ನಿಸಿ ಕೊಚ್ಚಿ ಹೋಗುತ್ತಿದ್ದ ಬೈಕ್‌ ಸವಾರರಿಬ್ಬರನ್ನು ಸಾರ್ವಜನಿಕರು ಕಾಪಾಡಿದ್ದಾರೆ. ಕಲ್ಲಾಪೂರ ಗ್ರಾಮದ ಉಮೇಶ್‌ ಹಾಗೂ ಪ್ರವೀಣ್‌ ಎಂಬ ಯುವಕರು ಬೈಕ್‌ ಹತ್ತಿ ಹರಿಯುವ ನೀರನ್ನು ದಾಟಲು ಹೋಗಿ ನೀರಿಗೆ ಬಿದ್ದು ಕೊಚ್ಚಿಕೊಂಡು
ಹೋಗುತ್ತಿದ್ದಾಗ ಜೆಸಿಬಿ ಚಾಲಕ ಸದ್ದಾಂ ಬೈಕ್‌ ಸವಾರರನ್ನು ರಕ್ಷಿಸಿದರು. ನೀರಿನ ಸೆಳೆವಿಗೆ ಕೊಚ್ಚಿ ಹೋಗುತ್ತಿದ್ದ ಬೈಕ್‌ನ್ನು ಮೂರ್ನಾಲ್ಕು ಜನ ಕೈ ಕೈ ಹಿಡಿದು ಮೇಲೆಕ್ಕೆ ಎಳೆದು ತಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ