ಆ್ಯಪ್ನಗರ

ಕೆಎಸ್ಸಾರ್ಟಿಸಿ ಬಸ್‌ಗಳಲ್ಲೂ ಸುರಕ್ಷತಾ ಉದ್ಘೋಷ

ಬಸ್ಸುಗಳಲ್ಲಿ ಪ್ರಯಾಣಿಸುವ ನಿಮ್ಮ ಸುರಕ್ಷತೆಯೇ ನಮ್ಮ ಪ್ರಥಮ ಆದ್ಯತೆ. ನೀವು ನಿಮ್ಮೂರಿನಲ್ಲಿ ಇಳಿಯುವವರೆಗೆ ನಿಮ್ಮ ಸುರಕ್ಷತೆಯ ಹೊಣೆ ನಮ್ಮದು. ನಿಮ್ಮ ಸಹಾಯಕ್ಕೆ ನಾವಿದ್ದೇವೆ. ಏನೇ ತೊಂದರೆಯಾದರೂ ನಮಗೆ ತಿಳಿಸಿ. ನಿಮ್ಮ ಪ್ರಯಾಣ ಸುಖಕರವಾಗಿರಲಿ

Vijaya Karnataka 30 Jun 2019, 5:00 am
ಬೆಂಗಳೂರು : ಬಸ್ಸುಗಳಲ್ಲಿ ಪ್ರಯಾಣಿಸುವ ನಿಮ್ಮ ಸುರಕ್ಷತೆಯೇ ನಮ್ಮ ಪ್ರಥಮ ಆದ್ಯತೆ. ನೀವು ನಿಮ್ಮೂರಿನಲ್ಲಿ ಇಳಿಯುವವರೆಗೆ ನಿಮ್ಮ ಸುರಕ್ಷತೆಯ ಹೊಣೆ ನಮ್ಮದು. ನಿಮ್ಮ ಸಹಾಯಕ್ಕೆ ನಾವಿದ್ದೇವೆ. ಏನೇ ತೊಂದರೆಯಾದರೂ ನಮಗೆ ತಿಳಿಸಿ. ನಿಮ್ಮ ಪ್ರಯಾಣ ಸುಖಕರವಾಗಿರಲಿ..!
Vijaya Karnataka Web safty announcement in ksrtc buses
ಕೆಎಸ್ಸಾರ್ಟಿಸಿ ಬಸ್‌ಗಳಲ್ಲೂ ಸುರಕ್ಷತಾ ಉದ್ಘೋಷ


ಇದು ಕೆಎಸ್‌ಆರ್‌ಟಿಸಿಯ ರಾತ್ರಿ ಪಾಳಿಯಲ್ಲಿ ಸಂಚರಿಸುವ ಬಸ್‌ಗಳಲ್ಲಿ ಕೇಳಿ ಬರುತ್ತಿರುವ ಉದ್ಘೋಷಗಳು. ನಿರ್ವಾಹಕರು ರಾತ್ರಿ ಬಸ್‌ಗಳಲ್ಲಿ ಪ್ರಯಾಣ ಆರಂಭಕ್ಕೆ ಮುನ್ನವೇ 'ಪ್ರಯಾಣಿಕರ ಸುರಕ್ಷತೆ ನಮ್ಮ ಆದ್ಯತೆ, ಮತ್ತು ಸುರಕ್ಷತೆಗಾಗಿ ಸಹಕರಿಸಿ'. ಪ್ರಯಾಣಿಕರು ತಮ್ಮ ಸಹ ಪ್ರಯಾಣಿಕರ ಜತೆ, ಅದರಲ್ಲಿಯೂ ವಿಶೇಷವಾಗಿ ಮಹಿಳೆಯರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಬಸ್ಸಿನಲ್ಲಿ ಯಾವುದೇ ಅಹಿತಕರ ಘಟನೆ ನಡೆದ ತಕ್ಷಣ ನಮ್ಮ ಗಮನಕ್ಕೆ ತನ್ನಿ' ಎಂಬಿತ್ಯಾದಿ ಘೋಷಣೆಗಳನ್ನು ಮಾಡುತ್ತಿದ್ದಾರೆ.

ಬಸ್‌ಗಳು ಮತ್ತು ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರು ಸುತ್ತೋಲೆ ಹೊರಡಿಸಿದ್ದಾರೆ. ಅದರಂತೆ ವಿಮಾನಗಳಲ್ಲಿ ಗಗನ ಸಖಿಯರು ಸುರಕ್ಷಾ ಕ್ರಮ ವಿವರಿಸುವಂತೆ ಕಂಡಕ್ಟರ್‌ಗಳು 'ನಾನು ಡ್ರೈವರ್‌ ಬಳಿಯೇ ಕುಳಿತಿರುತ್ತೇನೆ. ಯಾರಾದರೂ ತೊಂದರೆ ಅಥವಾ ಕೀಟಲೆ ಮಾಡಿದರೆ ತಕ್ಷಣ ನಮಗೆ ತಿಳಿಸಿ. ಅಕ್ಕಪಕ್ಕದ ಪ್ರಯಾಣಿಕರ ನೆರವು ಪಡೆಯಿರಿ' ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಈ ವ್ಯವಸ್ಥೆಯು ಜೂ. 27ರಿಂದಲೇ ಜಾರಿಗೆ ಬಂದಿದೆ. ಆಡಿಯೊ ಸೌಲಭ್ಯವಿರುವೆಡೆ ವ್ಯವಸ್ಥಾಪಕ ನಿರ್ದೇಶಕರ ಹೇಳಿಕೆಯ ರೆಕಾರ್ಡಿಂಗ್‌ ಅನ್ನು ಪ್ರಸಾರ ಮಾಡಲಾಗುತ್ತಿದೆ. ಆಡಿಯೊ ವ್ಯವಸ್ಥೆ ಇಲ್ಲದಿರುವೆಡೆ ನಿರ್ವಾಹಕರೇ ಘೋಷಣೆಗಳನ್ನು ಮಾಡುತ್ತಿದ್ದಾರೆ. ಈ ನೂತನ ವ್ಯವಸ್ಥೆಗೆ ಕವಯತ್ರಿ ದೀಪಾ ಗಿರೀಶ್‌(ದೀಪದ ಮಲ್ಲಿ)ಅವರ ಫೇಸ್‌ಬುಕ್‌ ಪೋಸ್ಟ್‌ ಕಾರಣ ಎಂಬುದು ವಿಶೇಷ.

''ಕೆಲಸದ ನಿಮಿತ್ತ ಜೂ. 26ರಂದು ಸಾಗರಕ್ಕೆ ಹೋಗಿದ್ದವಳು ರಾತ್ರಿ ಬೆಂಗಳೂರಿನ ಬಸ್‌ ಹತ್ತಿದೆ. ಮುಂಗಡ ಟಿಕೆಟ್‌ ಬುಕ್ಕಿಂಗ್‌ ಮಾಡುವಾಗ ಮಹಿಳೆಯರಿಗೆ ಕಾಯ್ದಿರಿಸಿದ ಸೀಟಿನಲ್ಲಿ ಕಿಟಕಿಯ ಪಕ್ಕದ್ದು ಭರ್ತಿಯಾಗಿತ್ತು. ಮುಂದಿನ ಸೀಟುಗಳಲ್ಲೂ ಕೆಲವು ಬ್ಲಾಕ್‌ ಆಗಿದ್ದವು. ಕೆಲವು ಬುಕ್‌ ಆಗಿದ್ದವು. ಹಾಗಾಗಿ, ಹಿಂದಿನಿಂದ ಮೂರನೆಯ ಕಿಟಕಿ ಪಕ್ಕದ ಸೀಟು ಬುಕ್‌ ಮಾಡಿದೆ.,''

''ಬಸ್‌ ಹತ್ತುವಾಗಲೇ ಕಂಡಕ್ಟರ್‌ ಮುಂದೆಯೇ ಕುಳಿತುಕೊಳ್ಳಿ ಖಾಲಿ ಇದೆ ಎಂದರು. ಪಕ್ಕದಲ್ಲಿ ಮತ್ತೊಬ್ಬರಿದ್ದ ಕಾರಣ ನಾನು ಬೇಡವೆಂದು ನನ್ನ ಸೀಟಿಗೆ ಹೋದೆ. ಆಗ ಬಹುಶಃ ನಾನೇ ಬಸ್ಸಿಗೆ ಕಡೆಯವಳು. ಸೀಟು ಬೆಂಡ್‌ ಮಾಡಿ ಮಲಗಿದೆ. ಸುಮಾರು 2 ಗಂಟೆ ಹೊತ್ತಿಗೆ ಹಿಂಬದಿ ಸೀಟಿನಿಂದ ಕೈಯೊಂದು ಕಿಟಕಿ ಮತ್ತು ಸೀಟಿನ ನಡುವಲ್ಲಿ ತೂರಿ ಬಂದು ಎಡಭಾಗದಿಂದ ನನ್ನನ್ನು ತಡವಿತು. ನಿದ್ರೆಯಲ್ಲಿದ್ದ ನನಗೆ ಕಿರಿಕಿರಿಯಾದರೂ ಕಣ್ಣು ಬಿಡಲಾಗಲಿಲ್ಲ. ಮಗ್ಗುಲು ಬದಲಿಸಿ, ಬಲಭಾಗಕ್ಕೆ ಸರಿದು ಕೂತೆ. ಇನ್ನು ಕೆಲವೇ ನಿಮಿಷಗಳಲ್ಲಿ ಪೀಡೆ ಬಲಭಾಗದಿಂದಲೂ ತಡವುದಿತ್ತು. ಕೋಪದಿಂದ ಸೀಟಿನಿಂದ ಎದ್ದು ಹಿಂದಕ್ಕೆ ತಿರುಗಿ ಕೊರಳಪಟ್ಟಿ ಹಿಡಿದು ಕೆನ್ನೆಗೆ ಬಾರಿಸಿದೆ. ಮುಂದಿದ್ದ ನಾಲ್ಕಾರು ಜನ ತಿರುಗಿ ನೋಡಿದ್ರು. ನಾನು ಧ್ವನಿ ಏರಿಸಿ ಬೈಯ್ಯತೊಡಗಿದೆ. ಅವ ತಲೆತಗ್ಗಿಸಿ ಎದ್ದು ಹೋಗಿ ಮುಂದೆಲ್ಲೋ ಕುಳಿತ. ಜನ ನನ್ನತ್ತ ತಿರುಗಿ ನೋಡುತ್ತಾ ಗುಸುಗುಸು ಮಾತನಾಡಿಕೊಂಡರು. ಮುಂದೆ ಖಾಲಿ ಇದ್ದರೂ ಹಿಂಬದಿಯ ಸೀಟಿನಲ್ಲಿ ಕೂತ ನನ್ನ ದಾಷ್ಟ್ಯಕ್ಕೆ ಹೀಗೇ ಆಗಬೇಕು ಎನ್ನುವಂತಹ ಮಾತುಗಳೂ ಕೇಳಿಸಿತು. ಕೆಲವರ ನಿದ್ರೆಗೆ ಚ್ಯುತಿ ಬಂದದ್ದಕ್ಕೆ ಸಿಡುಕುತ್ತಾ ಒರಗಿದರು''.

ಸುತ್ತಲಿದ್ದ ಸಮಾಜ ಅರ್ಥಾತ್‌ ಆ ಬಸ್ಸಿನಲ್ಲಿದ್ದ ಜನ ಧ್ವನಿಗೂಡಿಸುವುದಿರಲಿ, ಏನು ಎತ್ತ ಎಂದು ವಿಚಾರಿಸಲಿಲ್ಲ. ನನ್ನ ಕಾಳಜಿ ದಿನಂಪತ್ರಿ ಹಗಲು ರಾತ್ರಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಲಕ್ಷಾಂತರ ಹೆಣ್ಣು ಮಕ್ಕಳದ್ದು. ನಮ್ಮ ಸಮಾಜದಲ್ಲಿ ಇಂಥಹ ಘಟನೆಗಳನ್ನೆಲ್ಲಾ ತೀರಾ ಸಣ್ಣದ್ದು ಎಂದೇ ಕರೆಯಲಾಗುತ್ತದೆ' ಎಂದು ದೀಪಾ ಗಿರೀಶ್‌ ಅವರು ತಮಗಾದ ಕೆಟ್ಟ ಅನುಭವವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.

ದೀಪಾ ಗಿರೀಶ್‌ ಅವರ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಹಲವರು ಪ್ರತಿಕ್ರಿಯಿಸಿ, ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿರುವ ಕೆಎಸ್‌ಆರ್‌ಟಿಸಿಯು ಜೂ. 27ರಿಂದಲೇ ರಾತ್ರಿ ಬಸ್‌ಗಳಲ್ಲಿ 'ತುರ್ತು ಸಂದರ್ಭಗಳಲ್ಲಿ ಚಾಲಕ, ನಿರ್ವಾಹಕರ ನೆರವು ಪಡೆದುಕೊಳ್ಳಿ' ಎಂದು ಉದ್ಘೋಷಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ