ಆ್ಯಪ್ನಗರ

ಸ್ಯಾಟಲೈಟ್‌ನಿಂದ ಪಾಕಿಸ್ತಾನದ ಇಂಚಿಂಚೂ ಗೋಚರ

ಭಾರತದ 'ಸಂಯೋಜಿತ ಗಡಿ ನಿರ್ವಹಣೆ ವ್ಯವಸ್ಥೆ'ಯಿಂದ ಪಾಕಿಸ್ತಾನದ ವರಾಂಡಗಳನ್ನಷ್ಟೇ ಅಲ್ಲ, ಮನೆ, ಕೊಠಡಿಗಳನ್ನು ನೋಡಲು ಸಾಧ್ಯವಾಗಿದೆ ಎಂದು ಕೇಂದ್ರ ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್‌ ಹೇಳಿದರು.

Vijaya Karnataka 18 Jan 2019, 5:00 am
ಬೆಂಗಳೂರು : ಭಾರತದ 'ಸಂಯೋಜಿತ ಗಡಿ ನಿರ್ವಹಣೆ ವ್ಯವಸ್ಥೆ'ಯಿಂದ ಪಾಕಿಸ್ತಾನದ ವರಾಂಡಗಳನ್ನಷ್ಟೇ ಅಲ್ಲ, ಮನೆ, ಕೊಠಡಿಗಳನ್ನು ನೋಡಲು ಸಾಧ್ಯವಾಗಿದೆ ಎಂದು ಕೇಂದ್ರ ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್‌ ಹೇಳಿದರು.
Vijaya Karnataka Web satellite shows every activity of pakistan
ಸ್ಯಾಟಲೈಟ್‌ನಿಂದ ಪಾಕಿಸ್ತಾನದ ಇಂಚಿಂಚೂ ಗೋಚರ


ಬಾಹ್ಯಾಕಾಶ ಅಧ್ಯಯನ, ನ್ಯಾನೋಸ್ಯಾಟಲೈಟ್‌ ತಂತ್ರಜ್ಞಾನದ ಕುರಿತು ವಿದೇಶಿ ಬಾಹ್ಯಾಕಾಶ ಸಂಸ್ಥೆಗಳ ಅಧಿಕಾರಿಗಳು, ಎಂಜಿನಿಯರ್‌ಗಳಿಗೆ ತರಬೇತಿ ನೀಡುವ 'ಯುನಿಸ್ಪೇಸ್‌ ನ್ಯಾನೋಸ್ಯಾಟಲೈಟ್‌ ಅಸೆಂಬ್ಲಿ ಆ್ಯಂಡ್‌ ಟ್ರೈನಿಂಗ್‌' ಯೋಜನೆ ಉದ್ಘಾಟಿಸಿ ಅವರು ಗುರುವಾರ ಮಾತನಾಡಿದರು.

''ಇಸ್ರೊ ಸಂಶೋಧನೆಗಳು ಪ್ರತಿನಿತ್ಯದ ಜನರ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತಿವೆ. ಇಸ್ರೊಗೆ ಹಿಂದೆಂದು ನೀಡದಷ್ಟು ಹೆಚ್ಚಿನ ವಿಶೇಷ ಗಮನವನ್ನು ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರಕಾರ ನೀಡಿದೆ. ಇಸ್ರೊ ಕೇಂದ್ರ ಸ್ಥಾನ ದಿಲ್ಲಿಯಿಂದ ಹೊರಗಿದ್ದರೂ, ಪ್ರಧಾನಿಯವರ ಗಮನದಲ್ಲೇ ಇದೆ. ಮೂಲಸೌಕರ್ಯ ಅಭಿವೃದ್ಧಿ, ರಸ್ತೆ ನಿರ್ಮಾಣ, ನರೇಗಾ ಯೋಜನೆಗಳಲ್ಲೂ ಇಸ್ರೊ ತಂತ್ರಜ್ಞಾನ ಬಳಸಲಾಗುತ್ತಿದೆ. ರಾಕೆಟ್‌ ಹೇಗೆ ಉಡಾವಣೆ ಮಾಡಲಾಗುತ್ತದೆ ಮತ್ತು ಸ್ಯಾಟಲೈಟ್‌ ಹೇಗೆ ಕೆಲಸ ಮಾಡುತ್ತವೆ ಎಂದು ಜನರು ತಿಳಿಯದೇ ಇದ್ದರೂ ಪ್ರತಿಯೊಂದು ಮನೆಗೂ ಬಾಹ್ಯಾಕಾಶ ತಂತ್ರಜ್ಞಾನ ತಲುಪಿದೆ. ಅಲ್ಲದೇ, ವ್ಯವಸ್ಥೆಯಲ್ಲಿ ಪಾರದರ್ಶಕತೆ ಮೂಡಿಸಲು ಸಾಧ್ಯವಾಗಿದೆ. ಬಾಹ್ಯಕಾಶ ಸುರಕ್ಷತೆ ಮತ್ತು ಮುನ್ಸೂಚನೆಗಳ ಕುರಿತು ಇಸ್ರೊ ಎದುರು ಮುಂದಿನ ದಿನಗಳಲ್ಲಿ ಸವಾಲುಗಳಿವೆ'' ಎಂದು ಜಿತೇಂದ್ರ ಸಿಂಗ್‌ ಹೇಳಿದರು.

''ನೀಲ್‌ ಆರ್ಮ್‌ಸ್ಟ್ರಾಂಗ್‌ ಅವರು 1969ರಲ್ಲೇ ಚಂದ್ರನ ಮೇಲೆ ಕಾಲಿಟ್ಟಿದ್ದರೂ, ನೀರು ಇರುವಿಕೆಯನ್ನು ಪತ್ತೆ ಮಾಡಲಾಗಲಿಲ್ಲ. ಆದರೆ, ಇಸ್ರೊದ ಚಂದ್ರಯಾನ-1 ಯೋಜನೆಯು ಚಂದ್ರನ ಮೇಲೆ ನೀರಿತ್ತು ಎಂಬ ಸಂದೇಶ ನೀಡಿದೆ. ಬರುವ ದಿನಗಳಲ್ಲಿ ಗಗನಯಾನ ಯೋಜನೆ ಯಶಸ್ಸಿನ ಮೂಲಕ ಮತ್ತೊಂದು ಮೈಲುಗಲ್ಲು ಸಾಧ್ಯವಾಗಲಿದೆ'' ಎಂದರು.

'' ದಶಕಗಳ ಹಿಂದೆಯೇ ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಗಿದ್ದ ಹಲವು ದೇಶಗಳನ್ನು ಹಿಂದಿಕ್ಕಿದ ಭಾರತ ಮುಂದೆ ಸಾಗುತ್ತಿದೆ. ಈ ವಿಚಾರದಲ್ಲಿ ದೇಶ ವಿಶ್ವದ ಶಕ್ತಿಯಾಗುತ್ತಿದೆ'' ಎಂದು ಹೇಳಿದರು.

ಇಸ್ರೊ ಅಧ್ಯಕ್ಷ ಕೆ.ಶಿವನ್‌, ಯುಆರ್‌ಎಸ್‌ಎಸಿ ನಿರ್ದೇಶಕ ಪಿ. ಉನ್ನಿಕೃಷ್ಣನ್‌ ಮತ್ತಿತರರಿದ್ದರು.

17 ರಾಷ್ಟ್ರಗಳ 30 ಜನರಿಗೆ ತರಬೇತಿ

'ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶ ಸಂಶೋಧನೆ ಮತ್ತು ಅಧ್ಯಯನ' ಕುರಿತು ವಿಶ್ವಸಂಸ್ಥೆಯ ಮೊದಲ ಸಮ್ಮೇಳನದ 50ನೇ ವಾರ್ಷಿಕೋತ್ಸವ ಪ್ರಯುಕ್ತ ಯು.ಆರ್‌ ರಾವ್‌ ಸ್ಪೇಸ್‌ ಸೆಂಟರ್‌ನಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಇಸ್ರೊ ಅಧ್ಯಕ್ಷ ಶಿವನ್‌ ಹೇಳಿದರು.

''ಮೊದಲ ಬ್ಯಾಚ್‌ನಲ್ಲಿ ಬ್ರೆಜಿಲ್‌, ಚಿಲಿ, ಈಜಿಪ್ಟ್‌, ಮಲೇಶಿಯಾ, ಮೆಕ್ಸಿಕೊ, ಪೋರ್ಚುಗಲ್‌ ಸೇರಿ ಒಟ್ಟು 17 ರಾಷ್ಟ್ರಗಳ 30 ಜನ ಯೋಜನೆಯ ಅಡಿ ಸ್ಯಾಟಲೈಟ್‌ ಜೋಡಣೆ ಕುರಿತು ತರಬೇತಿ ಪಡೆಯಲಿದ್ದಾರೆ.ಅವರು ತಮ್ಮ ದೇಶಗಳಿಗೆ ಮರಳಿ ಅಲ್ಲೂ ತಂತ್ರಜ್ಞಾನ ಅಭಿವೃದ್ಧಿ ಸಂಶೋಧನೆಯಲ್ಲಿ ತೊಡಗಲು ಸಾಧ್ಯವಾಗಲಿದೆ. ಒಟ್ಟು 34 ರಾಷ್ಟ್ರಗಳ 87 ಜನರು ಯೋಜನೆಯಡಿ ತರಬೇತಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆ, 30 ಜನ ಮಾತ್ರ ಆಯ್ಕೆಯಾಗಿದ್ದಾರೆ'' ಎಂದು ಕೆ.ಶಿವನ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ