ಆ್ಯಪ್ನಗರ

ಪರಿಶಿಷ್ಟರ ಬಡ್ತಿ ಮೀಸಲು ರಕ್ಷಣೆಗೆ ಶಾಸನ ವಿಶೇಷ ರಾಜ್ಯಪತ್ರ

ಪರಿಶಿಷ್ಟರ ಬಡ್ತಿ ಮೀಸಲಾತಿ ರದ್ದುಪಡಿಸಿದ ಸುಪ್ರೀಂ ಕೋರ್ಟ್‌ ಆದೇಶದಿಂದ ಈ ಸಮುದಾಯದ ಅಧಿಕಾರಿ ವರ್ಗ ಹಿಂಬಡ್ತಿಗೆ ಒಳಗಾಗುವುದನ್ನು ತಪ್ಪಿಸಿ, ಅವರ ಹಿತಾಸಕ್ತಿ ಕಾಯಲು ರಾಜ್ಯ ಸರಕಾರ ರೂಪಿಸಿದ್ದ ಶಾಸನ ಶನಿವಾರ ಜಾರಿಗೆ ಬಂದಿದೆ.

Vijaya Karnataka 24 Jun 2018, 7:11 am
ಬೆಂಗಳೂರು: ಪರಿಶಿಷ್ಟರ ಬಡ್ತಿ ಮೀಸಲಾತಿ ರದ್ದುಪಡಿಸಿದ ಸುಪ್ರೀಂ ಕೋರ್ಟ್‌ ಆದೇಶದಿಂದ ಈ ಸಮುದಾಯದ ಅಧಿಕಾರಿ ವರ್ಗ ಹಿಂಬಡ್ತಿಗೆ ಒಳಗಾಗುವುದನ್ನು ತಪ್ಪಿಸಿ, ಅವರ ಹಿತಾಸಕ್ತಿ ಕಾಯಲು ರಾಜ್ಯ ಸರಕಾರ ರೂಪಿಸಿದ್ದ ಶಾಸನ ಶನಿವಾರ ಜಾರಿಗೆ ಬಂದಿದೆ.
Vijaya Karnataka Web Vidhanasoudha


ಈ ಸಂಬಂಧ ರಾಜ್ಯ ವಿಧಾನಮಂಡಲ ರಚಿಸಿದ್ದ 'ಕರ್ನಾಟಕ (ರಾಜ್ಯದ ಸಿವಿಲ್‌ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಬಡ್ತಿ ಹೊಂದಿರುವ ಸರಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆ ವಿಸ್ತರಿಸುವ ವಿಧೇಯಕ -2017' ಕ್ಕೆ ರಾಷ್ಟ್ರಪತಿ ಕಳೆದ ವಾರ ಒಪ್ಪಿಗೆ ನೀಡಿದ್ದರು. ಇದೀಗ, ಕರ್ನಾಟಕ ರಾಜ್ಯಪತ್ರ ಹೊರಡಿಸುವ ಮೂಲಕ ಶಾಸನ ಸ್ವರೂಪ ಪಡೆದುಕೊಂಡಿದೆ.

ಇದರೊಂದಿಗೆ, ಬಿ.ಕೆ.ಪವಿತ್ರ ಪ್ರಕರಣದಲ್ಲಿ ಕಳೆದ 2017ರ ಫೆಬ್ರವರಿ 9ರಂದು ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠ ನೀಡಿದ್ದ ತೀರ್ಪಿನಿಂದ ಹಿಂಬಡ್ತಿಗೆ ಒಳಗಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿ ವರ್ಗಕ್ಕೆ ತುಸು ಸಮಾಧಾನ ಸಿಕ್ಕಿದೆ.

ಪ್ರಸ್ತುತ ಸುಪ್ರೀಂ ಕೋರ್ಟ್‌ ಆದೇಶದಂತೆ ರಾಜ್ಯ ಸರಕಾರದ ಎಲ್ಲ ಇಲಾಖೆಗಳಲ್ಲಿ ಸೇವಾಜೇಷ್ಠತೆ ಪಟ್ಟಿ ಸಿದ್ಧಪಡಿಸಿ ಹಿಂಬಡ್ತಿ ಮತ್ತು ಮುಂಬಡ್ತಿ ಪ್ರಕ್ರಿಯೆ ನಿರ್ವಹಿಸಲಾಗಿದೆ. ಇದೀಗ, ಹೊಸದಾಗಿ ಶನಿವಾರದಿಂದ ಅಸ್ತಿತ್ವ ಪಡೆದುಕೊಂಡಿರುವ ಶಾಸನದಂತೆ ಮತ್ತೊಮ್ಮೆ ಜೇಷ್ಟತಾ ಪಟ್ಟಿ ಸಿದ್ಧಪಡಿಸುವ ಸವಾಲು ಸರಕಾರಕ್ಕೆ ಎದುರಾಗಲಿದೆ. ಜತೆಗೆ, ಆಕ್ಷೇಪಣೆಗೂ ಆಹ್ವಾನಿಸಬೇಕಿದೆ.

ಈ ಮಧ್ಯೆ, ಕೋರ್ಟ್‌ ತೀರ್ಪಿನಿಂದ ಬಾಧಿತರಾಗುವ ಪರಿಶಿಷ್ಟ ಅಧಿಕಾರಿ ವರ್ಗದ ಹಿತಾಸಕ್ತಿ ಕಾಯಲು ಸರಕಾರ ನಡೆಸುತ್ತಿದ್ದ ಪರ್ಯಾಯ ಪ್ರಯತ್ನಗಳಿಗೆ ಅಂತಿಮವಾಗಿ ತನ್ನ ಸಮ್ಮತಿ ಬೇಕು ಎಂಬುದನ್ನು ಸುಪ್ರೀಂ ಕೋರ್ಟ್‌ ಈ ಮೊದಲೇ ಸ್ಪಷ್ಟಪಡಿಸಿದ್ದು, ಪ್ರಕರಣ ಜುಲೈ 4 ರಂದು ವಿಚಾರಣೆಗೆ ಬರುತ್ತಿದೆ. ನೂತನ ಶಾಸನವನ್ನು ಕೋರ್ಟ್‌ ಸಿಂಧುತ್ವ ನೀಡುತ್ತಾ ಅಥವಾ ಅಸಿಂಧು ಎಂದು ಸ್ಪಷ್ಟಪಡಿಸುತ್ತಾ ಎಂಬುದು ಕುತೂಹಲ ಕೆರಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ