ಆ್ಯಪ್ನಗರ

ಎಸ್‌ಸಿ, ಎಸ್‌ಟಿ ಕಾರ್ಯಕ್ರಮದಲ್ಲಿ ಹೊಸತನ ತರಲು ಸಿಎಂ ಸೂಚನೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ರೂಪಿಸಿದ ಯೋಜನೆಗಳಲ್ಲಿ ಹೊಸತನ ತಂದು ಅನುಷ್ಠಾನಗೊಳಿಸಬೇಕು. ಜತೆಗೆ ಫಲಾನುಭವಿಗಳಿಗೆ ಲಾಭವಾಗಿರುವ ಬಗ್ಗೆ ಮೌಲ್ಯಮಾಪನ ನಡೆಸಬೇಕು ಎಂದು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.

Vijaya Karnataka Web 5 Jun 2019, 5:00 am
ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ರೂಪಿಸಿದ ಯೋಜನೆಗಳಲ್ಲಿ ಹೊಸತನ ತಂದು ಅನುಷ್ಠಾನಗೊಳಿಸಬೇಕು. ಜತೆಗೆ ಫಲಾನುಭವಿಗಳಿಗೆ ಲಾಭವಾಗಿರುವ ಬಗ್ಗೆ ಮೌಲ್ಯಮಾಪನ ನಡೆಸಬೇಕು ಎಂದು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.
Vijaya Karnataka Web 0406-2-2-0VVV (5)


ಎಸ್‌ಸಿ, ಎಸ್‌ಟಿ ಉಪಯೋಜನೆಗೆ ಸಂಬಂಧಿಸಿದ ರಾಜ್ಯ ಅಭಿವೃದ್ಧಿ ಪರಿಷತ್ತಿನ ಸಭೆಯನ್ನು ಡಿಸಿಎಂ ಜಿ.ಪರಮೇಶ್ವರ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಸಮ್ಮುಖ ವಿಧಾನಸೌಧದಲ್ಲಿ ಮಂಗಳವಾರ ನಡೆಸಿದ ಅವರು, ''ಪರಿಶಿಷ್ಟರ ಯೋಜನೆಗಳಲ್ಲಿ ನಾವೀನ್ಯತೆಯ ಕೊರತೆಯಿದೆ. ಇದನ್ನು ನೀಗಿಸಲು ಕ್ರಮ ಕೈಗೊಳ್ಳಬೇಕು. ಈ ಯೋಜನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು,'' ಎಂದರು.

''ಎಸ್‌ಸಿ, ಎಸ್‌ಟಿಗಳಿಗೆ ಶಕ್ತಿ ತುಂಬಲು ಸರಕಾರ ಬದ್ಧವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಸಮುದಾಯದ ಅಭಿವೃದ್ಧಿಗೆ 1,40,000 ಕೋಟಿ ರೂ. ಒದಗಿಸಲಾಗಿದೆ. ಆದರೆ, ಈ ಯೋಜನೆಯ ಲಾಭ ಪಡೆದವರೇ ಮತ್ತೆ ಮತ್ತೆ ಇದರ ಉಪಯೋಗ ತೆಗೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಹಾಗಾಗಿ ಪ್ರಗತಿ ಪರಿಶೀಲನೆ ಸಭೆಗೆ ಬರುವಾಗ ಫಲಾನುಭವಿಗಳ ಸಂಪೂರ್ಣ ವಿವರ ತರಬೇಕು. ಯೋಜನೆ ಗುರಿ ತಲುಪುವಲ್ಲಿ ಎದುರಾಗಿರುವ ಅಡೆತಡೆ ನಿವಾರಿಸಬೇಕು. ಇಲಾಖಾವಾರು ಕಾರ್ಯಕ್ರಮ ರೂಪಿಸುವಾಗ ಶಿಕ್ಷಣ, ಆರೋಗ್ಯ, ವಸತಿ ಕ್ಷೇತ್ರಗಳಿಗೆ ಆದ್ಯತೆ ನೀಡಿ ಸಾಮಾಜಿಕ ಬದ್ಧತೆ ತೋರಬೇಕು,'' ಎಂಬ ನಿರ್ದೇಶನ ಕೊಟ್ಟರು.

ಶಿಕ್ಷೆ ಖಚಿತ

''ಪರಿಶಿಷ್ಟರ ವಿಶೇಷ ಯೋಜನೆ ಅನುಷ್ಠಾನದಲ್ಲಿ ನಿರಾಸಕ್ತಿ ತೋರುವ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ. ಅಂಥವರನ್ನು ಜೈಲಿಗೆ ಕಳುಹಿಸುವುದಕ್ಕೂ ನಿಯಮದಲ್ಲಿ ಈಗ ಅವಕಾಶವಿದೆ. ಈ ನಿಟ್ಟಿನಲ್ಲಿ ಗಂಭೀರ ಪರಿಶೀಲನೆ ಮಾಡಲಾಗುವುದು. 2018-19ರಲ್ಲಿ ಈ ಯೋಜನೆಯಡಿ ಹಂಚಿಕೆಯಾದ 29,723.57 ಕೋಟಿ ರೂ. ಅನುದಾನದಲ್ಲಿ ಶೇ.94ರಷ್ಟು ಪ್ರಗತಿ ಸಾಧಿಸಲಾಗಿದೆ. ಹಣಕಾಸು, ಹಿಂದುಳಿದ ವರ್ಗಗಳ ಕಲ್ಯಾಣ, ಪ್ರವಾಸೋದ್ಯಮ, ಆಹಾರ ಮತ್ತು ನಾಗರಿಕ ಪೂರೈಕೆ, ಐಟಿ, ಬಿಟಿ, ಕೈಗಾರಿಕೆ, ನಗರಾಭಿವೃದ್ಧಿ, ಕೌಶಲಾಭಿವೃದ್ಧಿ, ಉದ್ಯೋಗ ತರಬೇತಿ ಇಲಾಖೆಗಳಲ್ಲಿ ಶೇ.100ರಷ್ಟು ಗುರಿ ತಲುಪಲಾಗಿದೆ. ತೋಟಗಾರಿಕೆ, ಸಾರಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವ ಸಬಲೀಕರಣ ಇಲಾಖೆಗಳಲ್ಲಿ ಶೇ.80ರಷ್ಟು ವೆಚ್ಚವಾಗಿದೆ. ವಾರ್ತಾ ಇಲಾಖೆಯಲ್ಲಿ ಅತ್ಯಂತ ಕಡಿಮೆ ಅನುದಾನ ಬಳಕೆಯಾಗಿದೆ. ಈ ಬಗ್ಗೆ ಸಂಬಂಧಿತ ಇಲಾಖೆಗಳಿಗೆ ಪತ್ರ ಬರೆದು ಸಮಜಾಯಿಷಿ ಪಡೆಯಲಾಗಿದೆ,'' ಎಂದು ಸಭೆ ಬಳಿಕ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

''ಪ್ರಗತಿ ಕಾಲೊನಿ ಅಭಿವೃದ್ಧಿ, ಅಂಬೇಡ್ಕರ್‌ ಆವಾಸ್‌ ಮನೆ ನಿರ್ಮಾಣ, ಎಸ್‌ಸಿ, ಎಸ್‌ಟಿ ಹಾಸ್ಟೆಲ್‌ಗಳು ಮತ್ತು ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ಒದಗಿಸಲು ಈ ಬಾರಿ ಪ್ರಾಶಸ್ತ್ಯ ಕೊಡಲಾಗುವುದು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೂ ಒತ್ತು ಕೊಡಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ಕೊಡಲಾಗಿದೆ. ವಿಶೇಷ ಯೋಜನೆ ಫಲಾನುಭವಿಗಳಿಗೆ ತಲುಪಿರುವ ಬಗ್ಗೆ ಮೌಲ್ಯಮಾಪನ ಕೈಗೊಳ್ಳಲು ಸಂಸ್ಥೆಯೊಂದನ್ನು ಗೊತ್ತು ಪಡಿಸಲಾಗಿದ್ದು, ಶೀಘ್ರದಲ್ಲೆ ಈ ಪ್ರಕ್ರಿಯೆ ಪ್ರಾರಂಭವಾಗಲಿದೆ,'' ಎಂದರು.


ಹೊಸ ಕಾರ್ಯಕ್ರಮಗಳು

25ಎಚ್‌ಪಿ ಟ್ರ್ಯಾಕ್ಟರ್‌ ಖರೀದಿಗೆ 3 ಲಕ್ಷ ರೂ. ಸಹಾಯಧನ

1 ಎಕರೆಯಲ್ಲಿ ಪಾಲಿ ಹೌಸ್‌ ನಿರ್ಮಿಸಲು ಘಟಕ ವೆಚ್ಚದ ಶೇ.90ರಷ್ಟು ಸಹಾಯಧನ

ಮೀನು ಮಾರಾಟ ಮಳಿಗೆ ಸ್ಥಾಪಿಸಲು 10 ಲಕ್ಷ ವೆಚ್ಚವಿದ್ದರೆ ಶೇ.70ರಷ್ಟು ಮೊತ್ತ ಭರಿಸಲಾಗುತ್ತದೆ

ಮೀಸಲು ಕ್ಷೇತ್ರಗಳಲ್ಲಿ ಬಸ್‌ ನಿಲ್ದಾಣ/ತಂಗುದಾಣ ನಿರ್ಮಾಣ

ಮಹಿಳಾ ಸ್ವಸಹಾಯ ಸಂಘಗಳಿಗೆ 1-5ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ

ಬಡವರ ಬಂಧು ಮಾದರಿಯಲ್ಲಿ ಮಹಿಳೆಯರಿಗೆ 10 ಸಾವಿರ ರೂ. ಸಹಾಯಧನ

ಕ್ರೈಸ್‌ ವಸತಿ ಶಾಲೆ, ಆಶ್ರಮ ಶಾಲೆಗಳಿಗೆ ಕ್ಷೀರಭಾಗ್ಯ ವಿಸ್ತರಣೆ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ