ಆ್ಯಪ್ನಗರ

ದಳದ ಚೌಕಾಸಿಗೆ ಬಗ್ಗದ ಕೈಪಡೆ: ಕೆಪಿಸಿಸಿ ಚುನಾವಣಾ ಸಮಿತಿಯಲ್ಲಿ ಪ್ರಬಲ ವಿರೋಧ

ಲೋಕಸಭೆ ಚುನಾವಣೆ ಸಿದ್ಧತೆ ಹಾಗೂ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಗುರುವಾರ ಚುನಾವಣಾ ಸಮಿತಿ ಸಭೆ ನಡೆಯಿತು. ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ.ಪರಮೇಶ್ವರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ್‌ ಸೇರಿ ಹಲವು ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು.

Vijaya Karnataka 8 Mar 2019, 7:45 am
ಬೆಂಗಳೂರು: ಸಮ್ಮಿಶ್ರ ಸರಕಾರದ ಪಾಲುದಾರ ಜೆಡಿಎಸ್‌ಗೆ ಸಿಂಹಪಾಲು ಕ್ಷೇತ್ರಗಳನ್ನು ಬಿಟ್ಟುಕೊಡುವುದಕ್ಕೆ ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ಪ್ರಬಲ ವಿರೋಧ ವ್ಯಕ್ತವಾಗಿದೆ. ಜತೆಗೆ ಹಾಲಿ ಸಂಸದರಿರುವ 10 ಕ್ಷೇತ್ರ ಉಳಿಸಿಕೊಳ್ಳಬೇಕೆಂಬ ನಿಲುವಿಗೆ ಬದ್ಧವಾಗಿರಲೂ ತೀರ್ಮಾನಿಸಲಾಗಿದೆ. ಆದರೆ, ಈ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಹೈಕಮಾಂಡ್‌ ವಿವೇಚನೆಗೆ ಬಿಡಲು ತೀರ್ಮಾನಿಸಲಾಗಿದೆ.
Vijaya Karnataka Web Meeting


ಲೋಕಸಭೆ ಚುನಾವಣೆ ಸಿದ್ಧತೆ ಹಾಗೂ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಗುರುವಾರ ಚುನಾವಣಾ ಸಮಿತಿ ಸಭೆ ನಡೆಯಿತು. ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ.ಪರಮೇಶ್ವರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ್‌ ಸೇರಿ ಹಲವು ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು.

ಲೋಕಸಭಾ ಚುನಾವಣೆ ಸಿದ್ಧತೆಗೆ ಸಂಬಂಧಿಸಿ ಕೆಪಿಸಿಸಿ ಚುನಾವಣಾ ಸಮಿತಿ ನಡೆಸಿದ ಎರಡನೇ ಸಭೆ ಇದು. ಕಳೆದ ಬಾರಿ ಮೋದಿ ಅಲೆಯ ನಡುವೆಯೂ ಉತ್ತಮ ಸಾಧನೆ ತೋರಿದ ರಾಜ್ಯ ಕರ್ನಾಟಕ. ಹೀಗಾಗಿ ಹಾಲಿ ಸಂಸದರಿಗೆ ಮತ್ತೆ ಟಿಕೆಟ್‌ ನೀಡಬೇಕು ಎಂದು ಮೊದಲ ಸಭೆಯಲ್ಲೂ ನಿರ್ಧಾರ ಕೈಗೊಳ್ಳಲಾಗಿತ್ತು. ಎರಡನೇ ಸಭೆಯೂ ಅದೇ ನಿರ್ಧಾರಕ್ಕೆ ಆತುಕೊಂಡಿತು.

ಕುಸ್ತಿ ಎಲ್ಲಿ?

ಕಾಂಗ್ರೆಸ್‌ ಸಂಸದರಿರುವ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಕ್ಷೇತ್ರಗಳನ್ನು ಜೆಡಿಎಸ್‌ ಕೇಳುತ್ತಿದೆ. ಈ ಪೈಕಿ 1 ಅಥವಾ 2 ಕ್ಷೇತ್ರ ಬಿಟ್ಟು ಕೊಡುವುದು ಅನಿವಾರ್ಯವಾಗಬಹುದಾದ ಹಿನ್ನೆಲೆಯಲ್ಲಿ ದೋಸ್ತಿಗಳ ನಡುವೆ ಕುಸ್ತಿ ನಿಶ್ಚಿತ ಎನ್ನಲಾಗುತ್ತಿದೆ.

ಹಳೆ ಮೈಸೂರಿನ ಆತಂಕ


ಮಂಡ್ಯ,ಮೈಸೂರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಕ್ಕೂ ಸ್ಥಳೀಯರ ವಿರೋಧವಿದೆ. ಆದರೂ ಮೈತ್ರಿಧರ್ಮದ ಅನುಸಾರ ಆ ಎರಡು ಕ್ಷೇತ್ರಗಳನ್ನು ಇದೊಂದು ಬಾರಿ ಬಿಡಬಹುದೇ ಹೊರತೂ, ಮೈಸೂರು ಸೇರಿ ಯಾವುದೇ ಇತರ ಕೇತ್ರಗಳನ್ನು ಧಾರೆ ಎರೆಯುವುದು ಸಮಂಜಸವಲ್ಲ ಎಂಬ ಚರ್ಚೆ ನಡೆಯಿತು.

ಚುನಾವಣಾ ಸಮಿತಿ ಸಭೆಯಲ್ಲಿ ಅತ್ಯಂತ ರಕ್ಷಣಾತ್ಮಕ ಆಟವಾಡಿದ ಪ್ರದೇಶ ಕಾಂಗ್ರೆಸ್‌ನ ನಾಯಕರು, ಕಾಂಗ್ರೆಸ್‌ನ 10 ಸಂಸದರು, ಜೆಡಿಎಸ್‌ನ 2 ಸಂಸದರಿರುವ ಕ್ಷೇತ್ರಗಳು ಹಾಗೂ ಶಿವಮೊಗ್ಗ (ಶಿವಮೊಗ್ಗವನ್ನು ಜೆಡಿಎಸ್‌ಗೆ ನೀಡಲು ಒಮ್ಮತ ಮೂಡಿದೆ) ಹೊರತು ಪಡಿಸಿ ಇತರ 15 ಕ್ಷೇತ್ರಗಳ ಕುರಿತಷ್ಟೇ ಚರ್ಚಿಸಿದರು. ಪ್ರತಿ ಕ್ಷೇತ್ರಗಳಲ್ಲಿ 3 ರಿಂದ 5 ಸಂಭಾವ್ಯರಿದ್ದು ಈ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನಿಸಲು ತೀರ್ಮಾನಿಸಲಾಯಿತು.

ಮಾರ್ಚ್‌ 11ಕ್ಕೆ ದಿಲ್ಲಿಯಲ್ಲಿ ಸಭೆ

ಮಾರ್ಚ್‌ 11ರಂದು ದಿಲ್ಲಿಯಲ್ಲಿ ಎಐಸಿಸಿ ಸ್ಕ್ರೀನಿಂಗ್‌ ಕಮಿಟಿ ಸಭೆ ನಡೆಯಲಿದೆ. ಅಂದು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಂತಿಮಗೊಳ್ಳಲಿದೆ. ''ನಾವೂ ದಿಲ್ಲಿ ಸಭೆಗೆ ತೆರಳಲಿದ್ದೇವೆ. ಈಗಿನ ಸಭೆಯಲ್ಲಿ 15 ಕ್ಷೇತ್ರಗಳ ಸಂಬಂಧ ಚರ್ಚಿಸಲಾಗಿದೆ,'' ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದರು.

ವರಿಷ್ಠರು ಸೂಚಿಸಿದರೆ ಸಿದ್ದು ಲೋಕಕಣಕ್ಕೆ

ಲೋಕಸಭಾ ಸುನಾವಣೆಯಲ್ಲಿ ಸ್ಪರ್ಧೆಗೆ ಸಿದ್ದರಾಮಯ್ಯ ಇನ್ನೂ ಯೋಚನೆ ಮಾಡಿಲ್ಲ. ಹೈಕಮಾಂಡ್‌ ಸೂಚನೆ ಬಂದರೆ ಕೊಪ್ಪಳ ಅಥವಾ ಮೈಸೂರಿನಿಂದ ಅವರು ಕಣಕ್ಕಿಳಿಯಲಿದ್ದಾರೆ ಎಂದು ಈಶ್ವರ್‌ ಖಂಡ್ರೆ ಹೇಳಿದ್ದಾರೆ. ಬೀದರ್‌ ಕೇತ್ರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೆಸರು ಕೇಳಿಬಂದಿದೆ. ಅಚ್ಚರಿಯೆಂದರೆ 4 ಕ್ಷೇತ್ರಗಳ ಸಂಭಾವ್ಯರ ಪಟ್ಟಿಯಲ್ಲಿ ರಾಜ್ಯಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್‌ ಹೆಸರಿದೆ. ಬೆಂಗಳೂರು ದಕ್ಷಿಣಕ್ಕೆ ಮಾಜಿ ಶಾಸಕ ಪ್ರಿಯಾಕೃಷ್ಣ ಹೆಸರು ಮಾತ್ರ ಇದೆ. ಅತೃಪ್ತ ಶಾಸಕ ರಮೇಶ್‌ ಜಾರಕಿಹೊಳಿ ಅವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ