ಆ್ಯಪ್ನಗರ

ಶಿರಾಡಿ ರಸ್ತೆ; ಜೂ.15ರ ನಂತರ ಸಂಚಾರ ಪುನಾರಂಭ ಸಾಧ್ಯತೆ

ರಾಷ್ಟ್ರೀಯ ಹೆದ್ದಾರಿ (ಬೆಂಗಳೂರು-ಮಂಗಳೂರು) ಶಿರಾಡಿ ರಸ್ತೆ ಕಾಂಕ್ರಿಟ್ ಕಾಮಗಾರಿ ಮಳೆ ಕಾರಣಕ್ಕೆ ವಿಳಂಬವಾಗುತ್ತಿದ್ದು, ಜೂ.15 ರ ನಂತರ ಸಂಚಾರ ಪುನರಾರಂಭವಾಗುವ ಸಾಧ್ಯತೆಯಿದೆ.

Vijaya Karnataka Web 22 May 2018, 6:11 pm
ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ (ಬೆಂಗಳೂರು-ಮಂಗಳೂರು) ಶಿರಾಡಿ ರಸ್ತೆ ಕಾಂಕ್ರಿಟ್ ಕಾಮಗಾರಿ ಮಳೆ ಕಾರಣಕ್ಕೆ ವಿಳಂಬವಾಗುತ್ತಿದ್ದು, ಜೂ.15 ರ ನಂತರ ಸಂಚಾರ ಪುನರಾರಂಭವಾಗುವ ಸಾಧ್ಯತೆಯಿದೆ. ಶಿರಾಡಿ ಘಾಟ್ ರಸ್ತೆಯಲ್ಲಿ ಸುಮಾರು 74 ಕೋಟಿ ರೂ. ಅಂದಾಜು ವೆಚ್ಚದಲ್ಲಿ 12.38 ಕಿ.ಮೀ. ಉದ್ದಕ್ಕೆ ಎರಡನೇ ಹಂತದ ಕಾಂಕ್ರಿಟ್ ಕಾಮಗಾರಿಗಾಗಿ ಜ.20 ರಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು.
Vijaya Karnataka Web shiradi road.


ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಓಷನ್ ಕನ್ಸ್‌ಸ್ಟ್ರಕ್ಷನ್ ಕಾಂಕ್ರಿಟ್ ಕಂಪನಿ ಪ್ರಾರಂಭದ ಹಂತದಲ್ಲಿ ಚುರುಕಿನ ಕೆಲಸ ನಡೆಸಿತ್ತು. ಅತ್ಯಾಧುನಿಕ ಯಂತ್ರೋಪಕರಣ ಬಳಸಿ ಮಾಡಲಾಗುತ್ತಿದ್ದ ಕಾಮಗಾರಿ ಅದೇ ವೇಗದಲ್ಲಿ ಮುಂದುವರೆಸಿದ್ದರೆ, ಮೇ 15 ಅಥವಾ ಅಂತ್ಯದ ವೇಳೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ಪುನರಾರಂಭ ಆಗುವ ಸಾಧ್ಯತೆ ನಿರೀಕ್ಷಿಸಲಾಗಿತ್ತು.

ಆದರೆ, ಕಳೆದ ಒಂದು ತಿಂಗಳಿನಿಂದೀಚೆಗೆ ಕೆಲಸ ಮಂದಗತಿಯಲ್ಲಿ ಸಾಗಿದ್ದು, ರಸ್ತೆ ಸಂಚಾರಕ್ಕೆ ಮುಕ್ತವಾಗುವುದು ವಿಳಂಬವಾಗುತ್ತಲೇ ಇದೆ.
ಕಳೆದ ಏಪ್ರಿಲ್ ತಿಂಗಳಿನಿಂದ ಆಗಾಗ ಮಳೆ ಬೀಳುತ್ತಿರುವುದು ಕಾಂಕ್ರಿಟ್ ಕಾಮಗಾರಿ ವಿಳಂಬಕ್ಕೆ ಕಾರಣ ಎನ್ನಲಾಗಿದೆ. ಜೂ.15 ಅಥವಾ ಅಂತ್ಯಕ್ಕೆ ವಾಹನ ಸಂಚಾರಕ್ಕೆ ಮುಕ್ತವಾಗುವ ಸಂಭವವಿದೆ ಎನ್ನಲಾಗುತ್ತಿದೆ. ಅದರಲ್ಲೂ ಮಳೆ ಬಿಡುವು ನೀಡಿ ಎಲ್ಲವೂ ಅಂದುಕೊಂಡಂತೆ ಕೆಲಸ ನಡೆದರೆ ಮಾತ್ರ ಈ ವೇಳೆಗೆ ಸಂಚಾರ ಪುನರಾರಂಭವಾಗಲು ಸಾಧ್ಯ.

ತೀವ್ರ ತೊಂದರೆ: ರಾಜಧಾನಿ ಬೆಂಗಳೂರು ಹಾಗೂ ಕರಾವಳಿಯ ಪ್ರಮುಖ ವಾಣಿಜ್ಯ ಕೇಂದ್ರ ಮಂಗಳೂರು ಸಂಪರ್ಕಿಸುವ ಈ ರಾಷ್ಟ್ರೀಯ ಹೆದ್ದಾರಿಯನ್ನು ಕಾಮಗಾರಿ ಹಿನ್ನೆಲೆ ವಾಹನ ಸಂಚಾರ ಬಂದ್ ಮಾಡಿರುವುದು ಸರಕು ಸಾಗಣೆ ಮತ್ತು ಪ್ರಯಾಣಿಕರ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ.

ಪ್ರಮುಖ ಯಾತ್ರಾಸ್ಥಳಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಉಡುಪಿ ಇತರ ದೇವಸ್ಥಾನಗಳಿಗೆ ತೆರಳಬೇಕಾದ ಭಕ್ತರು, ಶಾಲೆ, ಕಾಲೇಜುಗಳಿಗೆ ಹೋಗಬೇಕಾದ ವಿದ್ಯಾರ್ಥಿಗಳು, ನಾನಾ ಆಸ್ಪತ್ರೆಗಳಿಗೆ ಹೋಗಬೇಕಾದ ರೋಗಿಗಳು ಶಿರಾಡಿ ರಸ್ತೆ ಸಂಚಾರವಿಲ್ಲದೆ ಪರದಾಡುವ ಪರಿಸ್ಥಿತಿ ಕಳೆದ ನಾಲ್ಕು ತಿಂಗಳಿನಿಂದಲೂ ಇದೆ. ಪರ್ಯಾಯ ಮಾರ್ಗಗಳಾದ ಚಾರ್ಮಾಡಿ ಘಾಟ್ ರಸ್ತೆ ಮತ್ತು ಇತರೆ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದ ಸುತ್ತಿ ಬಳಸಿ ಹೋಗಬೇಕಾದ್ದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಒಡ್ಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ