ಆ್ಯಪ್ನಗರ

ಸಿಐಡಿಗೆ ತನಿಖೆಗೆ ಶೀರೂರು ಶ್ರೀ ಪ್ರಕರಣ

ಶೀರೂರುಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಸಂಶಯಾಸ್ಪದ ಸಾವಿನ ತನಿಖೆಯನ್ನು ಸಿಐಡಿಗೆ ಒಪ್ಪಿಸಲು ರಾಜ್ಯಸರಕಾರ ತಯಾರಿ ನಡೆಸಿದೆ.

Vijaya Karnataka Web 1 Aug 2018, 8:20 am
ಉಡುಪಿ: ಉಡುಪಿಯ ಶೀರೂರುಶ್ರೀ ಲಕ್ಷ್ಮೀವರತೀರ್ಥಲಕ್ಷ್ಮೀವರತೀರ್ಥ ಶ್ರೀಪಾದರ ಸಂಶಯಾಸ್ಪದ ಸಾವಿನ ತನಿಖೆಯನ್ನು ಸಿಐಡಿಗೆ ಒಪ್ಪಿಸಲು ರಾಜ್ಯಸರಕಾರ ತಯಾರಿ ನಡೆಸಿದೆ.
Vijaya Karnataka Web shiroor shri


ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ತಜ್ಞ ವೈದ್ಯರು ಸೋಮವಾರ ಮರಣೋತ್ತರ ವರದಿ ಸಲ್ಲಿಸಿದ್ದರೂ, ಸಾವಿನ ನಿಖರ ಕಾರಣಕ್ಕೆ ಎಫ್‌ಎಸ್‌ಎಲ್‌ ವರದಿಗಾಗಿ ಕಾಯುವಂತೆ ಷರಾ ಬರೆದಿದೆ.

ಈ ನಡುವೆ ಶ್ರೀಗಳ ಸಂಶಯಾಸ್ಪದ ಸಾವಿನ ಪ್ರಕರಣ ಮುಚ್ಚಿಹಾಕುವ ಯತ್ನದ ಶಂಕೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರಿಂದ ತನಿಖೆ ನಡೆಸುವ ಬದಲು ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಲು ಶೀರೂರುಶ್ರೀಗಳ ಆಪ್ತರು, ಪ್ರಗತಿಪರ ಸಂಘಟನೆಗಳು ಮುಂದಾಗಿವೆ. ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಲು, ಸಾರ್ವಜನಿಕರಲ್ಲಿರುವ ಅನುಮಾನ ಪರಿಹರಿಸಲು ಪ್ರಕರಣವನ್ನು ಸಿಐಡಿಗೆ ಒಪ್ಪಿಸುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಸರಕಾರ ಬಂದಿದೆ ಎಂದು ಪೊಲೀಸ್‌ ಮೂಲಗಳು ಖಚಿತಪಡಿಸಿವೆ.

ಆಪ್ತ ಮಹಿಳೆಯ ತೀವ್ರ ವಿಚಾರಣೆ


ಮರಣೋತ್ತರ ವರದಿ ಹಿನ್ನೆಲೆಯಲ್ಲಿ ಶೀರೂರುಶ್ರೀಗಳ ಆಪ್ತ ಮಹಿಳೆಯನ್ನು ಸೋಮವಾರ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು ಮಂಗಳವಾರ ಹಿರಿಯಡ್ಕದ ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.

ದ್ವಂದ್ವ ಮಠಾಧೀಶರಿಲ್ಲದೆ ಗುರು ಆರಾಧನೆ?


ಪೊಲೀಸರು ತನಿಖೆ ಪೂರ್ಣಗೊಳಿಸಿ ಆ.5 ರೊಳಗೆ ಹಿರಿಯಡ್ಕದ ಶೀರೂರು ಮೂಲಮಠವನ್ನು ದ್ವಂದ್ವ ಸೋದೆ ಮಠಕ್ಕೆ ಒಪ್ಪಿಸಿದರೆ ಸೋದೆ ಮಠಾಧೀಶ ಶ್ರೀವಿಶ್ವವಲ್ಲಭತೀರ್ಥರ ಉಪಸ್ಥಿತಿಯಲ್ಲಿ ಗುರು ಆರಾಧನೆ ನಡೆಯಲಿದೆ. ತಡವಾದಲ್ಲಿ ಮಠದ ಶಿಷ್ಯ ವರ್ಗ ಹಾಗೂ ಪುರೋಹಿತರೇ ಗುರುಆರಾಧನೆ ನಡೆಸಬೇಕಾಗುತ್ತದೆ. ಆ. 6ರಿಂದ ಸೆ. 25ರ ತನಕ ಶ್ರೀವಿಶ್ವವಲ್ಲಭ ತೀರ್ಥರು ಶಿರಸಿಯ ಸೋಂದಾ ಕ್ಷೇತ್ರದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

ಮಠದ ಚರಾಸ್ತಿ ದ್ವಂದ್ವ ಮಠಕ್ಕೆ ಹಸ್ತಾಂತರ

ಶೀರೂರು ಶ್ರೀ ಸಾವಿನ ಬಳಿಕ ಪೊಲೀಸ್‌ ಸುಪರ್ದಿಯಲ್ಲಿದ್ದ ಮಠದ ಚರಾಸ್ತಿಯನ್ನು ದ್ವಂದ್ವ ಸೋದೆ ಮಠದ ಸುಪರ್ದಿಗೆ ಆ. 1 ರಂದು ಪೊಲೀಸರು ಹಸ್ತಾಂತರಿಸಲಿದ್ದಾರೆ. ವಿಚಾರಣೆ ಹಿನ್ನೆಲೆಯಲ್ಲಿ ಉಡುಪಿ ಹಾಗೂ ಹಿರಿಯಡ್ಕದ ಮೂಲ ಮಠವನ್ನು ವಶಕ್ಕೆ ಪಡೆದು ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು. ಮಠದ ಚರಾಸ್ತಿಯೂ ಪೊಲೀಸರ ಸುಪರ್ದಿಯಲ್ಲಿತ್ತು.

ಸೋದೆ ಮಠದಿಂದ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ಆರಂಭವಾಗದಿರುವ ಹಿನ್ನೆಲೆಯಲ್ಲಿ ದ್ವಂದ್ವ ಸೋದೆ ಮಠವೇ ಉಡುಪಿ ಹಾಗೂ ಶೀರೂರು ಮೂಲ ಮಠದ ಜವಾಬ್ದಾರಿ ನಿರ್ವಹಿಸಲಿದೆ.

ಮಂಗಳವಾರ ಸಂಜೆಯೇ ಮಠದ ಚರಾಸ್ತಿಯನ್ನು ಸೋದೆಶ್ರೀಗಳಿಗೆ ಹಸ್ತಾಂತರಿಸಲು ಉದ್ದೇಶಿಸಿದ್ದರೂ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಬುಧವಾರ ಸಂಜೆಯೊಳಗೆ ಮಠದಲ್ಲಿರುವ ವಿಗ್ರಹ, ಪೂಜಾ ಸಾಮಗ್ರಿ, ಚಿನ್ನ, ಬೆಳ್ಳಿ ಆಭರಣ ಸಹಿತ ಚರಾಸ್ತಿಗಳು ಸೋದೆ ಮಠದ ಸುಪರ್ದಿಗೆ ಬರಲಿವೆ.

ನಡೆಯದ ಗುರು ಆರಾಧನೆ


ಶೀರೂರು ಶ್ರೀಗಳು ನಿಧನರಾಗಿ ಜು. 31ಕ್ಕೆ 13 ದಿನ ಪೂರ್ಣವಾಗಿದ್ದು, ಶ್ರೀಗಳ ವೃಂದಾವನಸ್ಥರಾದ ಜಾಗದಲ್ಲಿ ಇಂದು ಗುರು ಆರಾಧನೆ ನಡೆಯಬೇಕಿತ್ತು. ಆದರೆ ಪೊಲೀಸರು ಹಿರಿಯಡ್ಕದ ಶೀರೂರು ಮೂಲ ಮಠವನ್ನು ಒಪ್ಪಿಸದ ಹಿನ್ನೆಲೆಯಲ್ಲಿ ಗುರು ಆರಾಧನೆ ಮಂಗಳವಾರ ನಡೆದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ