ಆ್ಯಪ್ನಗರ

ಕಾರಂತರಿಗೆ ಅವಮಾನಿಸಬಾರದೆಂದು ಕಾಪಿರೈಟ್ಸ್‌ ಪ್ರತಿಪಾದನೆ ಕೈಬಿಟ್ಟೆವು: ಪುತ್ರಿ ಮಾಲವಿಕಾ ಕಪೂರ್‌

'ಕೆ ಶಿವರಾಮ ಕಾರಂತರು ಸಾಹಿತ್ಯದ ಹಕ್ಕನ್ನು ಕುಟುಂಬಸ್ಥರಿಗೆ ಕೊಡದೆ ಬೇರೆಯವರಿಗೆ ಕೊಟ್ಟಿರುವ ಕುರಿತು ನ್ಯಾಯಾಲಯದ ಮೊರೆ ಹೋಗಬಹುದಿತ್ತು...

Vijaya Karnataka 10 Dec 2018, 9:10 am
ಬೆಂಗಳೂರು: 'ಕೆ. ಶಿವರಾಮ ಕಾರಂತರು ಸಾಹಿತ್ಯದ ಹಕ್ಕನ್ನು ಕುಟುಂಬಸ್ಥರಿಗೆ ಕೊಡದೆ ಬೇರೆಯವರಿಗೆ ಕೊಟ್ಟಿರುವ ಕುರಿತು ನ್ಯಾಯಾಲಯದ ಮೊರೆ ಹೋಗಬಹುದಿತ್ತು. ಆದರೆ ಕಾರಂತರಿಗೆ ಅವಮಾನವಾಗುತ್ತೆ ಎಂಬ ಕಾರಣಕ್ಕಾಗಿ ನಾವು ಆ ರೀತಿ ಮಾಡಲಿಲ್ಲ' ಎಂದು ಶಿವರಾಮ ಕಾರಂತರ ಪುತ್ರಿ ಮಾಲವಿಕಾ ಕಪೂರ್‌ ಹೇಳಿದ್ದಾರೆ.
Vijaya Karnataka Web shivarama karantha daughter Malavika


ಸಾಹಿತ್ಯ ಅಕಾಡೆಮಿಯು ಬಿಎಂಶ್ರೀ ಕಲಾಭವನದಲ್ಲಿ ಆಯೋಜಿಸಿದ್ದ 'ಕೆ. ಶಿವರಾಮ ಕಾರಂತ' (ಇಂಗ್ಲಿಷ್‌, ಕನ್ನಡ) ಅನುವಾದಿತ ಕೃತಿ, 'ನರೇಶನ್‌ ಆ್ಯಂಡ್‌ ಡಿಸ್‌ಕೋರ್ಸ್‌' ಮತ್ತು ಪ್ರಶಸ್ತಿ ವಿಜೇತ 'ಆಖ್ಯಾನ-ವ್ಯಾಖ್ಯಾನ' (ಸಂಸ್ಕೃತಿ ವಿಮರ್ಶಾ ಕೃತಿಯ ಇಂಗ್ಲಿಷ್‌ ಅನುವಾದ. ಅನುವಾದಕರು : ಸಿ.ಎನ್‌.ಆರ್‌. ಮತ್ತು ಗೀತಾ ಶ್ರೀನಿವಾಸನ್‌) ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

''ನನ್ನ ತಂದೆಯವರು ನಿಧನರಾಗಿ 22 ವರ್ಷವಾಯಿತು. ಆಗಲೇ ಕಾಪಿರೈಟ್ಸ್‌ ಪ್ರಶ್ನಿಸಬಹುದಿತ್ತು. ಆದರೆ, ಆಗ ನ್ಯಾಯಾಲಯದ ಮೊರೆ ಹೋಗಿದ್ದರೆ ಹಣದ ಆಸೆಯ ಆರೋಪಗಳು ಕೇಳಿ ಬರುತ್ತಿದ್ದವು. ತಂದೆ ಮನಸ್ಸನ್ನು ನೋಯಿಸುವ ಕೆಲಸ ಮಾಡಬಾರದೆಂಬ ಕಾರಣಕ್ಕಾಗಿ ನಾವು ಆ ಕೆಲಸಕ್ಕೆ ಕೈ ಹಾಕಲಿಲ್ಲ. ಕಾರಂತರು ನಮ್ಮದೊಂದೇ ಅಲ್ಲ ; ನಾಡಿನ ಸ್ವತ್ತು,'' ಎಂದರು.

ಕಾರಂತರು ಕಲ್ಪವೃಕ್ಷ

''ಕಾರಂತರು ಆಲದ ಮರ ಆಗಿರಲಿಲ್ಲ. ಬದಲಿಗೆ ಕಲ್ಪವೃಕ್ಷವಾಗಿದ್ದರು. ಕಾರಂತರ ನೈಜ ವಿಚಾರಗಳು, ಅವರಲ್ಲಿನ ಒಳ್ಳೆಯತನ, ನನ್ನ ತಾಯಿ, ಸ್ನೇಹಿತರ ಕುರಿತಾದ ವಿಚಾರಗಳನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ ಉಲ್ಲಾಸ್‌ ಕಾರಂತ್‌, ಕ್ಷಮಾ ರಾವ್‌ ಹಾಗೂ ನಾನು ಕಾರಂತರ ಜೀವನ ಚರಿತ್ರೆಯನ್ನು ಬರೆಯುತ್ತಿದ್ದೇವೆ. ಅದರಲ್ಲಿ ಕಾರಂತರ ಸಾಹಿತ್ಯದ ಹಕ್ಕುಸ್ವಾಮ್ಯ ಕುರಿತ ವಿಚಾರವನ್ನೂ ಪ್ರಸ್ತಾಪಿಸಲಾಗುವುದು. ಈ ಕೃತಿಯನ್ನು ರಚಿಸಲು ಪ್ರೇರೇಪಣೆ ನೀಡಿದವರು ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಘ್‌'' ಎಂದು ಮಾಲವಿಕಾ ಕಪೂರ್‌ ತಿಳಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ,''ಕಾರಂತರ ಕೃತಿಗಳು ಕನ್ನಡದ ಸಾಹಿತ್ಯಕ್ಕೆ ಹೆಚ್ಚು ಲಾಭ ತಂದುಕೊಟ್ಟಿವೆ. ಅವರು ಕನ್ನಡ ಸಾಹಿತ್ಯದ ಮಹಾ ಋುಷಿಯಿದ್ದಂತೆ. ಅವರಿಗೆ 'ನಾಡೋಜ' ಕೊಟ್ಟಾಗ ಸ್ವೀಕರಿಸುತ್ತಾರೋ ಇಲ್ಲವೋ ಎಂಬ ಆತಂಕ ಇತ್ತು. ಆದರೆ ಅವರು ಅತ್ಯಂತ ಸಂತೋಷದಿಂದ ಸ್ವೀಕರಿಸಿದರು'' ಎಂದು ಕಾರಂತರೊಂದಿಗಿನ ಒಡನಾಟವನ್ನು ಬಿಚ್ಚಿಟ್ಟರು.

ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸಂಚಾಲಕ ಸಿದ್ದಲಿಂಗಯ್ಯ, ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿ ಎಸ್‌.ಪಿ. ಮಹಾಲಿಂಗೇಶ್ವರ, ವಿಮರ್ಶಕ ಸಿ.ಎನ್‌. ರಾಮಚಂದ್ರನ್‌, ಗೀತಾ ಶ್ರೀನಿವಾಸನ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ