ಆ್ಯಪ್ನಗರ

ಸಿದ್ದರಾಮಯ್ಯ ಸ್ಥಾನಮಾನ ಯಥಾಸ್ಥಿತಿ, ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಗಾದಿ; ಹೈಕಮಾಂಡ್‌ ಹೊಸ ಸಂಧಾನ ಸೂತ್ರ!

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಹಿಂಪಡೆದು ಮುಂದುವರಿಯಲು ಸಿದ್ದರಾಮಯ್ಯ ಅವರಿಗೆ ಸೂಚಿಸುವ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌ ಆಯ್ಕೆಯನ್ನು ಒಂದೆರಡು ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ಉನ್ನತ ಮೂಲಗಳು ತಿಳಿಸಿವೆ.

Vijaya Karnataka 13 Feb 2020, 8:43 pm
ಬೆಂಗಳೂರು: ರಾಜ್ಯ ಕಾಂಗ್ರೆಸ್‌ ನಾಯಕತ್ವ ಗೊಂದಲ ಪರಿಹಾರಕ್ಕೆ ‘ಮೇಜರ್‌ ಸರ್ಜರಿ’ ಚಿಂತನೆಯನ್ನು ಹೈಕಮಾಂಡ್‌ ಬಹುತೇಕ ಕೈಬಿಟ್ಟಿದ್ದು, ಮೂಲ ಮತ್ತು ವಲಸಿಗ ಎರಡೂ ಬಣಗಳನ್ನು ಸಮಾಧಾನಪಡಿಸುವಂತಹ ಸಮನ್ವಯ ಸೂತ್ರದ ನಿರ್ಧಾರಕ್ಕೆ ಬಂದಿದೆ.
Vijaya Karnataka Web DK Shivakumar Siddaramaiah


ಶಾಸಕಾಂಗ ಪಕ್ಷ ಮತ್ತು ಪ್ರತಿಪಕ್ಷ ನಾಯಕ ಹುದ್ದೆ ವಿಭಜನೆ ಪ್ರಸ್ತಾವನೆ ಕೈಬಿಟ್ಟು, ಹಾಲಿ ವ್ಯವಸ್ಥೆಯಲ್ಲಿ ಸಿದ್ದರಾಮಯ್ಯ ಅವರನ್ನೇ ಮುಂದುವರಿಸುವುದು. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌ಗೆ ಪಟ್ಟ ಕಟ್ಟುವುದು. ಈ ಮೂಲಕ ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಹಿರಿಯ ಮೂಲ ಕಾಂಗ್ರೆಸ್ಸಿಗರ ಬಣ ಎರಡೂ ಗುಂಪುಗಳನ್ನು ಸಮಾಧಾನಪಡಿಸುವ ತೀರ್ಮಾನಕ್ಕೆ ದಿಲ್ಲಿ ವರಿಷ್ಠರು ಬಂದಿದ್ದಾರೆ.

ಮೂಲ ಮತ್ತು ವಲಸಿಗ ಎರಡೂ ಬಣಗಳನ್ನು ಒಟ್ಟಿಗೆ ಕೊಂಡೊಯ್ಯಲು ಇದು ಸೂಕ್ತ ಎಂಬ ನಿಲುವಿಗೆ ಎಐಸಿಸಿ ಹೈಕಮಾಂಡ್‌ ಬಂದಿದ್ದು, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಹಿಂಪಡೆದು ಮುಂದುವರಿಯಲು ಸಿದ್ದರಾಮಯ್ಯ ಅವರಿಗೆ ಸೂಚಿಸುವ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌ ಆಯ್ಕೆಯನ್ನು ಒಂದೆರಡು ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ಉನ್ನತ ಮೂಲಗಳು ತಿಳಿಸಿವೆ.

ಸೋಮವಾರ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕತ್ವದ ಗೊಂದಲ ವಿಚಾರ ರಾಜಕೀಯ ವಿರೋಧಿಗಳಿಗೆ ಅಸ್ತ್ರವಾಗಬಾರದು ಎಂಬ ಕಾರಣಕ್ಕೆ ಒಂದೆರಡು ದಿನಗಳಲ್ಲೇ ತೀರ್ಮಾನ ಪ್ರಕಟ ಮಾಡಲಾಗುತ್ತಿದೆ. ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ಈ ಸಂಬಂಧ ಈಗಾಗಲೇ ವರಿಷ್ಠರೊಂದಿಗೆ ಚರ್ಚಿಸಿದ್ದು, ಅಧಿಕೃತ ಪ್ರಕಟವಷ್ಟೇ ಬಾಕಿ ಎಂದು ಹೇಳಲಾಗಿದೆ.

ಸಮನ್ವಯ ಸೂತ್ರ

ಪಕ್ಷದಲ್ಲಿಸಿದ್ದರಾಮಯ್ಯ ಮತ್ತು ಬೆಂಬಲಿಗರ ಮೇಲುಗೈ ಮೂಲ ಕಾಂಗ್ರೆಸ್ಸಿಗರಲ್ಲಿಅಸಹನೆ ಸೃಷ್ಟಿಸಿತ್ತು. ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ರಾಜೀನಾಮೆ ಸಲ್ಲಿಸಿದ್ದರು. ಈ ಅವಕಾಶ ಬಳಸಿಕೊಂಡು ಮೂಲ ಕಾಂಗ್ರೆಸಿಗ ಹಿರಿಯರು ಸಾಮೂಹಿಕ ನಾಯಕತ್ವದ ಬೇಡಿಕೆಯೊಂದಿಗೆ ಮೇಜರ್‌ ಸರ್ಜರಿ ಪ್ರಸ್ತಾವನೆ ಚಾಲನೆ ಪಡೆದುಕೊಂಡಿತ್ತು.

ಮಹಾರಾಷ್ಟ್ರ ಮಾದರಿಯಲ್ಲಿ ಸಿಎಲ್‌ಪಿ ಮತ್ತು ಪ್ರತಿಪಕ್ಷ ನಾಯಕ ಸ್ಥಾನಗಳನ್ನು ವಿಭಜಿಸುವ ಪ್ರಸ್ತಾವನೆ ಬಗ್ಗೆ ಹೈಕಮಾಂಡ್‌ ಗಂಭೀರ ಆಲೋಚನೆ ನಡೆಸಿತ್ತು. ಆದರೆ, ಇದನ್ನು ಸಿದ್ದರಾಮಯ್ಯ ಬಲವಾಗಿ ವಿರೋಧಿಸಿದ್ದರು. ಸಿದ್ದರಾಮಯ್ಯ ಅವರನ್ನು ಕಡೆಗಣಿಸಿ, ಹಿರಿಯರಲ್ಲೇ ಪೂರ್ಣವಾಗಿ ವಿಶ್ವಾಸವಿಡುವ ಸ್ಥಿತಿ ರಾಜ್ಯ ಕಾಂಗ್ರೆಸ್‌ನಲ್ಲಿ ಇಲ್ಲ ಎಂಬುದು ವರಿಷ್ಠರಿಗೆ ಮನದಟ್ಟಾಗಿತ್ತು. ಹೀಗಾಗಿ, ಸಾಕಷ್ಟು ಕಸರತ್ತು ನಡೆಸಿಯೂ ಅಂತಿಮ ನಿರ್ಧಾರಕ್ಕೆ ಬಂದಿರಲಿಲ್ಲ. ಎರಡೂ ಬಣಗಳಿಗೆ ಬೇಸರವಾಗದಂತೆ ಸಮನ್ವಯ ಸೂತ್ರಕ್ಕೆ ಬರಲಾಗಿದೆ. ಅಂತೆಯೇ, ಸಿದ್ದರಾಮಯ್ಯ ಅವರ ಸ್ಥಾನಮಾನ ಅಭಾದಿತವಾಗಲಿದ್ದು, ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗುವುದರಿಂದ ಪಕ್ಷ ಸಂಘಟನೆ ಚುರುಕುಗೊಳಿಸಲು ಅನುಕೂಲವಾಗಲಿದೆ ಎಂಬ ಲೆಕ್ಕಾಚಾರಕ್ಕೆ ಬರಲಾಗಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ