ಆ್ಯಪ್ನಗರ

ಜಿಟಿಡಿ, ಸಾರಾ ಮಹೇಶ್‌ ವಜಾಕ್ಕೆ ಸಿದ್ದರಾಮಯ್ಯ ಒತ್ತಡ

ಸೀಟು ಹೊಂದಾಣಿಕೆ ಮಾತುಕತೆ ವೇಳೆ ಮೈಸೂರನ್ನು ಜೆಡಿಎಸ್‌ ಬಯಸಿತ್ತು. ಆದರೆ, ಸಿದ್ದರಾಮಯ್ಯ ಅವರೇ ಹೈಕಮಾಂಡ್‌ ಮಟ್ಟದಲ್ಲಿ ದಾಳ ಉರುಳಿಸಿ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಉಳಿಸಿಕೊಂಡಿದ್ದರು.

Vijaya Karnataka 2 May 2019, 5:30 am
ಬೆಂಗಳೂರು : ದೋಸ್ತಿ ಪಾಳಯದಲ್ಲಿ ಬಿರುಕು ಮೂಡಿರುವ ಬೆಳವಣಿಗೆ ನಡುವೆಯೇ ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್‌ ಅವರನ್ನು ಸಂಪುಟದಿಂದ ಕೈಬಿಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಡ ಹಾಕಿದ್ದಾರೆ.
Vijaya Karnataka Web ಸಿದ್ದರಾಮಯ್ಯ
ಸಿದ್ದರಾಮಯ್ಯ


ಮೈಸೂರು ಕ್ಷೇತ್ರದ ವಿಚಾರದಲ್ಲಿ ಉಭಯ ಸಚಿವರು ನಡೆದುಕೊಂಡ ರೀತಿಗೆ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ. ಹಾಗಾಗಿ ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಮುನ್ನವೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಸಂಪರ್ಕಿಸಿರುವ ಸಿದ್ದು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸೂಚನೆ ನೀಡುವಂತೆಯೂ ಪಟ್ಟು ಹಾಕಿದ್ದಾರೆ ಎನ್ನಲಾಗಿದೆ.

ಸೀಟು ಹೊಂದಾಣಿಕೆ ಮಾತುಕತೆ ವೇಳೆ ಮೈಸೂರನ್ನು ಜೆಡಿಎಸ್‌ ಬಯಸಿತ್ತು. ಆದರೆ, ಸಿದ್ದರಾಮಯ್ಯ ಅವರೇ ಹೈಕಮಾಂಡ್‌ ಮಟ್ಟದಲ್ಲಿ ದಾಳ ಉರುಳಿಸಿ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಉಳಿಸಿಕೊಂಡಿದ್ದರು. ಬಳಿಕ ಮಾಜಿ ಸಂಸದ ಸಿ.ಎಚ್‌.ವಿಜಯಶಂಕರ್‌ ಅವರಿಗೆ ಟಿಕೆಟ್‌ ಕೊಡಿಸಿದ್ದರು. ಮೈಸೂರಿನಲ್ಲಿ ಹಿನ್ನೆಡೆಯಾದರೆ ಸಿದ್ದು ಅವರ ವೈಯಕ್ತಿಕ ವರ್ಚಸ್ಸಿಗೂ ಧಕ್ಕೆಯಾಗುತ್ತದೆ. ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ನಿರೀಕ್ಷಿತ ಬೆಂಬಲ ಸಿಗದೆ ಇರುವುದರಿಂದ ಈ ಅಪಾಯವೂ ಇದೆ. ಹಾಗಾಗಿ ಜೆಡಿಎಸ್‌ನಿಂದ ಮೈತ್ರಿಧರ್ಮ ಪಾಲನೆಯಾಗಿಲ್ಲ. ಇದರ ಹಿಂದೆ ಇಬ್ಬರು ಸಚಿವರ ಕೈವಾಡವಿದೆ ಎನ್ನುವುದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಂಡಿದ್ದಾರೆ. ಈ ಕುರಿತ ಸಂಪೂರ್ಣ ವಿವರವನ್ನು ಹೈಕಮಾಂಡ್‌ಗೆ ತಲುಪಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಮೈತ್ರಿ ಸರಕಾರ ಸುಗಮವಾಗಿ ಮುಂದುವರಿಯಬೇಕಿದ್ದರೆ ಜಿಟಿಡಿ ಮತ್ತು ಸಾ.ರಾ.ಮಹೇಶ್‌ ಪದಚ್ಯುತಿಯಾಗಲೇಬೇಕು. ಅವರ ಬದಲಿಗೆ ಒಕ್ಕಲಿಗ ಸಮುದಾಯದ ಬೇರೆ ಶಾಸಕರಿಗೆ ಜೆಡಿಎಸ್‌ನವರು ಮಂತ್ರಿ ಸ್ಥಾನ ನೀಡಲಿ. ಆದಷ್ಟು ಬೇಗ ಈ ಸಚಿವರನ್ನು ಸಂಪುಟದಿಂದ ಹೊರಹಾಕುವ ನಿರ್ಧಾರ ಕೈಗೊಳ್ಳಬೇಕೆಂದು ಹಠ ಹಿಡಿದಿದ್ದಾರೆ. ಆದರೆ, ಸದ್ಯಕ್ಕೆ ಯಾವುದೇ ಆತುರದ ಕ್ರಮದ ಅಗತ್ಯವಿಲ್ಲ. ಲೋಕಸಭೆ ಚುನಾವಣೆ ಫಲಿತಾಂಶ ಬರುವ ವರೆಗೂ ಕಾಯುವುದು ಒಳಿತು ಎಂದು ವೇಣುಗೋಪಾಲ್‌ ಕಡೆಯಿಂದ ಸೂಚನೆ ಬಂದಿದೆಯೆಂದು ಗೊತ್ತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ