ಆ್ಯಪ್ನಗರ

ಬಾದಾಮಿಯಲ್ಲಿ ಸಿದ್ದರಾಮಯ್ಯv/s ಯಡಿಯೂರಪ್ಪ?

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭೀತಿಯ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿಯಿಂದಲೂ ಕಣಕ್ಕಿಳಿಯುವುದು ಖಚಿತವಾಗಿದೆ.

Vijaya Karnataka 22 Apr 2018, 7:57 am
ಬೆಂಗಳೂರು/ ಬಾಗಲಕೋಟ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭೀತಿಯ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿಯಿಂದಲೂ ಕಣಕ್ಕಿಳಿಯುವುದು ಖಚಿತವಾಗಿದೆ. ಮಂಗಳವಾರ ಮಧ್ಯಾಹ್ನ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಈ ಮಧ್ಯೆ, ಬಿಜೆಪಿ ಪ್ರತಿತಂತ್ರದ ರಣಕಹಳೆ ಮೊಳಗಿಸಿದೆ. ಸಿದ್ದರಾಮಯ್ಯ ವಿರುದ್ಧ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಅವರನ್ನೇ ಕಣಕ್ಕಿಳಿಸಿ ತೀವ್ರ ಸ್ಪರ್ಧೆ ಒಡ್ಡಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ. ಸಂಸದರಾದ ಶ್ರೀರಾಮುಲು ಮತ್ತು ಪಿ.ಸಿ.ಗದ್ದಿಗೌಡರ್‌ ಹೆಸರೂ ಮುಂಚೂಣಿಯಲ್ಲಿದೆ. ಈಶ್ವರಪ್ಪ ಹಾಗೂ ಬಾದಾಮಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಆಯ್ಕೆಯನ್ನೂ ಬಿಜೆಪಿ ಮುಕ್ತವಾಗಿರಿಸಿದೆ. ಒಂದು ವೇಳೆ, ಬಿಎಸ್‌ವೈ ಬಾದಾಮಿಯಿಂದಲೂ ಕಣಕ್ಕಿಳಿದರೆ ಮೂರೂ ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳು ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದಂತಾಗುತ್ತದೆ.
Vijaya Karnataka Web cm


ಬಾದಾಮಿಯಲ್ಲಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸುವ ಕುರಿತು ಹಾವು-ಏಣಿ ಆಟ ಬಿರುಸುಗೊಂಡಿದೆ. ಸಿದ್ದರಾಮಯ್ಯ ಸೋಮವಾರ ಬೆಳಗ್ಗೆ ಬಾದಾಮಿಗೆ ತೆರಳುವ ಅಧಿಕೃತ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಶನಿವಾರ ರಾತ್ರಿ ಅವರ ಭೇಟಿಯನ್ನು ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಮಂಗಳವಾರಕ್ಕೆ ಮುಂದೂಡಲಾಯಿತು. ಕೊನೆಯ ಕ್ಷಣದಲ್ಲಿ ನಾಮಿನೇಷನ್‌ ಫೈಲ್‌ ಮಾಡುವ ಮೂಲಕ ಬಿಜೆಪಿಯನ್ನು ತಬ್ಬಿಬ್ಬುಗೊಳಿಸುವುದು ಸಿಎಂ ತಂತ್ರ ಎನ್ನಲಾಗಿದೆ. ಕಾಂಗ್ರೆಸ್‌ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿಯು ಯಡಿಯೂರಪ್ಪ, ಶ್ರೀರಾಮುಲು ಮತ್ತಿತರ ಸಂಭವನೀಯ ಅಭ್ಯರ್ಥಿಗಳ ನಾಮಪತ್ರ ಮತ್ತು ಅಫಿಡವಿಟ್‌ಗಳನ್ನು ಸಿದ್ಧವಾಗಿರಿಸಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಬಾದಾಮಿ ಬೆಳವಣಿಗೆ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಯಡಿಯೂರಪ್ಪ ಅವರನ್ನು ಬಾದಾಮಿಯಿಂದ ಕಣಕ್ಕಿಳಿಸಿದರೆ, ಸಿದ್ದರಾಮಯ್ಯ ಅವರನ್ನು ಸೋಲಿಸುವ ಜತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರ ಮತಗಳ ಧ್ರುವೀಕರಣವೂ ಸಾಧ್ಯವಾಗಲಿದೆ ಎನ್ನುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರವಾಗಿದೆ.
ಬಾದಾಮಿಯಿಂದಲೂ ಸ್ಪರ್ಧೆ ಮಾಡುತ್ತೇನೆ... ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧೆ ಬೇಡ ಅಂದುಕೊಂಡಿದ್ದೇನೆ... ಹೈಕಮಾಂಡ್‌ ಸೂಚಿಸಿದರೆ ಬಾದಾಮಿಯಲ್ಲೂ ಸ್ಪರ್ಧೆ ಮಾಡುತ್ತೇನೆ.. ಹೀಗೆ ಸಿದ್ದರಾಮಯ್ಯ ಅವರು ಕಳೆದ ಕೆಲವು ದಿನಗಳಿಂದ ಗೊಂದಲದ ಹೇಳಿಕೆ ನೀಡುತ್ತ ಬಂದಿದ್ದರು. ಆದರೆ, ಶನಿವಾರ ಸಿಎಂ ಕಚೇರಿ ಅಧಿಕೃತವಾಗಿ ಪ್ರಕಟಿಸಿದ ಕಾರ್ಯಕ್ರಮ ಪಟ್ಟಿಯಂತೆ ಅವರು ಮಂಗಳವಾರ ಮಧ್ಯಾಹ್ನ 2 ರಿಂದ 3 ಗಂಟೆಯೊಳಗೆ ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಕ್ಷಣಕ್ಷಣಕ್ಕೊಂದು ಕಾರ್ಯತಂತ್ರ

ಸಿಎಂ ಕಚೇರಿಯಿಂದ ಶನಿವಾರ ಬಿಡುಗಡೆಯಾದ ಕಾರ್ಯಕ್ರಮ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರು ಮೈಸೂರಿನಿಂದ ನೇರವಾಗಿ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ತೆರಳಿ ಮಧ್ಯಾಹ್ನ 3.30ಕ್ಕೆ ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಬೇಕಿತ್ತು. ಈ ಲೆಕ್ಕಾಚಾರದಲ್ಲಿ ಕೊನೇದಿನ ಮಂಗಳವಾರ ಆದರೂ ಸರಿ. ಸಿಎಂ ನಾಮಪತ್ರ ಸಲ್ಲಿಸುವವರೆಗೆ ಅಭ್ಯರ್ಥಿಯ ಗೌಪ್ಯತೆ ಬಿಟ್ಟುಕೊಡದಿರಲು ಬಿಜೆಪಿ ನಿರ್ಧರಿಸಿತ್ತು. ಈ ಬೆಳವಣಿಗೆ ಮಧ್ಯೆಯೇ, ಸೋಮವಾರದ ಕಾರ್ಯಕ್ರಮ ಪಟ್ಟಿ ರದ್ದು ಮಾಡಿ ಸಿಎಂ ಕಚೇರಿ ಭಾನುವಾರಕ್ಕೆ ಸೀಮಿತವಾದ ಮತ್ತೊಂದು ಕಾರ್ಯಕ್ರಮ ಪಟ್ಟಿ ಬಿಡುಗಡೆ ಮಾಡಿತು. ಇದಾದ ಒಂದು ತಾಸಿನಲ್ಲೇ ಮಂಗಳವಾರ ಸಿಎಂ ಬಾದಾಮಿಗೆ ತೆರಳುವ ಮತ್ತೊಂದು ಕಾರ್ಯಕ್ರಮ ಪಟ್ಟಿ ಬಿಡುಗಡೆ ಮಾಡಲಾಯಿತು.

ಜಾತಿ ಲೆಕ್ಕಾಚಾರ ಹೇಗಿದೆ?
ಈ ಕ್ಷೇತ್ರದಲ್ಲಿರುವ 48 ಸಾವಿರ ಕುರುಬರ ಮತಗಳು ತಮಗೆ ಗೆಲುವು ತಂದುಕೊಡಲಿವೆ ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರ. ಆದರೆ ''ಇಲ್ಲಿ 55 ಸಾವಿರದಷ್ಟು ಲಿಂಗಾಯತರ ಮತಗಳ ಜತೆ ವಾಲ್ಮೀಕಿ ಸಮಾಜದ 36 ಸಾವಿರ ಮತಗಳಿವೆ. ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲುವು ಖಚಿತ,'' ಎನ್ನುವುದು ಬಿಜೆಪಿ ಮುಖಂಡರ ವಿಶ್ವಾಸ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ