ಆ್ಯಪ್ನಗರ

ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣುತ್ತಾರೆ: ಸಚಿವ ಎಂ.ಟಿ.ಬಿ.ನಾಗರಾಜ್‌

''ಹನುಮಂತನ ಎದೆ ಬಗೆದರೆ ಹೇಗೆ ರಾಮ ಕಾಣುತ್ತಾನೋ, ಅದೇ ರೀತಿ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣುತ್ತಾರೆ,'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಸತಿ ಸಚಿವ ಎಂ.ಟಿ.ಬಿ.ನಾಗರಾಜ್‌ ಗುಣಗಾನ ಮಾಡಿದರು.

Vijaya Karnataka 28 Jan 2019, 5:00 am
ಬೆಂಗಳೂರು: ''ಹನುಮಂತನ ಎದೆ ಬಗೆದರೆ ಹೇಗೆ ರಾಮ ಕಾಣುತ್ತಾನೋ, ಅದೇ ರೀತಿ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣುತ್ತಾರೆ,'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಸತಿ ಸಚಿವ ಎಂ.ಟಿ.ಬಿ.ನಾಗರಾಜ್‌ ಗುಣಗಾನ ಮಾಡಿದರು.
Vijaya Karnataka Web hoskote mtb nagaraj (congress)


ನಗರದ ಹೊರವಲಯದ ಜಟ್ಟಿಗರಹಳ್ಳಿಯಲ್ಲಿ ಭಾನುವಾರ ಕನಕ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ''ನನಗೆ ಸಚಿವನಾಗಬೇಕು ಎಂಬ ಕನಸಿತ್ತು. ಸಚಿವನಾಗದಿದ್ದರೆ ರಾಜಕೀಯ ನಿವೃತ್ತಿಯಾಗಬೇಕು ಎಂದು ತೀರ್ಮಾನಿಸಿದ್ದೆ. ಕನಸು ನನಸು ಮಾಡಿದ ಸಿದ್ದರಾಮಯ್ಯ ಅವರ ಜಪ ಮಾಡುತ್ತೇನೆ. ನನ್ನ ಎದೆ ಬಗೆದರೆ ಅವರೇ ಇರುತ್ತಾರೆ. ಇನ್ನು ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ,'' ಎಂದು ಘೋಷಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗ ಶೆಟ್ಟಿ, ''ಚಿಕ್ಕಬಳ್ಳಾಪುರದ ಶಾಸಕ ಸುಧಾಕರ್‌ ಹೇಳಿದಂತೆ, ಯಾರು ಏನೇ ಹೇಳಿದರೂ ನಮಗೆ ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ. ನಮ್ಮ ಕಷ್ಟಗಳು ಏನೇ ಇದ್ದರೂ ನಾವು ಅವರ ಬಳಿಯೇ ಹೇಳಿಕೊಳ್ಳುತ್ತೇವೆ,'' ಎಂದರು.

ಶಾಸಕ ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ''ಕೆಲವರು ಕೇವಲ ತಮ್ಮ ಮಕ್ಕಳು, ಸೊಸೆಗೆ ಮಾತ್ರ ರಾಜಕೀಯ ಪ್ರವೇಶಕ್ಕೆ ಅವಕಾಶ ನೀಡುತ್ತಾರೆ. ಆದರೆ, ಸಿದ್ದರಾಮಯ್ಯ ಎಲ್ಲ ವರ್ಗದವರಿಗೂ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿದ್ದಾರೆ. ಹಾಗಾಗಿ, ಸಿದ್ದರಾಮಯ್ಯ ಅವರೇ ನಮ್ಮೆಲ್ಲರ ನಾಯಕ,'' ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

''ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು ಏಳು ತಿಂಗಳಾದರೂ ಇದುವರೆಗೆ ಬೆಂಗಳೂರಿನ ರಸ್ತೆಗಳು ಅಭಿವೃದ್ಧಿಯಾಗಿಲ್ಲ. ಕೆಲವರು ಅವರ ವಿರುದ್ಧ ಒಳಸಂಚು ಮಾಡಿ ಪ್ರತಿಸ್ಪರ್ಧಿಯನ್ನು ಹಾಕಿದರು. ಸಿದ್ದರಾಮಯ್ಯ ಅವರು ಮಾಡಿರೋ ಚುನಾವಣೆ ಸಾಲವನ್ನು ಇದುವರೆಗೆ ತೀರಿಸಲು ಆಗುತ್ತಿಲ್ಲ ಎಂಬ ಸುದ್ದಿ ಕೇಳಿ ನೋವಾಗುತ್ತದೆ. ಸಮ್ಮಿಶ್ರ ಸರಕಾರದಲ್ಲಿ ಒಂದು ಮಾತು ಹೆಚ್ಚು ಹಾಡಿದರೂ ಅನರ್ಥಕ್ಕೆ ಕಾರಣವಾಗುತ್ತದೆ'' ಎನ್ನುತ್ತಲೇ ಪರೋಕ್ಷವಾಗಿ ಜೆಡಿಎಸ್‌ ಕಾಲೆಳೆದರು.

ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ, ''ಸರಕಾರಿ ಕಚೇರಿಯಲ್ಲಿ ಬಸವಣ್ಣ ಭಾವಚಿತ್ರ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದವರು ಸಿದ್ದರಾಮಯ್ಯ ಅವರೇ ಹೊರತು, ಯಾವುದೇ ಮಣ್ಣಿನ ಮಕ್ಕಳಲ್ಲ'' ಎಂದು ಟಾಂಗ್‌ ನೀಡಿದರು.

ಕಾಗೆನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಿ.ಎಸ್‌.ಶಿವಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ