ಆ್ಯಪ್ನಗರ

ರೋಷನ್ ಬೇಗ್ ಪ್ರಾಥಮಿಕ ವಿಚಾರಣೆ ಪೂರ್ಣ

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದ ರೋಷನ್‌ ಬೇಗ್‌ ಇತ್ತೀಚೆಗಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Vijaya Karnataka Web 16 Jul 2019, 3:04 pm
ಬೆಂಗಳೂರು: ಶಾಸಕ ರೋಷನ್ ಬೇಗ್ ಅವರ ಪ್ರಾಥಮಿಕ ವಿಚಾರಣೆ ಪೂರ್ಣಗೊಳಿಸಿರುವ ವಿಶೇಷ ತನಿಖಾ ತಂಡ ಮತ್ತೆ ಜುಲೈ.19 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
Vijaya Karnataka Web congress-roshan-baig-shivajingara


ಈ ಕುರಿತು ಪ್ರತಿಕ್ರಿಯಿಸಿರುವ ಬೇಗ್, ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ನಾನು ನಿನ್ನೆ ಪುಣೆಗೆ ತೆರಳಬೇಕು ಅಂತಿದ್ದೆ. ಅಷ್ಟರ ಒಳಗಾಗಿ ಎಸ್ ಐ ಟಿ ವಿಚಾರಣೆಯ ನಿಮಿತ್ತ ಕರೆತಂತು. ಪ್ರಾಥಮಿಕ ವಿಚಾರಣೆ ಮುಗಿದಿದ್ದು ಇನ್ನು ಎಲ್ಲಿ ಬೇಕಾದರೂ ಹೋಗಬಹುದು ಎಂದು ಎಸ್ಐಟಿ ಹೇಳಿದೆ. ನಾನೀಗ ಮನೆಗೆ ತೆರಳುತ್ತಿದ್ದೇನೆ. 19 ನೇ ತಾರೀಕು ಮತ್ತೆ ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದಾರೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರೋಷನ್‌ ಬೇಗ್‌ ಅವರನ್ನು ವಿಶೇಷ ತನಿಖಾ ತಂಡ ಸೋಮವಾರ ರಾತ್ರಿ ವಶಕ್ಕೆ ಪಡೆದುಕೊಂಡಿತ್ತು.

ಮುಂಬಯಿಗೆ ತೆರಳಲು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿದ್ದ ರೋಷನ್‌ ಬೇಗ್‌, ಇನ್ನೇನು ವಿಮಾನ ಹತ್ತುವ ಸಿದ್ಧತೆಯಲ್ಲಿದ್ದಾಗಲೇ ಎಸ್‌ಐಟಿ ತಂಡ ಅವರನ್ನು ರಾತ್ರಿ 11 ಗಂಟೆ ಸುಮಾರಿಗೆ ವಶಕ್ಕೆ ಪಡೆದಿತ್ತು. ಬಳಿಕ ವಿಚಾರಣೆಗಾಗಿ ಅವರನ್ನು ಎಸ್‌ಐಟಿ ಕಚೇರಿಗೆ ಕರೆದುಕೊಂಡು ಹೋಗಲಾಗಿತ್ತು.

ಐಎಂಎ ಮಾಲೀಕ ಮನ್ಸೂರ್‌ ಖಾನ್‌ ದೇಶದಿಂದ ಪರಾರಿ ಆಗುವ ಮೊದಲು ಬಿಡುಗಡೆ ಮಾಡಿದ್ದ ಆಡಿಯೊದಲ್ಲಿ, ಶಾಸಕ ರೋಷನ್‌ ಬೇಗ್‌ ತಮ್ಮಿಂದ ಕೋಟಿಗಟ್ಟಲೆ ಹಣ ಪಡೆದಿದ್ದರು ಎಂದು ಆರೋಪಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಎಸ್‌ಐಟಿ ತಂಡ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿತ್ತು. ಮೊದಲ ನೋಟಿಸ್‌ಗೆ ಉತ್ತರಿಸಿದ್ದ ಬೇಗ್‌, ಪತ್ನಿಯ ಅನಾರೋಗ್ಯದ ನೆಪವೊಡ್ಡಿ 15 ದಿನಗಳ ಕಾಲಾವಕಾಶ ಕೇಳಿದ್ದರು. ಅದಕ್ಕೆ ಒಪ್ಪದ ಎಸ್‌ಐಟಿ, ಜು.15ರ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಸೋಮವಾರವೂ ವಿಚಾರಣೆಗೆ ಹಾಜರಾಗದ ಅವರು ಜು.25ರವರೆಗೂ ಸಮಯಾವಕಾಶ ಕೇಳಿದ್ದರು. ಅದಕ್ಕೆ ಒಪ್ಪದ ಎಸ್‌ಐಟಿ ಜು.19ಕ್ಕೆ ವಿಚಾರಣೆಗೆ ಹಾಜರಾಗಬೇಕು ಎಂದು ಸೋಮವಾರ ಮತ್ತೊಂದು ನೋಟಿಸ್‌ ನೀಡಿತ್ತು. ಇಷ್ಟೆಲ್ಲದರ ಬಳಿಕ ಸೋಮವಾರ ತಡರಾತ್ರಿಯಲ್ಲಿ ರೋಷನ್‌ ಬೇಗ್‌ ಅವರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತುವ ಸಿದ್ಧತೆಯಲ್ಲಿದ್ದರು.

ಮುಂಬಯಿಯಿಂದ ದುಬೈಗೆ?

ಅತೃಪ್ತ ಶಾಸಕರನ್ನು ಸೇರಿಕೊಳ್ಳಲು ರೋಷನ್‌ ಬೇಗ್‌ ಅವರು ಮುಂಬಯಿಗೆ ತೆರಳುತ್ತಿದ್ದಾರೆ ಎನ್ನುವ ಸಂಗತಿ ರಾಜಕೀಯ ವಲಯದಲ್ಲಿ ಹರಿದಾಡಿತ್ತು. ಆದರೆ, ಮುಂಬಯಿಗೆಂದು ಬೆಂಗಳೂರಿನಿಂದ ತೆರಳುತ್ತಿದ್ದ ರೋಷನ್‌ ಬೇಗ್‌ ಪುಣೆ ಮೂಲಕವೇ ದುಬೈಗೆ ಹಾರಿಬಿಡುವ ಸಾಧ್ಯತೆಗಳ ಬಗ್ಗೆಯೂ ಪೊಲೀಸ್‌ ವಲಯದಲ್ಲಿ ಅನುಮಾನಗಳು ಹರಿದಾಡಿದ್ದವು. ಈ ಎಲ್ಲಾ ಅನುಮಾನ, ಬೆಳವಣಿಗೆಗಳ ನಡುವೆಯೇ ಅವರನ್ನು ಎಸ್‌ಐಟಿ ತಂಡ ಬಂಧಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ