ಆ್ಯಪ್ನಗರ

ವರ್ಷಧಾರೆಯಲ್ಲ ಇದು ಕಣ್ಣೀರಧಾರೆ: ಮಹಾಮಳೆಗೆ ಆರು ಮಂದಿ ದುರ್ಮರಣ

ಮುಂಗಾರು ಮಳೆ ಮತ್ತು ನೆರೆ ಪ್ರಕೋಪದಿಂದ ರಾಜ್ಯವಿನ್ನೂ ಚೇತರಿಸಿಕೊಂಡಿಲ್ಲ. ಇದೀಗ ಹಿಂಗಾರು ಆರ್ಭಟಿಸುತ್ತಿದೆ. ಕರಾವಳಿ, ಮಲೆನಾಡು ಮತ್ತು ಉತ್ತರಕರ್ನಾಟಕ ಭಾಗದಲ್ಲಿ ಬೆಳೆ, ಮನೆ ಜಖಂ ಆಗಿದೆ. ಮಹಾಮಳೆಗೆ ಒಟ್ಟು ಆರು ಮಂದಿ ಮೃತರಾಗಿದ್ದಾರೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಈ ವಾರವಿಡೀ ವರುಣಾಘಾತವಾಗಲಿದೆ. ಒಟ್ಟಾರೆ ರಾಜ್ಯದ ಹಿಂಗಾರು ನೋಟ

Vijaya Karnataka Web 21 Oct 2019, 9:45 pm
ಬೆಂಗಳೂರು: ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗಗಳಲ್ಲಿ ಹಿಂಗಾರು ಆರ್ಭಟಿಸುತ್ತಿದ್ದು ಭಾರಿ ಹಾನಿಯಾಗಿದೆ. ಮಳೆ ಸಂಬಂ ಘಟನೆಗಳಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಎಕರೆ ಜಮೀನು ಜಲಾವೃತವಾಗಿದೆ. ಹಲವು ಜಿಲ್ಲೆಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ಮುಂಗಾರಿನ ಪ್ರಕೋಪದಿಂದ ಚೇತರಿಸಿಕೊಳ್ಳುತ್ತಿದ್ದವರ ಪಾಲಿಗೆ ಹಿಂಗಾರು ಮಾರಕ ಪೆಟ್ಟು ನೀಡುತ್ತಿದೆ.
Vijaya Karnataka Web RAIN

ಹಾವೇರಿ ನಗರದಲ್ಲಿ ಭಾನುವಾರ ರಾತ್ರಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಬಸವರಾಜ ಹತ್ತಿಮತ್ತೂರ (65) ಎಂಬುವರು ಅಕಸ್ಮಾತ್ ಮಳೆ ನೀರು ತುಂಬಿ ಹರಿಯುತ್ತಿದ್ದ ಚರಂಡಿಗೆ ಬಿದ್ದು ಮೃತಪಟ್ಟಿದ್ದರೆ, ಹೆಗ್ಗೇರಿ ಕೆರೆಗೆ ಅನಾಮಧೇಯ ವ್ಯಕ್ತಿಯ ಶವ ತೇಲಿ ಬಂದಿದೆ. ಹಿರೇಕೆರೂರಲ್ಲಿ ಸುಣ್ಣದ ಕಾಲುವೆಯಲ್ಲಿ ಕೊಚ್ಚಿಹೋಗಿ ಸೊಹೇಬ್ ಇಸ್ಮಾಯಿಲ್ ರಾಣೇಬೆನ್ನೂರ (13) ಎಂಬ ಬಾಲಕ ಸಾವನ್ನಪ್ಪಿದ್ದಾನೆ. ಅಗ್ನಿಶಾಮಕ ದಳ ಮತ್ತು ಈಜು ತಜ್ಞರು ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.

Live:ಜೋರು ಹಿಂಗಾರಿಗೆ ಜನಜೀವನ ದುಸ್ತರ : ಸಂಚಾರ ಸ್ಥಗಿತ, ಬೀದಿಗೆ ಬಿದ್ದ ಜನತೆ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ನಾರಾಯಣಪುರ ಜಲಾಶಯದಿಂದ ಕಷ್ಣಾ ನದಿಗೆ ೨ ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿಬಿಟ್ಟಿದ್ದರಿಂದ ಚಿಂಚೋಡಿ ಗ್ರಾಮದ ಸಂತೋಷ್(16) ಎಂಬ ಬಾಲಕ ಕೊಚ್ಚಿ ಹೋಗಿದ್ದಾನೆ.ಕುಷ್ಟಗಿ ತಾಲೂಕಿನ ತೆಗ್ಗಿಹಾಳ ಗ್ರಾಮಕ್ಕೆ ಹೊಂದಿಕೊಂಡಿರುವ ಹಳ್ಳದಲ್ಲಿ ಕೆಲ ದಿನಗಳ ಹಿಂದೆ ಕೊಚ್ಚಿ ಹೋಗಿದ್ದ ಹನುಮಪ್ಪ ಹೊಳಿಯಪ್ಪ ನಂದ್ಯಾಳ(65) ಅವರ ಶವ ಸೋಮವಾರ ಪತ್ತೆಯಾಗಿದೆ.

ದಕ್ಷಿಣ ಕನ್ನಡದಲ್ಲಿ ಮತ್ತೆ ‘ರೆಡ್‌ ಅಲರ್ಟ್‌’, ಭಾರಿ ಮಳೆ ನಿರೀಕ್ಷೆ

ಸಿಡಿಲು ಬಡಿದು ರೈತ ಸಾವು: ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸಿಡಿಲಿ ಬಡಿದು ರೈತ ಜಯಪ್ಪ ಎನ್ನುವರು ಮೃತಪಟ್ಟಿದ್ದಾರೆ. ನವಲಗುಂದದಲ್ಲಿ ತುಪ್ಪರಿಹಳ್ಳ-ಬೆಣ್ಣೆಹಳ್ಳದ ಸಂಗಮದ ಸ್ಥಳದಲ್ಲಿ ಸಿಲುಕಿದ್ದ ಇಬ್ಬರನ್ನು ಅಕಾರಿಗಳು ಬೋಟ್ ಮೂಲಕ ಕರೆತಂದು ರಕ್ಷಿಸಿದ್ದಾರೆ.

ಮಳೆಗೆ ನಲುಗಿದ ಕರ್ನಾಟಕ: ಪ್ರವಾಹ ಪೀಡಿತ ಪ್ರದೇಶಗಳಿಗೆ ಜಗದೀಶ್ ಶೆಟ್ಟರ್ ಭೇಟಿ

ಪ್ರಯಾಣಿಕರ ರಕ್ಷಣೆ
ಲಕ್ಷೇತ್ಮಶ್ವರ ಸಮೀಪದ ಯಲವಿಗಿ ಗ್ರಾಮದ ಬಳಿ ರೈಲ್ವೆ ಅಂಡರ್ ಬ್ರಿಜ್‌ನಲ್ಲಿ ನೀರಿನಲ್ಲಿ ಸಿಲುಕಿದ್ದ ಖಾಸಗಿ ಬಸ್ಸಿನ ೩೬ ಜನ ಪ್ರಯಾಣಿಕರನ್ನು ಪೊಲೀಸರು ಭಾನುವಾರ ರಾತ್ರಿ ರಕ್ಷಿಸಿದ್ದಾರೆ. ಈ ಬಸ್ ಗದಗದಿಂದ ಬೆಂಗಳೂರು ಹೋಗುತ್ತಿತ್ತು. ರಸ್ತೆಯಲ್ಲಿ 6 ಅಡಿ ನೀರು ನಿಂತಿದ್ದರೂ ಅದನ್ನು ಲೆಕ್ಕಿಸದೇ ಚಾಲಕ ಬಸ್ ಓಡಿಸಿದ್ದಾನೆ. ಆದರೆ ಸ್ವಲ್ಪ ಮುಂದಕ್ಕೆ ಚಲಿಸಿದ ಬಸ್ ನೀರಿನಲ್ಲಿ ಸಿಲುಕಿಕೊಂಡಿದ್ದರಿಂದ ಪ್ರಯಾಣಿಕರು ಚೀರಾಡತೊಡಗಿದರು. ಅಗ್ನಿ ಶಾಮಕ ಸಿಬ್ಬಂದಿ ಪ್ರಯಾಣಿಕರನ್ನು ಕಾಪಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ