ಆ್ಯಪ್ನಗರ

ಸಾಮಾಜಿಕ ಜಾಲತಾಣಗಳಿಂದ ಪೈಲೆಟ್‌ಗಳಲ್ಲಿ ನಿದ್ದೆ ಕಡಿಮೆ: ಐಎಎಫ್ ಮುಖ್ಯಸ್ಥ ಕಳವಳ

ಸಾಮಾಜಿಕ ಜಾಲತಾಣಗಳು ಪೈಲೆಟ್‌ಗಳ ನಿದ್ರೆ ಕಸಿಯುತ್ತಿರುವ ಕಾರಣ ಭಾರತೀಯ ವಾಯುಸೇನೆ ಪೈಲಟ್‌ಗಳ ಸಾಮರ್ಥ್ಯದ ಮೇಲೆ ಋುಣಾತ್ಮಕ ಪರಿಣಾಮ ಬೀರುತ್ತಿದೆ ಎಂದು ಭಾರತೀಯ ವಾಯುಸೇನೆ ಮುಖ್ಯಸ್ಥ ಬೀರೇಂದರ್‌ ಸಿಂಗ್‌ ಧನೋಅ ಕಳವಳ ವ್ಯಕ್ತಪಡಿಸಿದ್ದಾರೆ.

Vijaya Karnataka 15 Sep 2018, 10:08 am
ಬೆಂಗಳೂರು: ಸಾಮಾಜಿಕ ಜಾಲತಾಣಗಳು ಪೈಲೆಟ್‌ಗಳ ನಿದ್ರೆ ಕಸಿಯುತ್ತಿರುವ ಕಾರಣ ಭಾರತೀಯ ವಾಯುಸೇನೆ ಪೈಲಟ್‌ಗಳ ಸಾಮರ್ಥ್ಯದ ಮೇಲೆ ಋುಣಾತ್ಮಕ ಪರಿಣಾಮ ಬೀರುತ್ತಿದೆ ಎಂದು ಭಾರತೀಯ ವಾಯುಸೇನೆ ಮುಖ್ಯಸ್ಥ ಬೀರೇಂದರ್‌ ಸಿಂಗ್‌ ಧನೋಅ ಕಳವಳ ವ್ಯಕ್ತಪಡಿಸಿದ್ದಾರೆ.
Vijaya Karnataka Web air


ನಗರದಲ್ಲಿ ನಡೆಯುತ್ತಿರುವ ಮೂರು ದಿನಗಳ 57ನೇ ಇಂಡಿಯನ್‌ ಸೊಸೈಟಿ ಆಫ್‌ ಏರೋಸ್ಪೇಸ್‌ ಮೆಡಿಸಿನ್‌ ಸಮ್ಮೇಳನದಲ್ಲಿ ಮಾತನಾಡಿ,''ದೀರ್ಘಕಾಲೀನ ನಿದ್ರಾಹೀನತೆಯಿಂದ ಬಳಲುತ್ತಿರುವ ಪೈಲಟ್‌ಗಳು ಪ್ರತಿದಿನದ ಸವಾಲುಗಳನ್ನು ನಿರ್ವಹಿಸಲು ಪರದಾಡುತ್ತಿದ್ದಾರೆ. ಹೀಗಾಗಿ, ಪೈಲಟ್‌ಗಳು ವಿಮಾನ ಹಾರಿಸುವ ಮುನ್ನ ಸೂಕ್ತ ನಿದ್ರೆ ಮಾಡಿದ್ದಾರೋ ಇಲ್ಲವೋ ಎನ್ನುವುದನ್ನು ಪತ್ತೆ ಹಚ್ಚುವ ವ್ಯವಸ್ಥೆಯನ್ನು ಕಂಡು ಹಿಡಿಯಬೇಕು'' ಎಂದು ಇನ್ಸ್‌ಟಿಟ್ಯೂಟ್‌ ಆಫ್‌ ಏರೋಸ್ಪೇಸ್‌ ಮೆಡಿಸಿನ್‌ನ (ಐಎಎಂ) ಅಧಿಕಾರಿಗಳಿಗೆ ಮನವಿ ಮಾಡಿದರು.

''ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಅಗತ್ಯಕ್ಕಿಂತ ಹೆಚ್ಚಿನ ಬಳಕೆಯಿಂದ ಪೈಲಟ್‌ಗಳ ನಿದ್ರೆ ಮೇಲೆ ಪರಿಣಾಮ ಬಿದ್ದಿದೆ. ಪೈಲಟ್‌ಗಳ ನೇರ ಸಾಮಾಜಿಕ ಸಂವಹನ ಕೌಶಲ ಕಮ್ಮಿಯಾಗುತ್ತಿದೆ. ಈ ಹಿಂದೆ ಪೈಲಟ್‌ ಮದ್ಯಪಾನ ಮಾಡಿದ್ದು ಗೊತ್ತಾದರೆ ವಿಮಾನ ಹಾರಾಟಕ್ಕೆ ಅವಕಾಶ ನೀಡುತ್ತಿರಲಿಲ್ಲ. ಈಗ ಮದ್ಯಪಾನ ತಪಾಸಣೆ ಯಂತ್ರಗಳು ಇವೆ. ಆದರೆ, ಈಗ ನಿದ್ರಾಹೀನತೆ ಪತ್ತೆ ಮಾಡಬೇಕಿದೆ,'' ಎಂದು ಅವರು ಮಾತನಾಡಿದರು.

ಗಗನಯಾನಿಗಳ ಆಯ್ಕೆಗೆ ಒಂದು ವರ್ಷ ಕಾಲಾವಕಾಶ ಬೇಕು:

ಐಎಎಂ ಕಮಾಂಡೆಂಟ್‌ ಏರ್‌ ಕಮೋಡರ್‌ ಅನುಪಮ್‌ ಅಗರ್‌ವಾಲ್‌,''ಗಗನಯಾನಿಗಳ ಜೀವನವೇ ವಿಭಿನ್ನ. ಸಣ್ಣ ನೌಕೆಯೊಳಗೆ, ಸಹಜೀವನ ಇಲ್ಲದೇ ವಾಸ ಇರಬೇಕಿರುವ ಕಾರಣ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧಗೊಳ್ಳುವುದು ಸವಾಲಿನ ಕೆಲಸವಾಗಿರಲಿದೆ. ಅವರ ಆರೋಗ್ಯದಲ್ಲಿ ಅಸಮತೋಲನ ಕೂಡ ಆಗುವಂತಿಲ್ಲ. ಅದನ್ನು ಸಮರ್ಥವಾಗಿ ಸಿದ್ಧಪಡಿಸುವ ಸಾಮರ್ಥ್ಯ ನಮಗೆ ಇದೆ. ಹೀಗಾಗಿ ಗಗನಯಾನಿಗಳನ್ನು ಆಯ್ಕೆ ಮಾಡಲು ಕನಿಷ್ಠ 12ರಿಂದ 14 ತಿಂಗಳು ಕಾಲಾವಕಾಶ ಬೇಕು,''ಎಂದು ತಿಳಿಸಿದರು.

ಏರ್‌ ಮಾರ್ಷಲ್‌ ಸಿ.ಕೆ. ರಂಜನ್‌ ಮಾತನಾಡಿ, ''ಬಾಹ್ಯಾಕಾಶವೂ ಮೆಡಿಸಿನ್‌ ಕ್ಷೇತ್ರಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ. ಇಸ್ರೊದ ಗಗನಯಾನ ಯೋಜನೆಯಲ್ಲಿ ಐಎಎಂ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದೆ. ಯಾನಿಗಳ ಆಯ್ಕೆ, ತರಬೇತಿ, ಅಲ್ಲಿನ ಗಾಳಿ ಗುಣಮಟ್ಟ ಮತ್ತು ಪ್ರಮಾಣ ಸೇರಿದಂತೆ ಹಾಗೂ ನೌಕೆಗೆ ಭೂಮಿಗೆ ಮರಳಿದ ಮೇಲೆ ಯಾನಿಗಳು ರಿಕವರಿ ಮಾಡಿಕೊಳ್ಳುವವರೆಗೂ ಜವಾಬ್ದಾರಿ ಇರುತ್ತದೆ'' ಎಂದು ಹೇಳಿದರು.

ನೇರವಾಗಿ ಮನುಷ್ಯನ ರವಾನೆ ಮಾಡಲಿರುವ ಮೊದಲ ದೇಶ:

''ಬೇರೆ ರಾಷ್ಟ್ರಗಳು ಮೊದಲು ಬೇರೆ ಪ್ರಾಣಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಪ್ರಯೋಗ ಮತ್ತು ಪರಿಶೀಲನೆ ನಡೆಸಿದ ನಂತರ ಮನುಷ್ಯರನ್ನು ಕಳುಹಿಸಿದ್ದಾರೆ. ಆದರೆ, ಭಾರತ ಮೊದಲ ಪ್ರಯತ್ನದಲ್ಲೇ ನೇರವಾಗಿ ಮನುಷ್ಯನನ್ನೇ ಬಾಹ್ಯಾಕಾಶಕ್ಕೆ ಕಳುಹಿಸುತ್ತಿದೆ. ಹೀಗಾಗಿ, ನಾವು ಭಾರಿ ಎಚ್ಚರ ವಹಿಸಬೇಕಿದೆ''
-ಅನುಪಮ್‌ ಅಗರ್‌ವಾಲ್‌
***********************

ಡಾಕ್ಟರ್‌-ಪೈಲಟ್‌ ಯೋಜನೆ ಜಾರಿ

''ಕಳೆದ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಜೆಟ್‌ ಮತ್ತು ಸರಕು ವಿಮಾನ ಹಾರಾಟ ನಡೆಸುವ ಸಾಮರ್ಥ್ಯದ 'ಡಾಕ್ಟರ್‌ ಪೈಲಟ್‌' ಯೋಜನೆಯನ್ನು ಜಾರಿ ಮಾಡಲು ಭಾರತೀಯ ವಾಯುಸೇನೆ (ಐಎಎಫ್‌) ನಿರ್ಧರಿಸಿದೆ'' ಎಂದು ವಾಯುಸೇನೆ ಮುಖ್ಯಸ್ಥ ಬಿ.ಎಸ್‌ ಧನೋಅ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ