ಆ್ಯಪ್ನಗರ

ಯಡಿಯೂರಪ್ಪ ಒರಟ, ಮೋಸಗಾರನಲ್ಲ: ಸ್ಪೀಕರ್‌ ರಮೇಶ್‌ ಕುಮಾರ್‌

ಯಡಿಯೂರಪ್ಪ ಒರಟು ಸ್ವಭಾವದವರು. ಆದರೆ ಮೋಸಗಾರರಲ್ಲ. ಸದನದಲ್ಲಿ ನನ್ನ ಒಳ್ಳೆಯತನದಿಂದ ಅವರ ಒರಟುತನವನ್ನು ನಾನು ತಿಳಿಗೊಳಿಸಬಲ್ಲೆ ಎಂಬ ವಿಶ್ವಾಸವಿದೆ.

Vijaya Karnataka 26 May 2018, 7:42 am
ಬೆಂಗಳೂರು: 'ಇಲ್ಲಿ ಯಾರೂ ಸರ್ವಜ್ಞರಲ್ಲ, ಆದರೆ ಸದನದಲ್ಲಿ ನಮ್ಮ ನಡವಳಿಕೆಯನ್ನು ನೋಡಿ ಜನ ನೊಂದುಕೊಳ್ಳುವ, ನಾಚಿಕೊಳ್ಳುವ ಸಂದರ್ಭಕ್ಕೆ ನಾವ್ಯಾರು ಕಾರಣರಾಗುವುದು ಬೇಡ' ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web 2505-2-2-101


'ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಒರಟು ಸ್ವಭಾವದವರು. ಆದರೆ ಮೋಸಗಾರರಲ್ಲ. ಸದನದಲ್ಲಿ ನನ್ನ ಒಳ್ಳೆಯತನದಿಂದ ಅವರ ಒರಟುತನವನ್ನು ನಾನು ತಿಳಿಗೊಳಿಸಬಲ್ಲೆ ಎಂಬ ವಿಶ್ವಾಸವಿದೆ. ಅದೇ ರೀತಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರನ್ನೂ ಕಾಲ ಹಣ್ಣು ಮಾಡಿದೆ. ಇಲ್ಲಿ ಯಾರೂ ಸರ್ವಜ್ಞರಲ್ಲ. ಪ್ರತಿಯೊಬ್ಬ ಸದಸ್ಯರ ಮಾತು ಮೊನಚಾಗಿರಲಿ, ಆದರೆ ಅರ್ಥಗರ್ಭಿತವಾಗಿರಲಿ,' ಎಂದು ಅಭಿಪ್ರಾಯಪಟ್ಟರು.

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ''ಶಾಸನಸಭೆ ಪ್ರಜಾಪ್ರಭುತ್ವದ ಪವಿತ್ರ ಅಂಗ. ರಾಜ್ಯದ ಎಲ್ಲ ಜನರು ಇಲ್ಲಿ ಬಂದು ತಮ್ಮ ಗೋಳು ಹೇಳಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಚುನಾವಣಾ ಆಯೋಗದ ಮೂಲಕ 224 ಜನರನ್ನು ಪ್ರಜಾಪ್ರತಿನಿಧಿ ಕಾಯಿದೆ ಅನ್ವಯ ಆಯ್ಕೆ ಮಾಡಿ ಕಳುಹಿಸಿಕೊಡುತ್ತಾರೆ. ನೀವು ಆ ಎಲ್ಲ ಜನರ ಪ್ರತಿನಿಧಿಗಳಾಗಿರುವುದರಿಂದ ಅವರ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳಬೇಕು,'' ಎಂದು ಕಿವಿ ಮಾತು ಹೇಳಿದರು.

''ಹಿಂದೆ ಪುಂಡರು ಬಲಾಡ್ಯರು ಸಮಾಜವನ್ನು ನಿಯಂತ್ರಿಸುತ್ತಿದ್ದರು.ಅವರಲ್ಲಿ ದೊಡ್ಡ ಪುಂಡ ದೊರೆಯಾಗುತ್ತಿದ್ದ.ಅವನಿಗಿಂತ ದೊಡ್ಡ ಪುಂಡ ಚಕ್ರವರ್ತಿಯಾಗುತ್ತಿದ್ದ. ಆದರೂ ಜನರು ಅವರಿಗೆ ರಾಜಾ ಪ್ರತ್ಯಕ್ಷ ದೇವತಾ ಎಂದು ಕರೆದು ದೈವತ್ವದ ಪಟ್ಟ ಕಟ್ಟಿದರು. ಇದರರ್ಥ ದೊರೆಯಾದವನಿಗೆ ಜನರ ಬಗ್ಗೆ ಪ್ರೀತಿ ಬರಲಿ ಎಂದು. ಈ ರೀತಿ ದೇವರೆಂದು ಕರೆಸಿಕೊಂಡವರಲ್ಲಿ ಕೆಲವರು ಸದಾಚಾರದಿಂದ ನಡೆದುಕೊಂಡರೆ, ಇನ್ನು ಕೆಲವರು ಮನಸೋ ಇಚ್ಛೆ ವರ್ತಿಸಿದರು. ಈ ಎಲ್ಲದರ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ಆಶಯಗಳು ಮೂಡತೊಡಗಿದವು. ಬ್ರಿಟನ್‌ನಲ್ಲಿ ಅದು ಮೊದಲು ಆರಂಭಗೊಂಡಿತು. 1964ರಲ್ಲಿ ಬ್ರಿಟಿಷ್‌ ಪಾರ್ಲಿಮೆಂಟ್‌ನಲ್ಲಿ ದೊರೆಯ ಶಿರಚ್ಛೇದನ ಮಾಡುವ ಮೂಲಕ ಅದು ಇನ್ನಷ್ಟು ತೀವ್ರಗೊಂಡಿತು. ವಿಶ್ವದ ಎಲ್ಲ ಭಾಗಗಳಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುವುದಕ್ಕೆ ಅನೇಕರು ಪ್ರಾಣಬಿಟ್ಟಿದ್ದಾರೆ. ನಮಗೋಸ್ಕರ ಬಿಟ್ಟುಹೋದ ಈ ಮಹಾನ್‌ ಕೊಡುಗೆಯನ್ನು ಜತನದಿಂದ ಕಾಯ್ದುಕೊಳ್ಳಬೇಕಿದೆ,'' ಎಂದು ಅಭಿಪ್ರಾಯಪಟ್ಟರು.

''1994ರಲ್ಲಿ ಎಚ್‌.ಡಿ.ದೇವೇಗೌಡರು ನನ್ನನ್ನು ಸ್ಪೀಕರ್‌ ಆಗಿ ನೇಮಕ ಮಾಡಿದರು. ಯಾರೂ ನಂಬಿಕಸ್ಥರು ಇಲ್ಲ ಎಂದು ನಿನಗೆ ಈ ಹುದ್ದೆ ನೀಡುತ್ತಿದ್ದೇನೆ ಎಂದು ಅಂದು ಹೇಳಿದ್ದರು. ಈಗ ಮತ್ತೆ ನನ್ನ ಪಕ್ಷ ಅದೇ ನಂಬಿಕೆಯಿಂದ ಈ ಜವಾಬ್ದಾರಿ ನೀಡಿದೆ. ಇಂದಿರಾಗಾಂಧಿ ನನಗೆ ರಾಜಕೀಯ ಜನ್ಮ ನೀಡಿದರೆ, ಅರಸು ತಮ್ಮ ಜತೆ ಹೆಜ್ಜೆ ಹಾಕುವುದಕ್ಕೆ ದಾರಿ ಮಾಡಿಕೊಟ್ಟರು. ಕೆ.ಎಚ್‌.ರಂಗನಾಥ್‌ ರಾಜಕೀಯ ಸಂಸ್ಕಾರ ಕೊಟ್ಟರೆ, ದೇವೇಗೌಡರು ಮೊದಲು ಅವಕಾಶ ಕಲ್ಪಿಸಿದರು. ಸ್ವಭಾವತಃ ಬಾವುಕನಾದ ನಾನು ಯಾರೇ ಚಿಕ್ಕ ಸಹಾಯ ಮಾಡಿದರೂ ಮರೆಯುವುದಿಲ್ಲ'' ಎಂದು ಹೇಳಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ