ಆ್ಯಪ್ನಗರ

ದಲಿತರೆಂಬ ಕಾರಣಕ್ಕೆ ಸಂಸದರಿಗೇ ಊರು ಪ್ರವೇಶಿಸಲು ನಿರ್ಬಂಧ!

ದಲಿತರೆಂಬ ಕಾರಣಕ್ಕೆ ಚಿತ್ರದುರ್ಗ ಸಂಸದ ಎ ನಾರಾಯಣಸ್ವಾಮಿ ಅವರಿಗೆ ಗ್ರಾಮ ಪ್ರವೇಶಿಸಲು ನಿರಾಕರಿಸಿದ ಘಟನೆ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದಿದೆ.

Vijaya Karnataka 17 Sep 2019, 8:10 am
ಪಾವಗಡ: ದಲಿತರು ಎಂಬ ಕಾರಣಕ್ಕೆ ಸಮಾಜ ಕಲ್ಯಾಣ ಖಾತೆ ಮಾಜಿ ಸಚಿವರು ಹಾಗೂ ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಅವರಿಗೆ ಹಟ್ಟಿಯೊಳಗೆ ಪ್ರವೇಶಿಸಲು ನಿರಾಕರಿಸಿದ ಘಟನೆ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಸೋಮವಾರ ನಡೆದಿದೆ.
Vijaya Karnataka Web a narayana swamy


ಬೆಂಗಳೂರಿನ ಬಯೋಕಾನ್‌ ಕಂಪನಿ ಹಾಗೂ ನಾರಾಯಣ ಹೃದಯಾಲಯದ ಅಧಿಕಾರಿಗಳ ತಂಡದ ಜತೆ ನಾರಾಯಣಸ್ವಾಮಿ ಅವರು ಪಾವಗಡ ಪಟ್ಟಣದ ಶಿಥಿಲಗೊಂಡ ಶಾಲಾ ಕಟ್ಟಡಗಳು ಸೇರಿದಂತೆ ಸಮೀಪದ ರಂಗಸಮುದ್ರದ ಶಾಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ, ಪೆಮ್ಮನಹಳ್ಳಿಗೊಲ್ಲರಹಟ್ಟಿಗೆ ತೆರಳಿದರು.

ಆದರೆ, ಅಲ್ಲಿಗೊಲ್ಲರಹಟ್ಟಿಯ ಚಿತ್ತಯ್ಯ, ನಾಗರಾಜು, ದೊಡ್ಡಯ್ಯ ಮತ್ತಿತರ ಯುವಕರು ಹಾಗೂ ಮಹಿಳೆಯರು ಸಂಸದರನ್ನು ಹಟ್ಟಿಯ ಪ್ರವೇಶದ್ವಾರದಲ್ಲೇ ತಡೆದು, ''ನಮ್ಮ ಪದ್ಧತಿ ಪ್ರಕಾರ, ಮಾದಿಗ ಸಮುದಾಯದವರು ನಮ್ಮ ಹಟ್ಟಿಯೊಳಗೆ ಪ್ರವೇಶಿಸುವಂತಿಲ್ಲ,'' ಎಂದು ನಿರ್ಬಂಧ ಹೇರಿದರು.

ಈ ವೇಳೆ ಸಂಸದರು ಶಾಂತಿಯುತವಾಗಿ ಗ್ರಾಮಸ್ಥರೊಂದಿಗೆ ಮಾತನಾಡಿ, ''ಇಂತಹ ಅನಿಷ್ಟ ಪದ್ಧತಿಗಳನ್ನು ಕೈ ಬಿಡಿ,'' ಎಂದು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಹಟ್ಟಿಯ ಜನ ಮಾತ್ರ ಪ್ರವೇಶ ನಿರಾಕರಿಸಿ, ನಮ್ಮ ಹಟ್ಟಿಗೆ ಕುಡಿಯುವ ನೀರು ಮತ್ತು ವಸತಿ ಸೌಲಭ್ಯ ಕಲ್ಲಿಸಬೇಕೆಂದು ಒತ್ತಾಯಿಸಿದರೇ ವಿನಃ, ಸಂಸದರಿಗೆ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಸುಮಾರು 45 ನಿಮಿಷಗಳವರೆಗೆ ಅಲ್ಲಿದ್ದ ಸಂಸದರು, ಕೊನೆಗೆ ಪೆಮ್ಮನಹಳ್ಳಿಗೊಲ್ಲರಹಟ್ಟಿಯೊಳಕ್ಕೆ ಪ್ರವೇಶಿಸಲಾಗದೇ ಹಿಂತಿರುಗಿದರು.

ಅಸಹಾಯಕ ಪೊಲೀಸರು

ಪಾವಗಡ ಪೊಲೀಸರು ಸ್ಥಳದಲ್ಲೇ ಇದ್ದರೂ ಸಹ ಅಸಹಾಯಕರಂತೆ ಕಂಡುಬಂದರು. ಬಿಜೆಪಿಯ ಕೆಲ ಸ್ಥಳೀಯ ಮುಖಂಡರು ಹಟ್ಟಿಯ ಜನರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಈ ವೇಳೆ ಸಂಸದರು ''ಶೇ.80ರಷ್ಟು ಗೊಲ್ಲಸಮುದಾಯ ನನಗೆ ಮತ ನೀಡಿದೆ. ಹಟ್ಟಿಗಳ ಅಭಿವೃದ್ಧಿಗೆ ನಾನು ಕಟಿ ಬದ್ಧನಾಗಿದ್ದರೂ ನೀವು ಇಂತಹ ಅನಿಷ್ಟ ಪದ್ಧತಿ ಅನುಸರಿಸುತ್ತಿರುವುದು ಸರಿಯಲ್ಲ,'' ಎಂದು ಹಟ್ಟಿಯ ಜನರನ್ನು ಉದ್ದೇಶಿಸಿ ಹೇಳಿದರು.

ಆದರೆ, ಗೊಲ್ಲರಹಟ್ಟಿಯ ಜನ ಮಾತ್ರ ಇದ್ಯಾವುದಕ್ಕೂ ಕಿವಿಗೊಡಲಿಲ್ಲ. ಹಟ್ಟಿಯ ಚಿತ್ತಯ್ಯ ಮಾತನಾಡಿ, ''ಹರಿಜನರು ನಮ್ಮ ಹಟ್ಟಿಯೊಳಗೆ ಪ್ರವೇಶಿಸುವಂತಿಲ್ಲ. ಇದು ತಲೆತಲಾಂತರಗಳಿಂದ ಮುಂದುವರೆದುಕೊಂಡು ಬಂದಿರುವ ಪದ್ಧತಿ,'' ಎಂದರು.

ನಾನೂ ಸಹ ಗೊಲ್ಲಸಮುದಾಯಕ್ಕೆ ಸೇರಿದ್ದು, ತಾಲೂಕಿನಲ್ಲಿಇಂತಹ ಅನಿಷ್ಟ ಪದ್ಧತಿಯನ್ನು ಇನ್ನೂ ಮುಂದುವರೆಸಿಕೊಂಡು ಹೋಗುತ್ತಿರುವುದು ದುರದೃಷ್ಟಕರ. ಈ ಬಗ್ಗೆ ಹಟ್ಟಿ ಜನರಲ್ಲಿಅರಿವು ಮೂಡಿಸಬೇಕಾಗಿದೆ.
ಕಡಪಲಕೆರೆ ನವೀನ್‌, ಬಿಜೆಪಿ ಮುಖಂಡ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ