ಆ್ಯಪ್ನಗರ

ಶೂನ್ಯ ಬಂಡವಾಳ ಕೃಷಿಗೆ 50 ಕೋಟಿ ರೂ.

ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಣಯ

Vijaya Karnataka 26 Oct 2018, 6:30 am
ಬೆಂಗಳೂರು: ಬಜೆಟ್‌ ಘೋಷಿತ ಶೂನ್ಯ ಬಂಡವಾಳ ಕೃಷಿ ಉತ್ತೇಜನಕ್ಕೆ 50 ಕೋಟಿ ರೂ. ನೀಡಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
Vijaya Karnataka Web ವಿಧಾನಸೌಧ
ವಿಧಾನಸೌಧ


ಶೂನ್ಯ ಬಂಡವಾಳ ಕೃಷಿ ಬಗ್ಗೆ ರೈತರಿಗೆ ತರಬೇತಿ ನೀಡುವುದು ಸೇರಿದಂತೆ ಈ ಕಾರ್ಯಕ್ರಮದ ಪ್ರೋತ್ಸಾಹಕ್ಕೆ ಈ ನೆರವು ನೀಡಲಾಗುತ್ತಿದೆ. ಈಗಾಗಲೇ ಶೂನ್ಯ ಬಂಡವಾಳ ಕೃಷಿ ಮಾಡುತ್ತಿರುವ ರೈತರನ್ನೂ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಸಂಪುಟ ಸಭೆಯ ವಿವರ ನೀಡಿದ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ ತಿಳಿಸಿದರು.

''ನ್ಯಾಷನಲ್‌ ಮಿನರಲ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ನ ಗಣಿ ಗುತ್ತಿಗೆ ಅವಧಿ ಪೂರ್ಣಗೊಳ್ಳುತ್ತಿದ್ದು ಕೇಂದ್ರ ಸರಕಾರವು ಇದರ ನವೀಕರಣ ಮಾಡಲಿದೆ. ಈ ವೇಳೆ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಬರುವಂತೆ ಮಾಡಲು ಷರತ್ತು ವಿಧಿಸಲು ತೀರ್ಮಾನಿಸಲಾಗಿದೆ'' ಎಂದರು.

ನಗರದಲ್ಲಿ ಅಂಗನವಾಡಿ

ನಗರ ಪ್ರದೇಶದಲ್ಲಿ 250 ಅಂಗನವಾಡಿ ಪ್ರಾರಂಭಿಸಲು 17.50 ಕೋಟಿ ರೂ. ನೀಡಲಾಗುವುದು. ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆಯಡಿ (ಜಿಐಎಸ್‌) ಆಸ್ತಿಗಳ ಮಾಹಿತಿ ಸಂಗ್ರಹಿಸಲು ತೀರ್ಮಾನಿಸಲಾಯಿತು. ಹಿಂದುಳಿದ ವರ್ಗಗಳ ಆಯೋಗ ಹಾಗೂ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ಮಹಿಳಾ ಸದಸ್ಯರೊಬ್ಬರನ್ನು ನಾಮಕರಣ ಮಾಡಲು ಸಮ್ಮತಿಸಲಾಯಿತು ಎಂದು ಹೇಳಿದರು.

ಕುಳಾಯಿ ಬಂದರು

''ದಕ್ಷಿಣ ಕನ್ನಡ ಜಿಲ್ಲೆಯ ಕುಳಾಯಿಯಲ್ಲಿ 196.51 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೀನುಗಾರಿಕೆ ಬಂದರು ನಿರ್ಮಿಸುವ ಪ್ರಸ್ತಾವಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಈ ಯೋಜನೆಗೆ ಶೇ.50 ರಷ್ಟು ಮೊತ್ತವನ್ನು ಕೇಂದ್ರ ಸರಕಾರ ಒದಗಿಸಲಿದೆ. ಶೇ.45ರಷ್ಟು ವೆಚ್ಚವನ್ನು ನವ ಮಂಗಳೂರು ಬಂದರು ಟ್ರಸ್ಟ್‌ ನೀಡಲಿದೆ. ಉಳಿದದ್ದನ್ನು ರಾಜ್ಯ ಸರಕಾರ ಭರಿಸಲಿದೆ,'' ಎಂದು ಸಚಿವ ಬಂಡೆಪ್ಪ ಕಾಶಂಪುರ ತಿಳಿಸಿದರು.

ಹುಬ್ಬಳ್ಳಿ-ಧಾರವಾಡಕ್ಕೆ ಪ್ರತ್ಯೇಕ ಸಾರಿಗೆ ವ್ಯವಸ್ಥೆ

''ಹುಬ್ಬಳ್ಳಿ-ಧಾರವಾಡ ನಡುವೆ ಬಿಎಂಟಿಸಿ ಮಾದರಿಯಲ್ಲಿ ಪ್ರತ್ಯೇಕ ನಗರ ಸಾರಿಗೆ ವ್ಯವಸ್ಥೆ ತರಲು ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಉದ್ದೇಶಕ್ಕೆ ಬಿಆರ್‌ಟಿಎಸ್‌ ಎಂಬ ಕಂಪನಿ ಆರಂಭಿಸಲಾಗುತ್ತದೆ. ಇದಕ್ಕೆ 35 ಕೋಟಿ ರೂ. ಅನುದಾನ ನೀಡಲಾಗುತ್ತಿದೆ,'' ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪುರ ತಿಳಿಸಿದರು.

ಹಾಸನ ಆಸ್ಪತ್ರೆಗೆ 141 ಕೋಟಿ ರೂ.

''ಹಾಸನ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ 450 ಹಾಸಿಗೆ ಸಾಮರ್ಥ್ಯ‌ದ ಆಸ್ಪತ್ರೆ ನಿರ್ಮಿಸಲು 141.20 ಕೋಟಿ ರೂ. ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು'' ಎಂದು ಸಚಿವ ಬಂಡೆಪ್ಪ ಕಾಶಂಪುರ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ