ಆ್ಯಪ್ನಗರ

45 ತಾಲೂಕುಗಳು ಪ್ರವಾಹಪೀಡಿತ: ಸಚಿವ ಆರ್‌.ವಿ. ದೇಶಪಾಂಡೆ

8 ಜಿಲ್ಲೆಗಳಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ವಿಪರೀತ ಪ್ರವಾಹ, ಭೂ ಕುಸಿತ, ಬೆಳೆಹಾನಿ, ಜೀವಹಾನಿಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಕ್ಕೆ ಎನ್.ಡಿ.ಆರ್.ಎಫ್. ಅಡಿಯಲ್ಲಿ ಪರಿಹಾರ ಕೋರಿ ಮನವಿ ಸಲ್ಲಿಸಲಾಗಿತ್ತು. ಮಳೆ ಹಾನಿಯಿಂದಾದ ನಷ್ಟವನ್ನು ಆಧರಿಸಿ, ಪ್ರವಾಹಪೀಡಿತ ತಾಲೂಕುಗಳೆಂದು ಘೋಷಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

Vijaya Karnataka Web 30 Sep 2018, 9:19 pm
ಬೆಂಗಳೂರು: ಭಾರೀ ಮಳೆಯಿಂದ ತತ್ತರಿಸಿ, ಅಪಾರ ಪ್ರಮಾಣದ ಹಾನಿಗೀಡಾಗಿರುವ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳ 45 ತಾಲೂಕುಗಳನ್ನು ಸರಕಾರವು `ಪ್ರವಾಹಪೀಡಿತ' ಎಂದು ಘೋಷಿಸಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
Vijaya Karnataka Web RV Deshpande


ಈ ಬಗ್ಗೆ ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೇಲ್ಕಂಡ 8 ಜಿಲ್ಲೆಗಳಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ವಿಪರೀತ ಪ್ರವಾಹ, ಭೂ ಕುಸಿತ, ಬೆಳೆಹಾನಿ, ಜೀವಹಾನಿಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಕ್ಕೆ ಎನ್.ಡಿ.ಆರ್.ಎಫ್. ಅಡಿಯಲ್ಲಿ ಪರಿಹಾರ ಕೋರಿ ಮನವಿ ಸಲ್ಲಿಸಲಾಗಿತ್ತು. ಮಳೆ ಹಾನಿಯಿಂದಾದ ನಷ್ಟವನ್ನು ಆಧರಿಸಿ, ಪ್ರವಾಹಪೀಡಿತ ತಾಲೂಕುಗಳೆಂದು ಘೋಷಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ಮುಖ್ಯವಾಗಿ, ಈ ತಾಲೂಕುಗಳನ್ನು ಪ್ರವಾಹಪೀಡಿತ ಎಂದು ಘೋಷಿಸಿರುವುದರಿಂದ, ಇಲ್ಲಿನ ಸಂತ್ರಸ್ತರು ರಾಷ್ಟ್ರೀಕೃತ ಮತ್ತು ಷೆಡ್ಯೂಲ್ಡ್ ಬ್ಯಾಂಕುಗಳಲ್ಲಿ ಮಾಡಿರುವ ಸಾಲಗಳ ಮರುಪಾವತಿಗೆ ಹೆಚ್ಚಿನ ಕಾಲಾವಕಾಶ ಸಿಗಲಿದೆ. ಪ್ರವಾಹ, ಅನಾವೃಷ್ಟಿ, ಅಗ್ನಿ ಅವಘಡ ಸೇರಿದಂತೆ ಇತ್ಯಾದಿ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಸಾಲ ಮರುಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡಲು ಆರ್.ಬಿ.ಐ. ನಿಯಮಾವಳಿಗಳಲ್ಲಿ ಅವಕಾಶವಿದೆ. ಜತೆಗೆ, ಇಂತಹ ಸಂದರ್ಭಗಳಲ್ಲಿ ಸಂತ್ರಸ್ತರ ಅಲ್ಪಾವಧಿ ಬೆಳೆಸಾಲವು ದೀರ್ಘಾವಧಿ ಬೆಳೆ ಸಾಲವಾಗಿ ಮಾರ್ಪಡುತ್ತದಲ್ಲದೆ, ಹೊಸ ಸಾಲವನ್ನು ತೆಗೆದುಕೊಳ್ಳಲು ಕೂಡ ಅವಕಾಶ ದೊರೆಯುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಅಲ್ಲದೆ, ಕೃಷಿ ಕ್ಷೇತ್ರವು ಸೇರಿದಂತೆ ಮಿಕ್ಕೆಲ್ಲ ಕ್ಷೇತ್ರಗಳ ಚಟುವಟಿಕೆಗಳು ಎಂದಿನಂತೆ ನಡೆಯಲು ಅಗತ್ಯವಿರುವ ಎಲ್ಲ ಪರಿಹಾರ ಕ್ರಮಗಳನ್ನೂ ಒದಗಿಸಲು ಆರ್.ಬಿ.ಐ ನಿಯಮಾವಳಿಗಳ ಅಡಿಯಲ್ಲಿ ಅವಕಾಶವಿದೆ ಎಂದು ದೇಶಪಾಂಡೆ ನುಡಿದಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಈ ನಿಟ್ಟಿನಲ್ಲಿ ರಾಜ್ಯ ಮಟ್ಟದ ಬ್ಯಾಂಕರ್‍ಗಳ ಸಭೆ ನಡೆಸಲಾಗಿತ್ತು. ಜತೆಗೆ, ಕೊಡಗಿನಲ್ಲಿ ಜಿಲ್ಲಾ ಮಟ್ಟದ ಬ್ಯಾಂಕರುಗಳ ಸಭೆ ಕೂಡ ನಡೆದಿದೆ. ಇವೆರಡೂ ಸಭೆಗಳಲ್ಲಿ ಪ್ರವಾಹಪೀಡಿತ ತಾಲ್ಲೂಕುಗಳ ಸಂತ್ರಸ್ತರಿಗೆ ಬ್ಯಾಂಕ್ ನಿಯಮಾವಳಿಗಳ ಪ್ರಕಾರ ಸಾಧ್ಯವಿರುವ ನೆರವು ನೀಡಲು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಹಪೀಡಿತ ತಾಲೂಕುಗಳೆಂದು ಘೋಷಿಸಿ, ಅಧಿಸೂಚನೆ ಹೊರಡಿಸಿರುವುದರಿಂದ ಇಷ್ಟೂ ತಾಲೂಕುಗಳ ನೆರೆಪೀಡಿತರಿಗೆ ಮತ್ತು ರೈತರಿಗೆ ಹೆಚ್ಚಿನ ನೆರವು ಸಿಗಲಿದೆ ಎಂದು ದೇಶಪಾಂಡೆ ಮಾಹಿತಿ ನೀಡಿದ್ದಾರೆ.

ಮಿಕ್ಕಂತೆ, ಪ್ರವಾಹಪೀಡಿತರಿಗೆ ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ ಅಗತ್ಯ ಪರಿಹಾರಗಳನ್ನು ಒದಗಿಸಲಾಗುತ್ತಿದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ.

ಪ್ರವಾಹಪೀಡಿತ ತಾಲೂಕುಗಳು:
ಕೊಡಗು ಜಿಲ್ಲೆ
ಮಡಿಕೇರಿ
ಸೋಮವಾರಪೇಟೆ
ವೀರರಾಜಪೇಟೆ

ದಕ್ಷಿಣ ಕನ್ನಡ ಜಿಲ್ಲೆ
ಮಂಗಳೂರು
ಬಂಟ್ವಾಳ
ಪುತ್ತೂರು
ಸುಳ್ಯ
ಬೆಳ್ತಂಗಡಿ

ಶಿವಮೊಗ್ಗ ಜಿಲ್ಲೆ
ಭದ್ರಾವತಿ
ಶಿಕಾರಿಪುರ
ಸಾಗರ
ಸೊರಬ
ತೀರ್ಥಹಳ್ಳಿ
ಹೊಸನಗರ
ಶಿವಮೊಗ್ಗ

ಉಡುಪಿ ಜಿಲ್ಲೆ
ಉಡುಪಿ
ಕುಂದಾಪುರ
ಕಾರ್ಕಳ

ಉತ್ತರ ಕನ್ನಡ ಜಿಲ್ಲೆ
ಕಾರವಾರ
ಅಂಕೋಲಾ
ಕುಮಟಾ
ಹೊನ್ನಾವರ
ಭಟ್ಕಳ
ಸಿದ್ದಾಪುರ
ಶಿರಸಿ
ಮುಂಡಗೋಡು
ಯಲ್ಲಾಪುರ
ಜೋಯಿಡಾ
ಹಳಿಯಾಳ

ಹಾಸನ ಜಿಲ್ಲೆ

ಸಕಲೇಶಪುರ
ಅರಕಲಗೂಡು
ಹೊಳೆನರಸೀಪುರ
ಆಲೂರು

ಚಿಕ್ಕಮಗಳೂರು ಜಿಲ್ಲೆ

ಚಿಕ್ಕಮಗಳೂರು
ನರಸಿಂಹರಾಜಪುರ
ಮೂಡಿಗೆರೆ
ಶೃಂಗೇರಿ
ಕೊಪ್ಪ

ಮೈಸೂರು ಜಿಲ್ಲೆ
ಹೆಗ್ಗಡದೇವನ ಕೋಟೆ
ಹುಣಸೂರು
ಕೃಷ್ಣರಾಜ ನಗರ
ಮೈಸೂರು
ನಂಜನಗೂಡು
ಪಿರಿಯಾಪಟ್ಟಣ
ಟಿ.ನರಸೀಪುರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ