ಆ್ಯಪ್ನಗರ

ಮಹದಾಯಿ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ

ಸುಪ್ರೀಂ ಕೋರ್ಟ್‌ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಯಾವುದೇ ನದಿಯ ನೀರನ್ನು ನದಿಪಾತ್ರದ ರಾಜ್ಯಗಳಿಗೆ ಹಂಚಿಕೆ ಮಾಡುವಾಗ ಅನುಸರಿಸಬೇಕಾದ 'ನ್ಯಾಯಸಮ್ಮತ ಹಂಚಿಕೆ' ಸೂತ್ರವನ್ನು ಮಹದಾಯಿ ಜಲವಿವಾದ ನ್ಯಾಯಾಧಿಕರಣ ಅನುಸರಿಸಿಲ್ಲ ಎಂಬುದು ರಾಜ್ಯದ ಪ್ರಮುಖ ದೂರಾಗಿದೆ.

Vijaya Karnataka Web 13 Nov 2018, 8:23 am
ಹೊಸದಿಲ್ಲಿ: ಮಹದಾಯಿ ನದಿಯಲ್ಲಿ ವಾರ್ಷಿಕವಾಗಿ ಲಭ್ಯವಿರುವ 188.06 ಟಿಎಂಸಿ ನೀರಿನಲ್ಲಿ 147 ಟಿಎಂಸಿ ನೀರನ್ನು ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗಲು ಬಿಟ್ಟಿರುವ ಮಹದಾಯಿ ಜಲವಿವಾದ ನ್ಯಾಯಾಧಿಕರಣ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಕರ್ನಾಟಕ ದೂರಿದೆ.
Vijaya Karnataka Web Supreme court


ಮಹದಾಯಿ ನದಿ ನೀರನ್ನು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರಗಳಿಗೆ ಹಂಚಿಕೆ ಮಾಡಿ ಕಳೆದ ಆ.14ರಂದು ನ್ಯಾ. ಜೆ.ಎಂ.ಪಾಂಚಾಲ್‌ ನೇತೃತ್ವದ ನ್ಯಾಯಾಧಿಕರಣ ನೀಡಿರುವ ತೀರ್ಪು ಪ್ರಶ್ನಿಸಿ ಸೋಮವಾರ ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್‌ ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದ್ದು, ಅರ್ಜಿಯಲ್ಲಿ ಈ ರೀತಿ ದೂರಲಾಗಿದೆ.

ಸುಪ್ರೀಂ ಕೋರ್ಟ್‌ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಯಾವುದೇ ನದಿಯ ನೀರನ್ನು ನದಿಪಾತ್ರದ ರಾಜ್ಯಗಳಿಗೆ ಹಂಚಿಕೆ ಮಾಡುವಾಗ ಅನುಸರಿಸಬೇಕಾದ 'ನ್ಯಾಯಸಮ್ಮತ ಹಂಚಿಕೆ' ಸೂತ್ರವನ್ನು ಮಹದಾಯಿ ಜಲವಿವಾದ ನ್ಯಾಯಾಧಿಕರಣ ಅನುಸರಿಸಿಲ್ಲ ಎಂಬುದು ರಾಜ್ಯದ ಪ್ರಮುಖ ದೂರಾಗಿದೆ.

24.15 ಟಿಎಂಸಿ ನೀರಿನ ಬೇಡಿಕೆಯನ್ನು ಕರ್ನಾಟಕ ಮಂಡಿಸಿತ್ತು. ಆದರೆ, ಕೇವಲ 5.40 ಟಿಎಂಸಿ ನೀರು ಹಂಚಿಕೆ ಮಾಡಿರುವುದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಕಳಸಾ ನಾಲೆಯ 3.56 ಟಿಎಂಸಿ ಹಾಗೂ ಬಂಡೂರಿ ನಾಲೆಯ 4 ಟಿಎಂಸಿ ನೀರನ್ನು ತಿರುವು ಯೋಜನೆ ಮೂಲಕ ಮಲಪ್ರಭಾ ನದಿಗೆ ಹರಿಸಿಕೊಳ್ಳಬೇಕೆಂಬ ರಾಜ್ಯದ ಬೇಡಿಕೆಗೂ ನ್ಯಾಯಾಧಿಕರಣ ಮನ್ನಣೆ ನೀಡಲಿಲ್ಲ. ಈ ಎರಡೂ ನಾಲೆಗಳಿಂದ ಕ್ರಮವಾಗಿ ಕೇವಲ 1.72 ಹಾಗೂ 2.18 ಟಿಎಂಸಿ ನೀರು ಮಾತ್ರ ರಾಜ್ಯಕ್ಕೆ ದೊರೆತಿತ್ತು.

ನದಿ ಪಾತ್ರದ ಮೇಲ್ಭಾಗದ ರಾಜ್ಯಗಳಾದ ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಗೆ ನೀರು ಕೊಟ್ಟರೆ ತನ್ನ ಹಿತಕ್ಕೆ ಧಕ್ಕೆ ಆಗಲಿದೆ ಎಂಬುದನ್ನು ಸಾಬೀತು ಮಾಡಲು ಗೋವಾ ವಿಫಲವಾಗಿದೆ. ಆದರೂ ರಾಜ್ಯದ ವಿದ್ಯುತ್‌ ಯೋಜನೆಗೆ ಕೇಳಲಾದ 14 ಟಿಎಂಸಿ ನೀರನ್ನು ಕೊಡದೇ ನ್ಯಾಯಾಧಿಕರಣ ಕೇವಲ 8.02 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ ಎಂದು ಮೇಲ್ಮನವಿಯಲ್ಲಿ ಹೇಳಲಾಗಿದೆ.

ಹುಬ್ಬಳ್ಳಿ-ಧಾರವಾಡ ಸೇರಿದಂತೆ ಮುಂಬೈ ಕರ್ನಾಟಕದ ನೂರಾರು ಹಳ್ಳಿಗಳಿಗೆ ಕುಡಿಯುವ ನೀರು ಕೊಡುವ ಯೋಜನೆಯ ವಿರುದ್ಧ ಸಲ್ಲಿಸಿದ್ದ ಆಕ್ಷೇಪವನ್ನು ಗೋವಾ ಹಿಂದಕ್ಕೆ ಪಡೆದಿದ್ದರೂ ಈ ಕುಡಿಯುವ ನೀರಿನ ಯೋಜನೆಗೆ ಅಗತ್ಯವಿರುವ ನೀರನ್ನು ನ್ಯಾಯಾಧಿಕರಣ ಹಂಚಿಕೆ ಮಾಡಲಿಲ್ಲ ಎಂದೂ ಕರ್ನಾಟಕ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ವಾದಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ