ಆ್ಯಪ್ನಗರ

ಮೈತ್ರಿ ಪಕ್ಷದಿಂದ ಶಿಸ್ತು-ದಕ್ಷತೆಯ ಆಡಳಿತ

ಅಧಿಕಾರಕ್ಕೆ ಬಂದ ದಿನದಿಂದಲೂ ಸರಕಾರ ಬೀಳಿಸುವುದಕ್ಕೆ ಬಿಜೆಪಿ ಪ್ರಯತ್ನ ನಡೆಸುತ್ತಲೇ ಇದೆ...

Vijaya Karnataka 21 Jun 2019, 5:00 am
ಬೆಂಗಳೂರು: ಅಧಿಕಾರಕ್ಕೆ ಬಂದ ದಿನದಿಂದಲೂ ಸರಕಾರ ಬೀಳಿಸುವುದಕ್ಕೆ ಬಿಜೆಪಿ ಪ್ರಯತ್ನ ನಡೆಸುತ್ತಲೇ ಇದೆ. ಆದರೆ ರಾಜ್ಯದ ಮೈತ್ರಿ ಸರಕಾರ ಗಟ್ಟಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
Vijaya Karnataka Web paramewar


ರಾಜ್ಯ ಸರಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರ ತಂದಿರುವ 'ಮೈತ್ರಿ ಪರ್ವ - ಸರಕಾರದ ಸಾಧನೆಗಳ ಅವಲೋಕನ' ಕೈಪಿಡಿ ಬಿಡುಗಡೆ ಮಾಡಿ, ''ಅನೇಕ ಏಳು-ಬೀಳುಗಳು, ಪ್ರತಿಪಕ್ಷದ ಅಸಹಕಾರದ ಮಧ್ಯೆ ನಾವು ಒಂದು ವರ್ಷ ಪೂರೈಸಿದ್ದೇವೆ,''ಎಂದರು.

''2008ರಿಂದ 2013ರಲ್ಲಿ ಬಿಜೆಪಿ ನೀಡಿದ ಕೆಟ್ಟ ಆಡಳಿತವನ್ನು ಜ್ಞಾಪಿಸಿಕೊಂಡ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷ ಮೈತ್ರಿ ಸರಕಾರವನ್ನು ಶಿಸ್ತಿನಿಂದ ನಡೆಸುತ್ತಿದೆ. ಶಿಕ್ಷಣ, ಕೃಷಿ, ಆರೋಗ್ಯ, ನೀರಾವರಿ, ಕೈಗಾರಿಕೆಗೆ ಆದ್ಯತೆ ನೀಡಲಾಗಿದೆ. ಬೆಂಗಳೂರಿನ ಆದ್ಯತೆಗೆ ಅನುಸಾರವಾಗಿ 9000 ಕೋಟಿ ರೂ. ವೆಚ್ಚದಲ್ಲಿ 'ನವ ಬೆಂಗಳೂರು' ಯೋಜನೆ ರೂಪಿಸಲಾಗಿದೆ. ಜಪಾನ್‌ ತಂತ್ರಜ್ಞರ ನೆರವಿನೊಂದಿಗೆ ಕಾವೇರಿ 5ನೇ ಹಂತಕ್ಕೆ ಚಾಲನೆ ನೀಡಿದ್ದೇವೆ,'' ಎಂದು ವಿವರಿಸಿದರು.

''ಸಾಮಾನ್ಯವಾಗಿ ವರ್ಷಕ್ಕೆ ಒಮ್ಮೆ ನಡೆಸುವ ಜಿಲ್ಲಾಡಳಿತದ ಸಭೆಯನ್ನು ನಾವು ಮೂರು ಬಾರಿ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದೇವೆ. ಆಡಳಿತ ನಿಷ್ಕ್ರಿಯವಾಗಿದೆ ಎಂಬ ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ. 11.5 ಲಕ್ಷ ರೈತರಿಗೆ ಋುಣಮುಕ್ತಿ ಪತ್ರ ನೀಡಲಾಗುತ್ತದೆ. ಆಡಳಿತ ಜನರ ಮನೆ ಬಾಗಿಲಿಗೆ ತಲುಪುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ,'' ಎಂದು ಪ್ರಶ್ನಿಸಿದರು.

''ರಾಜ್ಯದಲ್ಲಿ ಅನಾವೃಷ್ಟಿಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಮಡಿಕೇರಿಯ ಮಳೆ ಹಾನಿಗೆ 16000 ಕೋಟಿ ರೂ. ಪರಿಹಾರ ಕೇಳಿದರೆ ಕೇಂದ್ರವು 940 ಕೋಟಿ ರೂ. ಮಾತ್ರ ಕೇಂದ್ರ ಬಿಡುಗಡೆ ಮಾಡಿದೆ. ಆದರೂ ಮೈತ್ರಿ ಸರಕಾರ ನಿಭಾಯಿಸಿದೆ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ