ಆ್ಯಪ್ನಗರ

ಬಲಪಂಥೀಯರ ಬಂಧನ ನಿಲ್ಲಿಸದಿದ್ದರೆ ರಾಜ್ಯಪಾಲರಿಗೆ ದೂರು

ರಾಷ್ಟ್ರೀಯವಾದಿ ಯುವಕರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ರಾಜ್ಯ ಸರಕಾರ ವಿನಾ ...

Vijaya Karnataka 5 May 2019, 5:00 am
ಬೆಂಗಳೂರು: ರಾಷ್ಟ್ರೀಯವಾದಿ ಯುವಕರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ರಾಜ್ಯ ಸರಕಾರ ವಿನಾ ಕಾರಣ ಬಂಧಿಸುತ್ತಿದೆ. ಗೃಹ ಸಚಿವ ಎಂ.ಬಿ.ಪಾಟೀಲರು ಇದೇ ರೀತಿ ಅಧಿಕಾರ ದುರ್ಬಳಕೆ ಮುಂದುವರಿಸಿದರೆ ರಾಜ್ಯಪಾಲರಿಗೆ ದೂರು ನೀಡಬೇಕಾಗುತ್ತದೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್‌ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web kota-srinivas-poojary


ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ''ಕಳೆದೊಂದು ತಿಂಗಳಿಂದ ಬಿಜೆಪಿ ಕಾರ್ಯಕರ್ತರು, ರಾಷ್ಟ್ರೀಯವಾದಿಗಳು ಹಾಗೂ ಬಲಪಂಥೀಯ ಪರ ಪತ್ರಕರ್ತರನ್ನು ಗುರಿಯಾಗಿಸಿ ಪ್ರಕರಣ ದಾಖಲಿಸಿ ಬಂಧಿಸಲಾಗುತ್ತಿದೆ. ಪೊಲೀಸರ ಮೂಲಕ ಅಧಿಕಾರ ದುರ್ಬಳಕೆ ಮಾಡಲಾಗುತ್ತಿದೆ. ರಾಜ್ಯ ಸರಕಾರ ತಕ್ಷಣ ಈ ತಪ್ಪನ್ನು ತಿದ್ದಿಕೊಳ್ಳಬೇಕು. ಇಲ್ಲವಾದರೆ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕುಸಿದಿದೆ ಎಂದು ರಾಜ್ಯಪಾಲರಿಗೆ ದೂರು ನೀಡುವುದು ಅನಿವಾರ್ಯವಾಗುತ್ತದೆ,'' ಎಂದು ಹೇಳಿದರು.

''ಎಂ.ಬಿ.ಪಾಟೀಲರು ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ನಮಗೆ ಅಪಾರ ನಿರೀಕ್ಷೆ ಇತ್ತು. ಪೊಲೀಸ್‌ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತರುತ್ತಾರೆಂದು ನಾವು ಭಾವಿಸಿದ್ದೆವು. ಪೊಲೀಸರ ವೇತನ ಪರಿಷ್ಕರಣೆ ಜತೆಗೆ ರಾಘವೇಂದ್ರ ಔರಾದ್ಕರ್‌ ವರದಿ ಜಾರಿ ಮಾಡುತ್ತಾರೆಂಬ ನಿರೀಕ್ಷೆ ಹೊಂದಿದ್ದೆವು. ಆದರೆ ತಾವು ಮಾಡಬೇಕಾದ ಕೆಲಸವನ್ನು ಬಿಟ್ಟು ಸರಕಾರದ ವಿರುದ್ಧ ಧ್ವನಿ ಎತ್ತಿದವರನ್ನು ಬಂಧಿಸುವ ಹೀನ ಕೃತ್ಯ ಮಾಡುತ್ತಿದ್ದಾರೆ,''ಎಂದು ಆಕ್ಷೇಪ ವ್ಯಕ್ತಪಡಿಸಿದರು.

''ನಾವು ನಿಮ್ಮ ರಾಜೀನಾಮೆಯನ್ನು ಈಗಲೇ ಕೇಳುವುದಿಲ್ಲ. ಗೃಹ ಸಚಿವರಾಗಿ ನೀವು ನಿಮ್ಮ ತಪ್ಪನ್ನು ತಿದ್ದಿಕೊಳ್ಳುತ್ತೀರಿ ಎಂಬ ನಿರೀಕ್ಷೆ ಇದೆ. ಹತ್ತರ ಜತೆ ಹನ್ನೊಂದು ಎಂಬ ರೀತಿ ವರ್ತಿಸಿದರೆ ಬಿಜೆಪಿ ಕಾರ್ಯಕರ್ತರು ಬೀದಿಗೆ ಇಳಿದು ಹೋರಾಟ ನಡೆಸಬೇಕಾಗುತ್ತದೆ. ಬಿಬಿಎಂಪಿ ಅಧಿಕಾರಿ ಮಥಾಯ್‌ ಅವರಿಗೆ ನಾಲ್ಕು ವರ್ಷದಿಂದ ನಿಮ್ಮ ಸರಕಾರ ಸಂಬಳ ನೀಡದೇ ಇರುವುದನ್ನು ಗಮನಿಸಿದರೆ ಈ ಸರಕಾರ ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂಬುದು ಅರ್ಥವಾಗುತ್ತದೆ,'' ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಅರುಣ್‌ ಶಹಾಪೂರ್‌ ಮಾತನಾಡಿ, ''ಶಾಲಾ ಬ್ಯಾಗ್‌ ಹೊರೆ ತಗ್ಗಿಸಲು ರಾಜ್ಯ ಸರಕಾರ ಮುಂದಾಗಿರುವುದು ಸ್ವಾಗತಾರ್ಹ. ಈ ಹಿಂದೆ ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿದ್ದ ಪ್ರಕಾಶ್‌ ಜಾವಡೇಕರ್‌ ಈ ಬಗ್ಗೆ ಚಿಂತನೆ ನಡೆಸಿದ್ದರು. ಕೆಲ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ,'' ಎಂದು ಹೇಳಿದರು.

ಭವಾನಿ ಅಲ್ಲ ಸಿಂಧೂರಿ

''ಪರೀಕ್ಷಾ ಫಲಿತಾಂಶದಲ್ಲೂ ಸಚಿವ ರೇವಣ್ಣ ರಾಜಕೀಯ ಬೆರೆಸಿರುವುದು ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದೆ. ಹಾಸನ ಜಿಲ್ಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿರುವುದಕ್ಕೆ ಹಾಸನ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಕಾರಣ ಎಂದು ಅವರು ಹೇಳಿಕೆ ನೀಡಿರುವುದು ಸರಿಯಲ್ಲ. ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣಾಧಿಕಾರಿಗಳ ಪರಿಶ್ರಮದಿಂದ ಈ ಫಲಿತಾಂಶ ಬಂದಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯವೇ ಸ್ಪಷ್ಟನೆ ನೀಡಿದ ಬಳಿಕವಾದರೂ ರೇವಣ್ಣ ವಾಸ್ತವ ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ ಮೊಂಡುತನ ಪ್ರದರ್ಶಿಸುತ್ತಿರುವ ಅವರು ತಮ್ಮ ಹೇಳಿಕೆಯನ್ನು ಈಗಲೂ ಸಮರ್ಥಿಸಿಕೊಳ್ಳುತ್ತಿರುವುದು ದುರ್ದೈವ,'' ಎಂದು ಶ್ರೀನಿವಾಸ್‌ ಪೂಜಾರಿ ಹೇಳಿದರು.

''ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ತನ್ವೀರ್‌ ಸೇಠ್‌ ರಾರ‍ಯಂಕಿಂಗ್‌ ವ್ಯವಸ್ಥೆ ಕೈ ಬಿಡುವುದಾಗಿ ಹೇಳಿದ್ದರು. ಆದರೆ ಸರಕಾರ ಮತ್ತೆ ಹಳೆ ವ್ಯವಸ್ಥೆಯನ್ನು ಅನುಸರಿಸುತ್ತಿರುವುದು ನೋವಿನ ಸಂಗತಿ. ಕಳೆದ ಕೆಲವು ತಿಂಗಳಿಂದ ಶಿಕ್ಷಣ ಇಲಾಖೆಗೆ ಸಚಿವರು ಇಲ್ಲದಿರುವುದು ಸರಕಾರ ಹೇಗೆ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿ ,''ಎಂದು ವ್ಯಂಗ್ಯವಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ