ಆ್ಯಪ್ನಗರ

ಎಸ್‌ಐ ಪ್ರಶ್ನೆ ಪತ್ರಿಕೆ ಸೋರಿಕೆ ಯತ್ನದಲ್ಲಿ ಎಸ್‌ಐ ಭಾಗಿ: 16 ಮಂದಿ ಬಂಧನ, 41 ಲಕ್ಷ ರೂ. ವಶ

ಭಾನುವಾರ ನಡೆದ ಸಬ್‌ಇನ್ಸ್‌ಪೆಕ್ಟರ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಯತ್ನದಲ್ಲಿ ಪೊಲೀಸರು, ಕೋಚಿಂಗ್‌ ಸೆಂಟರ್‌ನ ಶಿಕ್ಷಕರು, ಕ್ರಿಕೆಟ್‌ ಬೆಟ್ಟಿಂಗ್‌ ಮಾಫಿಯಾದವರೂ ಶಾಮೀಲಾಗಿದ್ದಾರೆ. ಎರಡು ದಿನ ಸಿಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಯುವತಿರು ಸೇರಿ 16 ಮಂದಿಯನ್ನು ಬಂಧಿಸಿ 41 ಲಕ್ಷ ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.

Vijaya Karnataka 15 Jan 2019, 5:00 am
ಬೆಂಗಳೂರು: ಭಾನುವಾರ ನಡೆದ ಸಬ್‌ಇನ್ಸ್‌ಪೆಕ್ಟರ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಯತ್ನದಲ್ಲಿ ಪೊಲೀಸರು, ಕೋಚಿಂಗ್‌ ಸೆಂಟರ್‌ನ ಶಿಕ್ಷಕರು, ಕ್ರಿಕೆಟ್‌ ಬೆಟ್ಟಿಂಗ್‌ ಮಾಫಿಯಾದವರೂ ಶಾಮೀಲಾಗಿದ್ದಾರೆ. ಎರಡು ದಿನ ಸಿಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಯುವತಿರು ಸೇರಿ 16 ಮಂದಿಯನ್ನು ಬಂಧಿಸಿ 41 ಲಕ್ಷ ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.
Vijaya Karnataka Web sub inspector exam question paper leak scam
ಎಸ್‌ಐ ಪ್ರಶ್ನೆ ಪತ್ರಿಕೆ ಸೋರಿಕೆ ಯತ್ನದಲ್ಲಿ ಎಸ್‌ಐ ಭಾಗಿ: 16 ಮಂದಿ ಬಂಧನ, 41 ಲಕ್ಷ ರೂ. ವಶ


ಪಿಎಸ್‌ಐ ಪರೀಕ್ಷೆ ಸುಸೂತ್ರವಾಗಿ ನಡೆದ ಹಿನ್ನೆಲೆಯಲ್ಲಿ ಕಮಿಷನರ್‌ ಸುನಿಲ್‌ಕುಮಾರ್‌, ಹೆಚ್ಚುವರಿ ಆಯುಕ್ತ ಅಲೋಕ್‌ ಕುಮಾರ್‌, ಡಿಸಿಪಿ ಗಿರೀಶ್‌ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡರು.

''ಪರೀಕ್ಷೆಗೂ ನಾಲ್ಕು ದಿನಗಳ ಮೊದಲೇ ಕೆಲವು ಶಂಕಿತರು ಮತ್ತು ಏಜೆಂಟರುಗಳ ಮೇಲೆ ನಿಗಾ ಇಟ್ಟಿದ್ದರಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಸಾಧ್ಯ ಆಗಲಿಲ್ಲ. ಪೊಲೀಸ್‌ ಸಿಬ್ಬಂದಿ ಹಾಗೂ ಕೋಚಿಂಗ್‌ ಸೆಂಟರ್‌ಗಳ ಶಿಕ್ಷಕರುಗಳೂ ಸೋರಿಕೆ ಜಾಲದಲ್ಲಿರುವುದು ಗೊತ್ತಾಗಿದೆ,''ಎಂದು ತಿಳಿಸಿದರು.

ಗದ್ದೆಯೊಳಗೆ ಓಡಿ ತಪ್ಪಿಸಿಕೊಂಡರು

''ತುಮಕೂರು, ಗೋಕಾಕ, ಗದಗ, ವಿಜಯಪುರ ಸೇರಿ ನಾನಾ ಕಡೆಗಳಲ್ಲಿ 25 ರಿಂದ 30 ಮಂದಿ ಪರೀಕ್ಷಾರ್ಥಿಗಳನ್ನು ಕೂಡಿ ಹಾಕಿಕೊಂಡಿದ್ದರು. ಕರ್ನಾಟಕದ ಎಲ್ಲ ಕಡೆ ಏಕ ಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದರಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಸಾಧ್ಯ ಆಗಲಿಲ್ಲ. ಮಧ್ಯರಾತ್ರಿ ಪ್ರಶ್ನೆ ಪತ್ರಿಕೆ ಸಿಕ್ಕರೂ ಸಿಗಬಹುದು ಎನ್ನುವುದು ಅವರ ನಿರೀಕ್ಷೆಯಾಗಿತ್ತು. ಶನಿವಾರ ಮಧ್ಯರಾತ್ರಿ 1 ಗಂಟೆ ಕಳೆದ ನಂತರ ಪ್ರಶ್ನೆ ಪತ್ರಿಕೆ ಸೋರಿಕೆ ಸಾಧ್ಯವಿಲ್ಲ ಎನ್ನುವುದು ಖಚಿತವಾಗಿ ಕೂಡಿಹಾಕಿದ್ದ ಪರೀಕ್ಷಾರ್ಥಿಗಳನ್ನು ಬಿಟ್ಟು ಕಳುಹಿಸಿದರು. ಆ ವೇಳೆ ನಮ್ಮ ತಂಡಗಳು ದಾಳಿ ನಡೆಸಿದ್ದವು. ಬಹಳಷ್ಟು ಮಂದಿ ಗದ್ದೆಯೊಳಗೆ ಓಡಿ ತಪ್ಪಿಸಿಕೊಂಡರು. ಆದರೆ ಬಂಧಿತರಿಂದ ಎಲ್ಲರ ಹೆಸರನ್ನು ಪಡೆಯಲಾಗುತ್ತದೆ,''ಎಂದರು.

ಖಾಲಿ ಚೆಕ್‌-ಮನೆ ಪತ್ರ

''ಏಜೆಂಟರು ಅಭ್ಯರ್ಥಿಗಳಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿಗಳನ್ನು ಸಂಗ್ರಹಿಸಿಕೊಂಡಿದ್ದರು. ಖಾಲಿ ಚೆಕ್‌ಗಳನ್ನು ಪಡೆದುಕೊಂಡಿದ್ದರು, ಕೊಡಲು ಹಣ ಇಲ್ಲದವರಿಂದ ಮನೆಪತ್ರಗಳನ್ನು ಪಡೆದಿದ್ದರು,'' ಎಂದರು.

ಬಂಧಿತರಾದವರು

ಬೆಂಗಳೂರಿನ ಬಸವರಾಜು, ಹೊಳಿಯಪ್ಪ, ಸಂತೋಷ್‌, ನಾಗರಾಜು, ದಿಲೀಪ್‌ಕುಮಾರ್‌, ಹರ್ಷ ಕುಮಾರ್‌, ಯದುಕುಮಾರ್‌, ಕಾರ್ತಿಕ್‌, ಸುರೇಶ, ಶಿವಕುಮಾರ್‌, ಭಾಗ್ಯವಂತ ಸಗರೆ, ಅರುಣ್‌ ರಾಮಪ್ಪ, ಹನುಮೇಶ್‌, ನೀಲಮ್ಮ ಕರಗೊಂಡ, ಜಯಶ್ರೀ ರಾಥೋಡ್‌, ಭೀಮಸಿಂಗ್‌ ಶಂಕರ್‌ ರಾಥೋಡ್‌.

ಎಸ್‌ಐ ಬಂಧನ

ಪ್ರಶ್ನೆ ಪತ್ರಿಕೆ ಸೋರಿಕೆ ಯತ್ನ ಆರೋಪದ ಮೇಲೆ ವೈರ್‌ಲೆಸ್‌ ವಿಭಾಗದ ಎಸ್‌ಐ ನಾಗರಾಜು ಅವರನ್ನು ಬಂಧಿಸಲಾಗಿದೆ. ಪೊಲೀಸ್‌ ಪೇದೆಗಳಾದ ರಮೇಶ್‌ ಸೇರಿ ಇನ್ನಿಬ್ಬರು ಶಾಮೀಲಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಆದರೆ ಅವರು ತಮ್ಮ ದಾಖಲೆಗಳನ್ನು ಬಿಟ್ಟು ಪರಾರಿ ಆಗಿದ್ದಾರೆ. ಗೋಕಾಕದ ಚಾಣಕ್ಯ ಕೋಚಿಂಗ್‌ ಸೆಂಟರ್‌ನ ಶಿಕ್ಷಕರು ಭಾಗಿ ಆಗಿರುವುದರ ಬಗ್ಗೆ ಸುಳಿವು ಸಿಕ್ಕಿದೆ. ಕ್ರಿಕೆಟ್‌ ಬೆಟ್ಟಿಂಗ್‌ ಮಾಫಿಯಾದ ಸುರೇಶ್‌ನನ್ನೂ ಇದೇ ಪ್ರಕರಣದಲ್ಲಿ ಬಂಧಿಸಲಾಗಿದೆ.

25 ಕೋಟಿ ಮತ್ತು ಒಂದು ಲಕ್ಷ

ಸಿಸಿಬಿ ಕಾರ್ಯಾಚರಣೆಯಿಂದಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ತಪ್ಪಿಸಿ ಮರು ಪರೀಕ್ಷೆಗಾಗಿ ವೆಚ್ಚವಾಗಬಹುದಾದ 25 ಕೋಟಿಗೂ ಅಧಿಕ ಮೊತ್ತವನ್ನು ಸರಕಾರಕ್ಕೆ ಉಳಿಸಿದಂತಾಗಿದೆ. ಕಾರ್ಯಚರಣೆಗಾಗಿ ಸಿಸಿಬಿ ಎಸಿಪಿ ವೇಣುಗೋಪಾಲ್‌ ಮತ್ತು ಬಾಲರಾಜು ತಂಡಕ್ಕೆ ಒಂದು ಲಕ್ಷ ರೂ ಬಹುಮಾನವನ್ನು ನಗರ ಪೊಲೀಸ್‌ ಕಮಿಷನರ್‌ ಘೋಷಿಸಿದ್ದಾರೆ.


ರಾಜ್ಯದಲ್ಲಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಜಾಲವನ್ನು ಬೇರು ಸಮೇತ ಕಿತ್ತಾಕುವ ದೃಷ್ಟಿಯಿಂದ ಇದು ಸಿಸಿಬಿ ಪಾಲಿಗೆ ಬಹಳ ದೊಡ್ಡ ಕಾರ್ಯಾಚರಣೆ. ಜಾಲ ಹರಡಿರುವ ಜಿಲ್ಲೆಗಳಿಗೆ ಅಲೋಕ್‌ಕುಮಾರ್‌ ಅವರೇ ಹೋಗಿ ಸಂಬಂಧಪಟ್ಟವರನ್ನು ಕರೆದು ಎಚ್ಚರಿಕೆ ನೀಡಲಿದ್ದಾರೆ.

-ಗಿರೀಶ್‌, ಡಿಸಿಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ