ಆ್ಯಪ್ನಗರ

ಅನರ್ಹ ಶಾಸಕರೆದೆಯಲ್ಲಿ ಢವ ಢವ - ಸೆ. 23 ನಿರ್ಧಾರವಾಗುತ್ತೆ ಭವಿಷ್ಯ

ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಅನರ್ಹಗೊಂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಭವಿಷ್ಯ ಸೆ. 23, ಸೋಮವಾರ ನಿರ್ಧಾರವಾಗಲಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಆಧಾರ ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದೋ ಇಲ್ಲವೋ ಎಂಬುವುದು ನಿರ್ಧಾರವಾಗುತ್ತದೆ.

Vijaya Karnataka Web 22 Sep 2019, 2:18 pm


ಬೆಂಗಳೂರು : ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿಯಲ್ಲಿ ಅನರ್ಹಗೊಂಡ 17 ಶಾಸಕರ ಭವಿಷ್ಯ ಸೆ. 23, ಸೋಮವಾರ ನಿರ್ಧಾರವಾಗಲಿದೆ. ಸ್ಪೀಕರ್ ಅನರ್ಹ ಆದೇಶ ಪ್ರಶ್ನಿಸಿ ಕಾಂಗ್ರೆಸ್- ಜೆಡಿಎಸ್ ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಪಟ್ಟಿಯಲ್ಲಿ ಈ ಪ್ರಕರಣ ಏಳನೇ ಸರದಿಯಲ್ಲಿದ್ದು ಚುನಾವಣೆ ಘೋಷಣೆಯ ಹಿನ್ನೆಲೆಯಲ್ಲಿ ಶಾಸಕರ ಭವಿಷ್ಯ ಏನಾಗುತ್ತದೆ ಎಂಬ ಕುತೂಹಲ ಕೆರಳಿಸಿದೆ.
Vijaya Karnataka Web rebal mla


ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ 17 ಶಾಸಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ತಿಂಗಳು ಕಳೆದಿವೆ. ಆದರೆ ಅರ್ಜಿ ವಿಚಾರಣೆ ಪ್ರತಿಬಾರಿಯೂ ಮುಂದೂದಲ್ಪಡುತ್ತಿತ್ತು. ಶಾಸಕರು ತುರ್ತು ವಿಚಾರಣೆಗೆ ಮನವಿ ಮಾಡಿದ್ದರೂ ನ್ಯಾಯಾಲಯ ಸ್ಪಂದಿಸಿರಲಿಲ್ಲ. ಎಲ್ಲಾ ಪ್ರಕರಣಗಳನ್ನು ಸರದಿಯ ಪ್ರಕಾರವೇ ವಿಚಾರಣೆ ನಡೆಸಲಾಗುತ್ತಿದೆ. ನಿಮ್ಮ ಸರದಿ ಬರುವವರೆಗೂ ಕಾಯಬೇಕು ಹೊರತಾಗಿ , ಅರ್ಜಿಯ ತುರ್ತು ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎನ್ ವಿ ರಮಣ ತಿಳಿಸಿದ್ದರು.

ಈ ನಡುವೆ ಶಾಸಕರ ರಾಜೀನಾಮೆಯಿಂದ ತೆರವಾದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಘೋಷಣೆಯಾಗಿದೆ. ಅಕ್ಟೋಬರ್ 21 ರಂದು ಚುನಾವಣೆ ನಡೆಯಲಿದೆ. ಸ್ಪೀಕರ್ ರೂಲಿಂಗ್ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಹಾಗಿಲ್ಲ. ಈ ಕುರಿತಾಗಿ ಚುನಾವಣಾ ಆಯೋಗ ಕೂಡಾ ಸ್ಪಷ್ಟ ಪಡಿಸಿದೆ. ದಿಢೀರ್ ಚುನಾವಣಾ ಘೋಷಣೆ ಅನರ್ಹ ಶಾಸಕರ ನಿದ್ದೆಗೆಡಿಸಿದ್ದು , ಸೋಮವಾರ ಸೆ. 23ಕ್ಕೆ ನಡೆಯಲಿರುವ ಸುಪ್ರೀಂ ಕೋರ್ಟ್ ವಿಚಾರಣೆ ಶಾಸಕರ ಭವಿಷ್ಯ ನಿರ್ಧಾರ ಮಾಡಲಿದೆ.

ಸ್ಪೀಕರ್ ಆದೇಶ ಕ್ರಮಬದ್ಧವಾಗಿಲ್ಲ ಎಂದು ಆರೋಪಿಸಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಸೇರಿದಂತೆ ಕೆಲವರು ಸೆ. 25 ರಂದು ಕೇಂದ್ರ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಚುನಾವಣಾ ಘೋಷಣೆ ಮಾಡದಂತೆ ವಿನಂತಿಸಿದ್ದರು. ಈ ಕುರಿತಾಗಿ ಪರಿಶೀಲನೆ ನಡೆಸುವುದಾಗಿ ಚುನಾವಣಾ ಆಯೋಗವೂ ಮೇಲ್ ಮೂಲಕ ಉತ್ತರ ನೀಡಿದ್ದರ ಹೊರತಾಗಿ ಬೇರೆ ಯಾವುದೇ ಪ್ರಯೋಜನವಾಗಲಿಲ್ಲ. ಪರಿಣಾಮ ತ್ರಿಶಂಕು ಸ್ಥಿತಿ ಅನರ್ಹ ಶಾಸಕರದ್ದಾಗಿದೆ.

‘ಶಾರನ್ನು ಭೇಟಿಯಾಗಿದ್ದು ನೆರೆಪರಿಹಾರಕ್ಕಲ್ಲ, ಅನರ್ಹರ ಬಚಾವ್‌ಗಾಗಿ’: ಬಿಎಸ್‌ವೈಗೆ ಎಚ್ಡಿಕೆ ಚಾಟಿಈ ಕುರಿತಾಗಿ ಗೋಕಾಕ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ, ಸ್ಫೀಕರ್ ಆದೇಶ ಉಲ್ಲೇಖಿಸಿ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಸ್ಪೀಕರ್ ಆದೇಶ ಒಂದು ಗಂಟೆ ಕೂಡಾ ನಿಲ್ಲುವುದಿಲ್ಲ. ನ್ಯಾಯಾಲಯದಲ್ಲಿ ನಮಗೆ ಜಯ ಸಿಗತ್ತದೆ ಎಂಬ ವಿಶ್ವಾಸವಿದೆ. ಉಪ ಚುನಾವಣೆಯಲ್ಲೂ ಸ್ಪರ್ಧಿಸುತ್ತೇನೆ ಆದರೆ ಯಾವ ಪಕ್ಷದಲ್ಲಿ ಸ್ಪರ್ಧಿಸುತ್ತೇನೆ ಎಂಬುವುದನ್ನು ತೀರ್ಮಾನಿಸಿಲ್ಲ ಎಂದಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನೆರೆ ಪರಿಹಾರದ ಕುರಿತಾಗಿ ಮಾತುಕತೆ ನಡೆಸಲು ಭೇಟಿಯಾಗಿರುವುದಾಗಿ ಬಿಎಸ್‌ವೈ ತಿಳಿಸಿದ್ದಾರೆ. ಆದರೆ ಈ ಭೇಟಿ ಕುರಿತಾಗಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಅಮಿತ್ ಶಾ ಪ್ರಭಾವ ಬಳಸಿ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್ ಕಮಲದ ಸಂತ್ರಸ್ತ ಅನರ್ಹರನ್ನು ಬಚಾವ್ ಮಾಡಿಸಲಷ್ಟೇ ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ