ಬೆಂಗಳೂರು: 'ಹಸಿರು ಸ್ವಾಮೀಜಿ ' ಎಂದೇ ಹೆಸರು ಪಡೆದಿರುವ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಪೀಠಾರೋಹಣ ಮಾಡಿ 25 ವರ್ಷ ಸಂದಿರುವ ಅಂಗವಾಗಿ ವರ್ಷ ಪೂರ್ತಿ ರಾಜ್ಯಾದ್ಯಂತ ನಾನಾ ಕಾರ್ಯಕ್ರಮಗಳು ನಡೆದಿವೆ. ಇದರ ಅಂತಿಮ ಹಂತವಾಗಿ ಫೆ.9ರಿಂದ 14ವರೆಗೆ ರಜತ ಮಹೋತ್ಸವ ಸಮಾರೋಪ ಸಮಾರಂಭ ನಡೆಯಲಿದೆ.
ಪರಿಸರ ಸಂರಕ್ಷಣೆ, ಹಸಿರು ಯೋಜನೆ ಹಾಗೂ ಭಗವದ್ಗೀತೆ ಸಾರವನ್ನು ಜನರಿಗೆ ತಲುಪಿಸುವ ಅಭಿಯಾನ ಕೈಗೊಂಡು ಸಾಕಷ್ಟು ಕೆಲಸ ಮಾಡಿರುವ ಗಂಗಾಧರೇಂದ್ರ ಸ್ವಾಮೀಜಿ ಅವರ ಈ ಸಮಾರಂಭ ಶಿರಸಿ ಬಳಿಯ ಮಠದಲ್ಲಿ ನಡೆಯಲಿದೆ. ಇದಕ್ಕಾಗಿ 10 ಕೋಟಿ ರೂ. ವೆಚ್ಚದಲ್ಲಿ ಭ್ಯವ ಸಭಾಮಂಟಪವನ್ನು ನಿರ್ಮಿಸಲಾಗಿದೆ. ಸೋದೆ ರಾಜವಂಶದ ಮಧುಲಿಂಗನಾಗೇಶ ರಾಜೇಂದ್ರ ಒಡೆಯರ್ ಉದ್ಘಾಟಿಸಲಿದ್ದಾರೆ. ಆರು ದಿನಗಳ ಕಾರ್ಯಕ್ರಮದಲ್ಲಿ ಕಂಚಿಕಾಮಕೋಟಿ ಪೀಠದ ಜಯೇಂದ್ರ ಸರಸ್ವತೀ ಸ್ವಾಮೀಜಿ ಮತ್ತು ಶಂಕರ ವಿಜಯೇಂದ್ರ ಸರಸ್ವತೀ ಸ್ವಾಮೀಜಿ, ಕರ್ಕಿ ಜ್ಞಾನೇಶ್ವರಿ ಪೀಠದ ಸಚ್ಚಿದಾನಂದ ಜ್ಞಾನೇಶ್ವರಿ ಭಾರತಿ ಸ್ವಾಮೀಜಿ, ಸಚಿವರಾದ ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್ ಸೇರಿ ಹಲವರು ಪಾಲ್ಗೊಳ್ಳಲಿದ್ದಾರೆ. ಪುತ್ತಿಗೆ ಮಠದ ಸುಗುಣೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಧರ್ಮಸಭೆಯು ನಡೆಯಲಿದೆ. ಜತೆಗೆ ಪರಿಸರವಾದಿ ಪ್ರೊ.ಬಿ.ಎಂ.ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಗುತ್ತದೆ.
ಇದಕ್ಕೂ ಮುನ್ನ ಫೆ.5 ರಂದು ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ರಜತೋತ್ಸವ ನಡೆಯಲಿದೆ. ಇದರಲ್ಲಿ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಕಾಸರಗೋಡು ಯಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ ಅವರು ಭಾಗವಹಿಸಲಿದ್ದಾರೆ.
ತಿಂಗಳಿಗೆರಡು ಕಾರ್ಯಕ್ರಮ
ಪೀಠಾರೋಹಣದ 25 ನೇ ವರ್ಷದ ಅಂಗವಾಗಿ 2016 ರಲ್ಲಿ ಪ್ರತಿ ತಿಂಗಳು ಸಮಾಜಕ್ಕೆ ಉಪಯುಕ್ತವಾದ ಎರಡು ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದು ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ''500ಕ್ಕೂ ಅಧಿಕ ಮಹಿಳೆಯರಿಂದ ಕೋಟಿ ಕುಂಕುಮಾರ್ಚನೆ, ರಾಮತಾರಕ ಹೋಮ, ಉತ್ತರ ಕನ್ನಡ ಜಿಲ್ಲೆಯಲ್ಲಿ 25 ಸಾವಿರ ಸಸಿ ನೆಡುವ ಅಭಿಯಾನ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಶಾಲೆಗಳಲ್ಲಿ ಜಾಗೃತಿ ಶಿಬಿರ, ವಿದ್ಯಾರ್ಥಿಗಳಿಗೆ ಯಕ್ಷಗಾನ ತಾಳಮದ್ದಳೆ ಸ್ಪರ್ಧೆ, 175 ತಾಲೂಕುಗಳಲ್ಲಿ ಭಗವದ್ಗೀತೆ ಪಾರಾಯಣ, 35 ಲಕ್ಷ ಭಗವದ್ಗೀತೆ ಪುಸ್ತಕಗಳ ಮಾರಾಟ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮಾಡಲಾಗಿದೆ'' ಎಂದರು. ಮಠದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್.ಹೆಗಡೆ, ಉಪಾಧ್ಯಕ್ಷ ವಾಸುದೇವರಾವ್ ಹಾಜರಿದ್ದರು.
ಪರಿಸರ ನಾಶದ ಯೋಜನೆ ಬೇಡ : ಸ್ವಾಮೀಜಿ ಸಲಹೆ
ಬೇಡ್ತಿ, ಅಘನಾಶಿನಿ ನದಿಗಳಲ್ಲಿ ವಿದ್ಯುತ್ ಯೋಜನೆ, ತದಡಿಯಲ್ಲಿ ಉಷ್ಣವಿದ್ಯುತ್ ಸ್ಥಾವರ ಯೋಜನೆಯನ್ನು ವಿರೋಧಿಸಿದ್ದರ ಪರಿಣಾಮವಾಗಿ ಉತ್ತರ ಕನ್ನಡದಲ್ಲಿ ಪರಿಸರ ಉಳಿದಿದೆ ಎಂದು ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ''ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ಮಾಡಿದ್ದರೆ ಮಠದ ಭಕ್ತರು ಹಾಗೂ ಸ್ಥಳೀಯರು ಯೋಜನೆಯನ್ನು ವಿರೋಧಿಸುತ್ತಿರಲಿಲ್ಲ. ಯೋಜನೆ ಸ್ಥಗಿತಗೊಂಡಿದ್ದರಿಂದ ಅನಿವಾರ್ಯವಾಗಿ ಸರಕಾರ ಪವನ ವಿದ್ಯುತ್ ಯೋಜನೆ ಅನುಷ್ಠಾನಗೊಳಿಸಿದೆ. ಇದೇ ರೀತಿ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನೂ ಮಾಡಬೇಕು. ಪರಿಸರಕ್ಕೆ ಹಾನಿಯಾಗದ ಯೋಜನೆ ರೂಪಿಸಿದರೆ ವಿರೋಧಿಸುವುದಿಲ್ಲ'' ಎಂದರು.