ಆ್ಯಪ್ನಗರ

ಆನೆ, ಹುಲಿಗಳಿಗೂ ಟ್ಯಾಂಕರ್ ನೀರು!

ರಾಜ್ಯದಲ್ಲಿ ಬರದ ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂದರೆ ನಾಗರಹೊಳೆ ವ್ಯಾಪ್ತಿಯಲ್ಲಿ ಹುಲಿ, ಆನೆಗಳಿಗೂ ಟ್ಯಾಂಕರ್‌ಗಳ ಮೂಲಕ ಬೋರ್‌ವೆಲ್ ನೀರು ಪೂರೈಸುವ ಸ್ಥಿತಿ ಬಂದೊದಗಿದೆ!

Vijaya Karnataka Web 17 Apr 2016, 4:00 am
-ನಾಗರಹೊಳೆಯಲ್ಲಿ ಬತ್ತಿ ಹೋಗಿರುವ ಕೆರೆಗಳು-
Vijaya Karnataka Web tanker water to elephant tiger in nagarahole forest
ಆನೆ, ಹುಲಿಗಳಿಗೂ ಟ್ಯಾಂಕರ್ ನೀರು!

* ಎಂ. ಎಲ್. ರವಿಕುಮಾರ್, ಎಚ್.ಡಿ. ಕೋಟೆ (ಮೈಸೂರು)

ರಾಜ್ಯದಲ್ಲಿ ಬರದ ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂದರೆ ನಾಗರಹೊಳೆ ವ್ಯಾಪ್ತಿಯಲ್ಲಿ ಹುಲಿ, ಆನೆಗಳಿಗೂ ಟ್ಯಾಂಕರ್‌ಗಳ ಮೂಲಕ ಬೋರ್‌ವೆಲ್ ನೀರು ಪೂರೈಸುವ ಸ್ಥಿತಿ ಬಂದೊದಗಿದೆ!

ಕಬಿನಿ ಹಿನ್ನೀರನ್ನು ಒಡಲಿನಲ್ಲಿ ಇಟ್ಟುಕೊಂಡಿದ್ದರೂ ಈ ಬಾರಿ ನೀರಿನ ಪ್ರಮಾಣ ಬಹಳಷ್ಟು ಕುಸಿದಿದೆ. ಕಾಡಿನ ಒಳಗೆ ಇರುವ ಕೆರೆ, ಹೊಂಡಗಳು ಒಣಗಿ ಎರಡು ತಿಂಗಳಾಗಿವೆ. ಹಾಗಾಗಿ ಕೆರೆ, ಹೊಂಡಕ್ಕೆ ಟ್ಯಾಂಕರ್‌ನಿಂದ ನೀರು ತುಂಬಿಸಿ ಪ್ರಾಣಿಗಳ ಜೀವ ಉಳಿಸಲಾಗುತ್ತಿದೆ. ಅದರಲ್ಲೂ ನಾಗರಹೊಳೆ ಉದ್ಯಾನದ ಅಂತರಸಂತೆ ವಲಯದಲ್ಲಿ ‘ಹುಲಿ ಕೆರೆ’ಗೆ ನೀರು ಒದಗಿಸಲು ಬೋರ್‌ವೆಲ್ ಸೇವೆಗೆ ಅರಣ್ಯ ಇಲಾಖೆ ಮುಂದಾಗಿದೆ. ಇಂಥ ಪ್ರಯತ್ನ ರಾಷ್ಟ್ರೀಯ ಉದ್ಯಾನದಲ್ಲಿ ಇದೇ ಮೊದಲು.

‘‘ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡು ಪ್ರಾಣಿಗಳಿಗೆ ಕಬಿನಿ ಜಲಾಶಯದ ಹಿನ್ನೀರು ಪ್ರಮುಖವಾದ ಕುಡಿಯುವ ನೀರಿನ ತಾಣ. ಕಬಿನಿ ಜಲಾಶಯದ ಮಟ್ಟ 2253ಕ್ಕೆ ಕುಸಿದಿದೆ. ಸದ್ಯಕ್ಕೆ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ ವನ್ಯಜೀವಿ ವಲಯಗಳಲ್ಲಿರುವ ಕೆರೆ ಕಟ್ಟೆಗಳು ಒಣಗಿದ್ದು, ಕಬಿನಿ ಹಿನ್ನೀರೇ ಕಾಡು ಪ್ರಾಣಿಗಳಿಗೆ ಗತಿ. ಹಿಂದಿನ ವರ್ಷಗಳಲ್ಲಿ ಎಂದೂ ಕಾಣದ ಬಿಸಿಲು ಈ ಬಾರಿ ಇದೆ. ಬಿಸಿಲಿನ ಝಳಕ್ಕೆ ಪ್ರಾಣಿ, ಪಕ್ಷಿಗಳು ಸಂಟಕ ಪಡುತ್ತಿವೆ. ಕಾಡು ಸಂಪೂರ್ಣ ಒಣಗಿ ಹೋಗಿದೆ. ಹಾಗಾಗಿ ಟ್ಯಾಂಕರ್ ಮೂಲಕ ಅರಣ್ಯ ಪ್ರದೇಶದ ಸಣ್ಣ ಪುಟ್ಟ ಕೆರೆ-ಹೊಂಡಗಳಿಗೆ ನೀರು ತುಂಬಿಸಲಾಗುತ್ತಿದೆ,’’ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಎಚ್.ಸಿ. ಕಾಂತರಾಜು ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.

‘‘ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಸಂಖ್ಯೆ ಹೆಚ್ಚಳವಾಗಿದ್ದು, ಅವುಗಳ ಸಂರಕ್ಷಣೆ ಮಾಡಬೇಕಾಗಿದೆ. ಹಾಗಾಗಿ ಮೊದಲಿಗೆ ನೀರು ಇಲ್ಲದ ಕೆರೆ ಕಟ್ಟೆಗಳಲ್ಲಿನ ಹೂಳನ್ನು ತೆಗೆಯಲಾಗುತ್ತಿದೆ. ಈ ಬಾರಿ ಮಳೆ ಬಂದು ಕೆರೆ ಕಟ್ಟೆ ತುಂಬಿದರೆ, ಮುಂದಿನ ಮಳೆವರೆಗೂ ನೀರು ಇರುವಂತೆ ಕಾಮಗಾರಿ ನಡೆಸಲಾಗಿದೆ,’’ ಎಂದು ಅಂತರಸಂತೆ ಆರ್‌ಎಫ್‌ಒ ಮಹೇಶ್ ಮಾಹಿತಿ ನೀಡಿದರು.

ನಾಗರಹೊಳೆ, ಅಂತರಸಂತೆ ಹಾಗೂ ಡಿ ಬಿ ಕುಪ್ಪೆ ವನ್ಯಜೀವಿ ವಲಯಕ್ಕೆ ಹೊಂದಿಕೊಂಡಂತೆ ಇರುವ ವಿಶಾಲವಾದ ಬಿಸಿಲವಾಡಿ ಕೆರೆಯ ಸುತ್ತ ಆನೆಗಳ ಓಡಾಟ ಹೆಚ್ಚು. ‘ಟೈಗರ್ ಟ್ಯಾಂಕ್’ನ ಸುತ್ತ ಹುಲಿ ಸಂಖ್ಯೆ ಹೆಚ್ಚು. ಈಗಲೂ ಅಲ್ಲಿ ಹುಲಿಗಳ ಮೂರು ಪರಿವಾರವಿದ್ದು, ಒಟ್ಟು 15 ಹುಲಿಗಳ ಚಲನವಲನಗಳನ್ನು ಅರಣ್ಯ ಸಿಬ್ಬಂದಿ ಗಮನಿಸಿದ್ದಾರೆ. ಟೈಗರ್ ಟ್ಯಾಂಕ್ ಸಂಪೂರ್ಣ ಬರಿದಾಗಿದ್ದು, ಟ್ಯಾಂಕರ್ ಮೂಲಕ ದಿನಕ್ಕೆ ಮೂರು ಬಾರಿ ನೀರು ತುಂಬಿಸಲಾಗುತ್ತಿದೆ.

-----

ನಾಗರಹೊಳೆ ವ್ಯಾಪ್ತಿಯ ಕೆಲವು ಕೆರೆ, ಹೊಂಡಗಳು ಒಣಗಿವೆ. ಅಲ್ಲಿಗೆ ಬೋರ್‌ವೆಲ್ ನೀರನ್ನು ಟ್ಯಾಂಕರ್ ಮೂಲಕ ಸಾಗಿಸಿ ಭರ್ತಿ ಮಾಡಲಾಗುತ್ತಿದೆ. ಮುಂದಿನ 15 ದಿನದಲ್ಲಿ ಮಳೆ ಬಾರದೇ ಇದ್ದರೆ ಪ್ರಾಣಿಗಳಿಗೆ ಮತ್ತಷ್ಟು ತೊಂದರೆಯಾಗಬಹುದು.

-ಎಚ್.ಸಿ. ಕಾಂತರಾಜು, ಹುಲಿ ಯೋಜನೆ ನಿರ್ದೇಶಕ, ನಾಗರಹೊಳೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ