ತುಮಕೂರು: ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದ ತೇಜರಾಜ್ ಶರ್ಮ ಪೀಠೋಪಕರಣಗಳ ವ್ಯಾಪಾರಿಯಾಗಿದ್ದು, ಸರಕಾರಿ ಕಚೇರಿಗಳಿಗೆ ಟೆಂಡರ್ ಮೂಲಕ ಕಳಪೆ ದರ್ಜೆಯ ಪೀಠೋಪಕರಣ ಪೂರೈಸುತ್ತಿದ್ದ. ಇದನ್ನು ಪ್ರಶ್ನಿಸಿದ ಅಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸುವ ಚಾಳಿ ಹೊಂದಿದ್ದ ಎಂಬ ಅಂಶ ಬಯಲಾಗಿದೆ.
ಕಳೆದ ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆ ತುಮಕೂರು ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಕಚೇರಿಗೆ 29 ಸಾವಿರ ರೂ. ಮೌಲ್ಯದ ಪೀಠೋಪಕರಣ ಪೂರೈಕೆ ಮಾಡಿದ್ದ. ಇದರಲ್ಲಿ ಒಂದು ಕುರ್ಚಿ ಮುರಿದು ಹೋಗಿತ್ತು. ಹೀಗಾಗಿ ಕ್ಲರ್ಕ್ ಶಿವಕುಮಾರ್ ಅವರು ಮುರಿದು ಹೋದ ಕುರ್ಚಿ ಬದಲಾಯಿಸಿಕೊಡುವಂತೆ ಸೂಚಿಸಿದ್ದರು. ಇದೇ ವಿಚಾರವಾಗಿ ಡಿಡಿಪಿಐ ಮಂಜುನಾಥ್ ಸಹ ಈತನೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಕಳಪೆ ಪೀಠೋಪಕರಣಗಳನ್ನು ಪೂರೈಸಿದ್ದರ ಬಗ್ಗೆ ಆಕ್ಷೇಪಿಸಿದ್ದರು. ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳಿಗೆ ಪೀಠೋಪಕರಣ ಪೂರೈಕೆ ಮಾಡುವ ಟೆಂಡರ್ ತನಗೆ ನೀಡಿದಲ್ಲಿ ಮಾತ್ರ ಮುರಿದು ಹೋಗಿದ್ದ ಕುರ್ಚಿ ಬದಲಾಯಿಸಿಕೊಡುವುದಾಗಿ ಬೇಡಿಕೆ ಇಟ್ಟಿದ್ದ. ಅದಕ್ಕೊಪ್ಪದಿದ್ದಾಗ ಡಿಡಿಪಿಐ ಮಂಜುನಾಥ್ ಹಾಗೂ ಪ್ರಥಮದರ್ಜೆ ಸಹಾಯಕ ಶಿವಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದ. ಈ ಬಗ್ಗೆ ಡಿಡಿಪಿಐ, ಲೋಕಾಯಕ್ತಕ್ಕೆ ಲಿಖಿತ ಉತ್ತರ ಸಲ್ಲಿಸಿದ್ದರು. ಇದೇ ರೀತಿ ಜಿಲ್ಲೆಯ ನಾನಾ ಇಲಾಖೆಗಳ ಅಕಾರಿಗಳ ವಿರುದ್ಧ ದೂರು ಸಲ್ಲಿಸಿದ್ದ.
ರಾಜಸ್ಥಾನ ಮೂಲ
ತೇಜರಾಜ್ ಕುಟುಂಬದವರು ಮೂಲತಃ ರಾಜಸ್ಥಾನದವರಾಗಿದ್ದು, ತೇಜರಾಜ್ನ ತಂದೆ ರೂಪಲಾಲ್ ಹಾಗೂ ತಾಯಿ ಜಮುನಾ ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಕಳೆದ 50 ವರ್ಷಗಳಿಂದ ತಮ್ಮ ನಾಲ್ವರು ಮಕ್ಕಳೊಂದಿಗೆ ವಾಸವಿದ್ದರು. ಮಕ್ಕಳ ವಿವಾಹದ ಬಳಿಕ 8 ವರ್ಷಗಳ ಹಿಂದೆ ತಿಪಟೂರಿನ ಮನೆಯನ್ನು ಪೋಷಕರು ಮಾರಾಟ ಮಾಡಿದ್ದರು. ತೇಜರಾಜ್ನ ಸಹೋದರರು ಪ್ರತ್ಯೇಕ ಮನೆಗಳಲ್ಲಿ ತಿಪಟೂರು ಹಾಗೂ ತುಮಕೂರಿನಲ್ಲಿ ವಾಸವಿದ್ದು, ತೇಜ್ರಾಜ್ ಆಗಾಗ ತನ್ನ ವಾಸ್ತವ್ಯ ಬದಲಿಸುತ್ತ ಪ್ರತ್ಯೇಕವಾಗಿ ರೂಮ್ ಮಾಡಿಕೊಂಡಿದ್ದ.
ಯಾರಾರಯರ ವಿರುದ್ಧ ದೂರು?
ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಾಖೆ ಅಕಾರಿ ವಾಸಂತಿ ಉಪ್ಪಾರ್ ವಿರುದ್ಧ ಹಾಗೂ ತುಮಕೂರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರ ವಿರುದ್ಧ ಪೀಠೋಪಕರಣಗಳ ಟೆಂಡರ್ ನೀಡಿಕೆಯಲ್ಲಿ ಅವ್ಯವಹಾರವಾಗಿದೆ ಎಂದು ಈತ ಲೋಕಾಯುಕ್ತಕ್ಕೆ ದೂರು ನೀಡಿದ್ದ. ವಿಚಾರಣೆ ವೇಳೆ ಸೂಕ್ತ ದಾಖಲೆ ಒದಗಿಸುವಲ್ಲಿ ಈತ ವಿಫಲವಾಗಿದ್ದರಿಂದ ಕೇಸ್ ಖುಲಾಸೆಯಾಗಿತ್ತು. ತುಮಕೂರು ವಾಣಿಜ್ಯ ತೆರಿಗೆ ಇಲಾಖೆ ಅಕಾರಿಗಳು ಸರಿಯಾಗಿ ತೆರಿಗೆ ವಸೂಲಿ ಮಾಡುತ್ತಿಲ್ಲ ಎಂದೂ ಈತ ದೂರು ನೀಡಿದ್ದ.
ಕೋಲಾರದ ರೇಷ್ಮೆ ಗೂಡಿನ ಮಾರುಕಟ್ಟೆಯ ಸಹಾಯಕ ನಿರ್ದೇಶಕ ದೇವರಾಜ್, ತುಮಕೂರಿನ ಟಿಯುಎಂಪಿ ಲಿ.ನ ವ್ಯವಸ್ಥಾಪಕ ಡಾ.ಚಂದ್ರಪ್ಪ, ವ್ಯವಸ್ಥಾಪಕ ನಿರ್ದೇಶಕ ಎ.ಆರ್. ಚಂದ್ರಶೇಖರ್, ಖರೀದಿ ವಿಭಾಗದ ಕ್ಲರ್ಕ್ ಮಹಲಿಂಗಪ್ಪ, ಬೆಂಗಳೂರು ರೇಷ್ಮೆ ವಿನಿಮಯ ಕೇಂದ್ರದ ಜಂಟಿ ನಿರ್ದೇಶಕ ಪ್ರಭಾಕರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ತುಮಕೂರಿನ ಕುಮಾರ್ ವಿರುದ್ಧ ದೂರುಗಳನ್ನು ದಾಖಲಿಸಿದ್ದ.
ತೇಜರಾಜ್ ತುಂಬಾ ವರ್ಷಗಳಿಂದ ತುಮಕೂರಿನಲ್ಲಿ ವಾಸವಿದ್ದ. ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತ ನಾಟಕವಾಡುತ್ತಿದ್ದ.
- ಶಶಿಶೇಖರ್, ಎಸ್.ಎಸ್. ಪುರಂನಲ್ಲಿ ಈತನಿಗೆ ಬಾಡಿಗೆ ಮನೆ ನೀಡಿದ್ದ ಮಾಲೀಕ
ತೇಜರಾಜ್ ಶರ್ಮ ಕೇವಲ ಬಾಡಿಗೆ ನೀಡುವಾಗ ಕಾಣಿಸಿಕೊಳ್ಳುತ್ತಿದ್ದ. ಉಳಿದಂತೆ ಅವನ ಪಾಡಿಗೆ ಅವನಿರುತ್ತಿದ್ದ. ಯಾರೊಂದಿಗೂ ಮಾತನಾಡುತ್ತಿರಲಿಲ್ಲ.
- ವೆಂಕಟಲಕ್ಷ್ಮಮ್ಮ, ಮನೆ ಮಾಲೀಕರು, ಬಿದಿರುಮಳೆ ತೋಟ