ಆ್ಯಪ್ನಗರ

ಪಠ್ಯ ಪುಸ್ತಕಗಳು ದುಬಾರಿ

ಶಾಲಾ ಮಕ್ಕಳಿಗೆ ಪೂರೈಸುವ ಪಠ್ಯ ಪುಸ್ತಕಗಳ ದರವನ್ನು ರಾಜ್ಯ ಸರಕಾರ ಯಾವುದೇ ಚರ್ಚೆ ಅಥವಾ ಮುನ್ಸೂಚನೆಯಿಲ್ಲದೆ ಶೇ. 22ರಷ್ಟು ಏರಿಸುವ ಮೂಲಕ ಖಾಸಗಿ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರಿಗೆ ಶಾಕ್‌ ನೀಡಿದೆ.

Vijaya Karnataka 14 May 2019, 5:00 am
ಬೆಂಗಳೂರು: ಶಾಲಾ ಮಕ್ಕಳಿಗೆ ಪೂರೈಸುವ ಪಠ್ಯ ಪುಸ್ತಕಗಳ ದರವನ್ನು ರಾಜ್ಯ ಸರಕಾರ ಯಾವುದೇ ಚರ್ಚೆ ಅಥವಾ ಮುನ್ಸೂಚನೆಯಿಲ್ಲದೆ ಶೇ. 22ರಷ್ಟು ಏರಿಸುವ ಮೂಲಕ ಖಾಸಗಿ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರಿಗೆ ಶಾಕ್‌ ನೀಡಿದೆ.
Vijaya Karnataka Web book


''ಡಿಸೆಂಬರ್‌-ಜನವರಿ ತಿಂಗಳಲ್ಲೇ ಮಕ್ಕಳ ಬೇಡಿಕೆಗೆ ಅನುಗುಣವಾಗಿ ಶಾಲೆಗಳು ಇಂಡೆಂಟ್‌ ಸಲ್ಲಿಸಿದ್ದವು. ಆಗ, ಪಠ್ಯಪುಸ್ತಕಗಳ ದರ ಏರಿಕೆ ಬಗ್ಗೆ ಶಿಕ್ಷಣ ಇಲಾಖೆಯಾಗಲೀ ಅಥವಾ ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ಯಾವುದೇ ಪ್ರಸ್ತಾಪ ಮಾಡಿರಲಿಲ್ಲ. ಆದರೆ, ಕಳೆದ ವಾರ ಪಠ್ಯ ಪುಸ್ತಕಗಳ ಖರೀದಿಗೆ ಖಾಸಗಿ ಶಾಲೆಗಳು ಆನ್‌ಲೈನ್‌ ಮೂಲಕ ದರ ಪಾವತಿಸಲು ಮುಂದಾದಾಗ ಕೆಲ ಪಠ್ಯಪುಸ್ತಕಗಳ ದರ ಶೇ.22ರಷ್ಟು ಏರಿಕೆಯಾಗಿರುವುದು ಬೆಳಕಿಗೆ ಬಂದಿದೆ,'' ಎಂದು 'ಕ್ಯಾಮ್ಸ್‌'ನ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ದೂರಿದ್ದಾರೆ.

''ಒಂದು ವೇಳೆ ಕಾಗದದ ದರ ಹೆಚ್ಚಳವಾಗಿದ್ದರೆ ಎಲ್ಲ ಪಠ್ಯಪುಸ್ತಕಗಳ ಬೆಲೆಯೂ ಏರಿಕೆಯಾಗುತ್ತಿತ್ತು. ಆದರೆ, ಕೆಲ ಪಠ್ಯಪುಸ್ತಕಗಳ ದರವನ್ನಷ್ಟೇ ಏರಿಸಲಾಗಿದೆ. ನಾವು ಈಗಾಗಲೇ ಪೋಷಕರಿಂದ ಪಠ್ಯಪುಸ್ತಕಗಳ ವಿತರಣೆಗಾಗಿ ಹಣ ಪಡೆದಿದ್ದೇವೆ. ಇದೀಗ ಕೆಲ ಪುಸ್ತಕಗಳ ದರ ಏರಿಕೆಯಾಗಿರುವುದರಿಂದ ಪೋಷಕರು ಶಾಲೆಗಳನ್ನು ದೂರುವಂತಾಗಿದೆ. ಗೌಪ್ಯವಾಗಿ ಪಠ್ಯಪುಸ್ತಕಗಳ ದರ ಏರಿಸಿರುವ ಹಿನ್ನೆಲೆ ಏನು ಎಂಬುದನ್ನು ಸರಕಾರ ಬಹಿರಂಗಪಡಿಸುವ ಮೂಲಕ ಅನುಮಾನ ಹಾಗೂ ಗೊಂದಲಗಳಿಗೆ ತೆರೆ ಎಳೆಯಬೇಕು,'' ಎಂದು ಅವರು ಆಗ್ರಹಿಸಿದ್ದಾರೆ.

2019-20ನೇ ಸಾಲಿನಲ್ಲಿ ಪಠ್ಯಪುಸ್ತಕಗಳ ಮುದ್ರಣ ದರ ಏರಿಕೆ ಕುರಿತು ವಿವರ ಪಡೆಯಲು ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯ ಅಂತರ್ಜಾಲವನ್ನು ತಡಕಾಡಿದರೂ ಪಠ್ಯಪುಸ್ತಕಗಳ ದರ ಏರಿಕೆ ಕುರಿತು ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಆದರೆ, 2018-19ನೇ ಸಾಲಿನ ಪಠ್ಯಪುಸ್ತಕಗಳ ಮಾರಾಟದ ದರ ಪಟ್ಟಿಯ ವಿವರ ಲಭ್ಯವಾಗುತ್ತಿದೆ.

ಉದಾಹರಣೆಗೆ ಇಂಗ್ಲಿಷ್‌ ಪಠ್ಯಪುಸ್ತಕದ ಬೆಲೆ ಕಳೆದ ವರ್ಷ 40 ರೂ. ಇದ್ದದ್ದು ಈ ವರ್ಷ 45 ರೂ.ಗೆ ಏರಿಕೆಯಾಗಿದೆ. ಹಾಗೆಯೇ, ಇಂಗ್ಲಿಷ್‌ ಚಟುವಟಿಕೆ ಪಠ್ಯಪುಸ್ತಕದ ಬೆಲೆ 40ರಿಂದ 50 ರೂ. ಹೆಚ್ಚಳವಾಗಿದೆ. ಇಂಗ್ಲಿಷ್‌ ಪರಿಸರ ಅಧ್ಯಯನ ಪುಸ್ತಕದ ಬೆಲೆ 29ರಿಂದ 30 ರೂ.ಗೆ ಏರಿಕೆಯಾಗಿದೆ. ಇದೇ ರೀತಿ ಕೆಲ ಶೀರ್ಷಿಕೆಯ ಪಠ್ಯಪುಸ್ತಕಗಳ ದರದಲ್ಲಿ ಶೇ 20ರಿಂದ 22ರಷ್ಟು ಏರಿಕೆಯಾಗಿದೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳು ದೂರಿವೆ.

ಸರಕಾರದ ಮಟ್ಟದಲ್ಲಿ ನಿರ್ಧಾರ

''ಪಠ್ಯಪುಸ್ತಕಗಳ ಮುದ್ರಣದ ದರ ನಿಗದಿ ಕುರಿತು ಟೆಂಡರ್‌ ಪ್ರಕ್ರಿಯೆ ಸಂದರ್ಭದಲ್ಲಿ ಸರಕಾರ ಹಾಗೂ ಮುದ್ರಕರ ಮಟ್ಟದಲ್ಲೇ ನಿರ್ಧಾರವಾಗಲಿದೆ. ಆದರೆ, ಈ ಕುರಿತು ತಮಗೇನೂ ಮಾಹಿತಿ ಇಲ್ಲ'' ಎಂದು ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ