Please enable javascript.ಬೇಳೆಗಳ ಬೆಲೆ ಕೆಜಿಗೆ ಕನಿಷ್ಠ 25 ರೂ. ಏರಿಕೆ! ಗ್ರಾಹಕರ ಖರೀದಿ ಶೇ.50 ರಷ್ಟು ಕುಸಿತ - the price of pulses is at least rs 25 per kg rise 50 percent decline in consumer purchases - Vijay Karnataka

ಬೇಳೆಗಳ ಬೆಲೆ ಕೆಜಿಗೆ ಕನಿಷ್ಠ 25 ರೂ. ಏರಿಕೆ! ಗ್ರಾಹಕರ ಖರೀದಿ ಶೇ.50 ರಷ್ಟು ಕುಸಿತ

Edited byಸೌಮ್ಯಶ್ರೀ ಮಾರ್ನಾಡ್ | Vijaya Karnataka Web 25 Jun 2023, 9:18 am
Subscribe

ತರಕಾರಿ ದರ ಏರಿಕೆ ಬಳಿಕ ಇದೀಗ ಮಾರುಕಟ್ಟೆಯಲ್ಲಿ ಬೇಳೆ ಕಾಳುಗಳ ಬೆಲೆಯೂ ಗಗನಮುಖಿಯಾಗಿದೆ. ಅಗತ್ಯ ಧಾನ್ಯ ಕಾಳು ಭೇಳೆಗಳ ಬೆಲೆ ಕೆಜಿಗೆ ಕನಿಷ್ಠ 25 ರುಪಾಯಿ ಏರಿಕೆ ಆಗಿದೆ. ಜನ ಖರೀದಿಗೆ ಹೋಗಲೂ ಭಯಪಡುವಂತಾಗಿದೆ. ಖರೀದಿಯ ಪ್ರಮಾಣದಲ್ಲೂ ಶೇ 50 ರಷ್ಟು ಇಳಿಕೆಯಾಗಿದೆ. ಹೋಲ್ ಸೇಲ್ ಮಾರುಕಟ್ಟೆಗೆ ಬೇಳೆ ಕಾಳುಗಳ ಪೂರೈಕೆ ಸಾಕಷ್ಟಿಲ್ಲ. ಹೀಗಾಗಿ ಬೆಲೆ ಹೆಚ್ಚಳ ಆಗುತ್ತಿದೆ ಎನ್ನಲಾಗಿದೆ.

ಹೈಲೈಟ್ಸ್‌:

  • ಕಳೆದ ವಾರದಿಂದ ಈಚೆಗೆ ತೊಗರಿ, ಉದ್ದು, ಹೆಸರು ಬೇಳೆ ಸೇರಿದಂತೆ ಹಲವಾರು ಅಗತ್ಯ ಧಾನ್ಯ ಕಾಳು ಹಾಗೂ ಬೇಳೆಗಳ ಬೆಲೆ ಕೆಜಿಗೆ ಕನಿಷ್ಠ 25 ರೂ. ಏರಿಕೆಯಾಗಿದ್ದು, ಕಿರಾಣಿ ಅಂಗಡಿಗಳಿಗೆ ಹೋಗಲು ಜನ ಹಿಂಜರಿಯುವಂತಾಗಿದೆ.
  • ಈಗಾಗಲೆ ವಿದ್ಯುತ್‌ ದರ, ತರಕಾರಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಸಾರ್ವಜನಿಕರ ಜೇಬಿಗೆ ಮೇಲಿಂದ ಮೇಲೆ ಕತ್ತರಿ ಬೀಳುತ್ತಿದೆ
  • ಒಂದು ವಾರದಿಂದ ರಾಜ್ಯದಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಎಲ್ಲ ತರಕಾರಿಗಳು 80 ರೂ. ಗಡಿ ದಾಟಿದ್ದು, ಹುರಳಿಕಾಯಿ 200 ರೂ. ಸನಿಹ ಸಾಗಿದೆ. ಹೀಗಿರುವಾಗಲೇ ಮನೆ, ಹೋಟೆಲ್‌ಗಳಲ್ಲಿಅಡುಗೆಗೆ ಬಳಸುವ ಕಾಳು ಹಾಗೂ ಬೇಳೆಗಳ ದರ ಹೆಚ್ಚಾಗಿದೆ.
dal prices are shooting up
  • ಬಸವರಾಜ ಕೆಜಿ
ದಾವಣಗೆರೆ: ಕಳೆದ ವಾರದಿಂದ ಈಚೆಗೆ ತೊಗರಿ, ಉದ್ದು, ಹೆಸರು ಬೇಳೆ ಸೇರಿದಂತೆ ಹಲವಾರು ಅಗತ್ಯ ಧಾನ್ಯ ಕಾಳು ಹಾಗೂ ಬೇಳೆಗಳ ಬೆಲೆ ಕೆಜಿಗೆ ಕನಿಷ್ಠ 25 ರೂ. ಏರಿಕೆಯಾಗಿದ್ದು, ಕಿರಾಣಿ ಅಂಗಡಿಗಳಿಗೆ ಹೋಗಲು ಜನ ಹಿಂಜರಿಯುವಂತಾಗಿದೆ.
ಈಗಾಗಲೆ ವಿದ್ಯುತ್‌ ದರ, ತರಕಾರಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಸಾರ್ವಜನಿಕರ ಜೇಬಿಗೆ ಮೇಲಿಂದ ಮೇಲೆ ಕತ್ತರಿ ಬೀಳುತ್ತಿದೆ. ಕಳೆದ ವಾರ 120 ರೂ. ಇದ್ದ ತೊಗರಿ ಬೇಳೆ ದರ ಶನಿವಾರ 160 ರೂ. ತಲುಪಿದೆ. ಇದರೊಂದಿಗೆ ಉದ್ದಿನ ಬೇಳೆ, ಹೆಸರು ಕಾಳು-ಬೇಳೆ, ಹಲಸಂದೆ, ಶೇಂಗಾ ಹಾಗೂ ಹುರಳಿ ಕಾಳುಗಳ ಬೆಲೆ ಕೂಡ ಹೆಚ್ಚಾಗಿದೆ.

ಹವಾಮಾನ ವೈಪರೀತ್ಯ ಸೊಪ್ಪು, ತರಕಾರಿ ದರ ಏರಿಕೆ; ಯಾವ ತರಕಾರಿ ಬೆಲೆ ಎಷ್ಟಿದೆ?

ಬೆಲೆ ಹೆಚ್ಚಳದಿಂದ ವ್ಯಾಪಾರ ಕಡಿಮೆ ಆಗಿದೆ. ಮೊದಲು ಒಂದು ಕೆಜಿ ತೊಗರಿ ಬೇಳೆ ಕೊಳ್ಳುತ್ತಿದ್ದವರು ಈಗ ಅರ್ಧ ಕೇಳಿಗೆ ಬಂದಿದ್ದಾರೆ. ಹೀಗೇ ಎಲ್ಲ ಬೇಳೆ-ಕಾಳುಗಳ ಬೆಲೆ ಹೆಚ್ಚಾಗಿರುವ ಕಾರಣ ಗ್ರಾಹಕರ ಖರೀದಿ ಪ್ರಮಾಣ ಶೇ.50ರಷ್ಟು ಕುಸಿದಿದೆ ಎಂದು ಕಿರಾಣಿ ಅಂಗಡಿ ಮಾಲೀಕ ಆರ್‌. ಹರೀಶ್‌ ಹೇಳುತ್ತಾರೆ.

ಸಾಮಾನ್ಯವಾಗಿ ಹಬ್ಬಗಳ ಸೀಸನ್‌ ಮುಗಿದ ಮೇಲೆ ಕಾಳು, ಬೇಳೆ, ಧಾನ್ಯಗಳ ಪೂರೈಕೆ ಕಡಿಮೆ ಆಗುವ ಕಾರಣ ಬೆಲೆ ಅಲ್ಪ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಆದರೆ ಈ ವರ್ಷ ಹಬ್ಬಗಳ ರುತುವಿನಲ್ಲೇ ಬೇಳೆ-ಕಾಳುಗಳ ಕೊರತೆ ಕಂಡುಬಂದಿತ್ತು. ಪ್ರಸ್ತುತ ಹೋಲ್‌ಸೇಲ್‌ ಮಾರುಕಟ್ಟೆಗೆ ಬೇಳೆ-ಕಾಳುಗಳ ಪೂರೈಕೆ ನಿರೀಕ್ಷೆಯಷ್ಟಿಲ್ಲ. ಇದು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಮೊದಲು ತರಕಾರಿ ದುಬಾರಿಯಾದವು. ಈಗ ಬೇಳೆ, ಕಾಳುಗಳ ಬೆಲೆ ಗಗನಕ್ಕೇರುತ್ತಿದೆ. ಅತ್ತ ಸೊಪ್ಪುಗಳನ್ನೂ ಕೊಳುವಂತಿಲ್ಲ. ಮನೆಯಲ್ಲಿ ಏನು ಅಡುಗೆ ಮಾಡುವುದು ಎಂಬುದೇ ಚಿಂತೆ. ಮನೆಯಲ್ಲಿ ಮಾಡುವುದಕ್ಕಿಂತ ಹೋಟೆಲ್‌ ಊಟ ಮಾಡಿದರೆ ಹಣ ಉಳಿಯಬಹುದೇನೋ ಎನ್ನುತ್ತಾರೆ ದಾವಣಗೆರೆ ಗೃಹಿಣಿ ದೀಪ್ತಿ ಕುಮಾರ್‌.

ಕಾರವಾರ: ತರಕಾರಿ ಬೆಲೆ ದುಪ್ಪಟ್ಟು-ಹಣ್ಣಿನ ದರದಲ್ಲೂ ಹೆಚ್ಚಳ
ವಾರದಿಂದ ಹೆಚ್ಚಳ:
ಒಂದು ವಾರದಿಂದ ರಾಜ್ಯದಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಎಲ್ಲ ತರಕಾರಿಗಳು 80 ರೂ. ಗಡಿ ದಾಟಿದ್ದು, ಹುರಳಿಕಾಯಿ 200 ರೂ. ಸನಿಹ ಸಾಗಿದೆ. ಹೀಗಿರುವಾಗಲೇ ಮನೆ, ಹೋಟೆಲ್‌ಗಳಲ್ಲಿಅಡುಗೆಗೆ ಬಳಸುವ ಕಾಳು ಹಾಗೂ ಬೇಳೆಗಳ ದರ ಹೆಚ್ಚಾಗಿದೆ. ಕಳೆದ ವಾರ 125 ರೂ. ಇದ್ದ ತೊಗರಿ ಬೇಳೆ ಈಗ 150-160 ರೂ.ಗೆ ಏರಿಕೆಯಾಗಿದೆ. ಉದ್ದಿನ ಬೇಳೆ ಕೆಜಿಗೆ 25 ರೂ ಹೆಚ್ಚಳವಾಗಿ 135 ರೂ., 100 ರೂ ಇದ್ದ ಹೆಸರು ಕಾಳು 120 ರೂ., 70 ರೂ. ಇದ್ದ ಹಲಸಂದಿ ಕಾಳು 100 ರೂ. 120 ರೂ. ಇದ್ದ ಶೇಂಗಾ 145 ರೂ. ಹಾಗೂ ವಾರದ ಹಿಂದೆ 66 ರೂ. ಇದ್ದ ಹುರಳಿ ಕಾಳು ಬೆಲೆ ಶನಿವಾರ 105 ರೂ.ಗೆ ಏರಿಕೆಯಾಗಿದೆ. ಅದು ಖಾಲಿ ಆದರೆ ಬೆಲೆಯಲ್ಲಿಮತ್ತೆ 10-20 ರೂ. ಹೆಚ್ಚಾಗ ಬಹುದು.

ಜನವರಿ ತಿಂಗಳಲ್ಲಿಪ್ರತಿ ಕೆಜಿಗೆ 95-99 ರೂ. ಇದ್ದ ತೊಗರಿ ಬೇಳೆ ದರ, ಪ್ರಸ್ತುತ 160 ರೂ. (ಉತ್ತಮ) ತಲುಪಿದೆ. ಈಗ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿರುವುದು ಹಳೆಯ ಸ್ಟಾಕ್‌. ಪರಿಸ್ಥಿತಿ ಹೀಗೇ ಮುಂದುವರಿದರೆ ದೀಪಾವಳಿ ಹಬ್ಬದ ವೇಳೆಗೆ ತೊಗರಿ ಬೇಳೆ ದರ ಕೆ.ಜಿಗೆ 200 ರೂ. ತಲುಪಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಹೋಲ್‌ಸೇಲ್‌ ವ್ಯಾಪಾರಿ ರಾಜಶೇಖರ್‌.

ಒಂದು ತಿಂಗಳಲ್ಲಿ ಕಂಡ ಜಂಪ್‌

ತೊಗರಿ ಬೇಳೆ ಕೆಜಿಗೆ 125 ರಿಂದ 160
ಜೀರಿಗೆ ಕೆಜಿಗೆ - 300 ರಿಂದ 600
ಉದ್ದಿನ ಬೇಳೆ ಕೆಜಿಗೆ 100 ರಿಂದ 135 ರೂ.
ಹಲಸಂದಿ ಕಾಳು ಕೆಜಿಗೆ 100 ರೂ. 120 ರೂ.
ಹುರಳಿ ಕಾಳು ಕೆಜಿಗೆ 66 ರೂ. 105 ರೂ.

ಈಗ ಭರ್ಮಾ, ಬಾಂಗ್ಲಾ, ತಾಂಜೇನಿಯಾ ಮೊದಲಾದ ದೇಶಗಳು ಹಾಗೂ ಹೊರ ರಾಜ್ಯಗಳಿಂದ ತೊಗರಿ ಬೇಳೆ ಹಾಗೂ ಕಾಳುಗಳು ಆಮದಾಗುತ್ತಿರುವ ಕಾರಣ ಬೆಲೆ ಕೊಂಚ ನಿಯಂತ್ರಣದಲ್ಲಿದೆ. ಆಮದು ಕಡಿಮೆ ಆದರೆ ಕಿರಾಣಿ ಪದಾರ್ಥಗಳ ಬೆಲೆ ನಿಯಂತ್ರಣಕ್ಕೆ ಸಿಗುವುದಿಲ್ಲ ಎಂದು ದಾವಣಗೆರೆ ಕಲ್ಯಾಣ ಬಸವೇಶ್ವರ ಟ್ರೇಡರ್ಸ್‌ ನ ಕೆ. ಎಂ. ವಿಶ್ವನಾಥ್‌ ಹೇಳಿದ್ದಾರೆ.
ಸೌಮ್ಯಶ್ರೀ ಮಾರ್ನಾಡ್
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ