ಆ್ಯಪ್ನಗರ

ಟಿಕ್‌ಟಾಕ್‌ ದುರಂತಕ್ಕೆ ಯುವಕ ಸಾವು

ಟಿಕ್‌ಟಾಕ್‌ನಲ್ಲಿ ವಿಡಿಯೊ ಸ್ಟಂಟ್‌ ಮಾಡಲು ಹೋಗಿ ಕತ್ತು, ಬೆನ್ನು ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿದ್ದ ಕುಮಾರ್‌ ಭಾನುವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾನೆ.

Vijaya Karnataka 24 Jun 2019, 5:00 am
Vijaya Karnataka Web TMK-23TMR5
ವಿಕ ಸುದ್ದಿಲೋಕ ತುಮಕೂರು

ಗೆಳೆಯನ ಜತೆ ಸೇರಿ ಟಿಕ್‌ಟಾಕ್‌ನಲ್ಲಿ ವಿಡಿಯೊ ಸ್ಟಂಟ್‌ ಮಾಡಲು ಹೋಗಿ ಕತ್ತು, ಬೆನ್ನು ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಕುಮಾರ್‌ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾನೆ.

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದ ಯುವಕ ಕುಮಾರ್‌ ಟಿಕ್‌ಟಾಕ್‌ನಲ್ಲಿ ವಿಡಿಯೊ ಸ್ಟಂಟ್‌ ಮಾಡಲು ಹೋಗಿ ಆಯತಪ್ಪಿ ಬಿದ್ದು ಕತ್ತು, ಬೆನ್ನು ಮೂಳೆ ಮುರಿದುಕೊಂಡಿದ್ದ. ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿತ್ತು.

ಇತ್ತೀಚೆಗೆ ತನ್ನ ಸ್ನೇಹಿತನ ಜತೆ ಶಾಲಾ ಮೈದಾನದಲ್ಲಿ ಬ್ಯಾಕ್‌ ಸ್ಟಂಟ್‌ ಸಾಹಸ ಮಾಡಲು ಮುಂದಾಗಿದ್ದ. ಇದಕ್ಕಾಗಿ ಓಡಿ ಬಂದ ಕುಮಾರ್‌ ತನ್ನ ಸ್ನೇಹಿತನ ಎರಡೂ ಅಂಗೈ ಮೇಲೆ ಪಾದ ಊರಿ ಹಿಂಬದಿಗೆ ಜಿಗಿದಿದ್ದ. ಆದರೆ, ಆಯತಪ್ಪಿ ತಲೆಕೆಳಗಾಗಿ ಬಿದ್ದ ಪರಿಣಾಮ ಕತ್ತಿನ ಮೂಳೆ ಮುರಿದು ಹೋಗಿತ್ತು. ಸ್ನೇಹಿತನ ಜತೆ ಮೂರು ಬಾರಿ ಈ ರೀತಿ ಸ್ಟಂಟ್‌ ಮಾಡಿದ್ದ. ಆದರೆ ನಾಲ್ಕನೇ ಬಾರಿ ಆಯತಪ್ಪಿ ಬಿದ್ದಿದ್ದ.

ಕಳೆದ ಜೂನ್‌ 19ರಂದು ಈ ವಿಡಿಯೊ ವೈರಲ್‌ ಆಗಿತ್ತು. ಸ್ಟಂಟ್‌ ಮಾಡಲು ಹೋಗಿ ಈಗ ಕುಮಾರ್‌ ಜೀವ ಕಳೆದುಕೊಂಡಿದ್ದು, ಟಿಕ್‌ಟಾಕ್‌ಗೆ ರಾಜ್ಯದಲ್ಲಿ ಮೊದಲ ಬಲಿ ಇದು ಎನ್ನುವಂತಾಗಿದೆ. ಟಿಕ್‌ಟಾಕ್‌ಗೆ ಬಲಿಯಾಗಿರುವ ಕುಮಾರ್‌ ಆರ್ಕೆಸ್ಟ್ರಾದಲ್ಲಿ ಡ್ಯಾನ್ಸರ್‌ ಕಮ್‌ ಸಿಂಗರ್‌ ಆಗಿದ್ದ.

ಟಿಕ್‌ಟಾಕ್‌ ದುರಂತದಿಂದ ಸ್ನೇಹಿತನನ್ನು ಕಳೆದುಕೊಂಡಿರುವುದು ತುಂಬಾ ದುಃಖ ತಂದಿದೆ. ಮೃತ ದೇಹವನ್ನು ಸೋಮವಾರ ಸ್ವಗ್ರಾಮಕ್ಕೆ ತರಲಾಗುತ್ತದೆ. ಈ ಸಂಬಂಧ ಚಿಕ್ಕನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
- ಜಗದೀಶ್‌, ಮೃತನ ಸ್ನೇಹಿತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ