ಆ್ಯಪ್ನಗರ

ಅಧಿಕಾರದಲ್ಲಿದ್ದಾಗ ಬಿಜೆಪಿ ಟಿಪ್ಪು ಜಯಂತಿ ಆಚರಿಸಿದ್ದೇಕೆ?: ಸಿದ್ದರಾಮಯ್ಯ

ಟಿಪ್ಪು ಜಯಂತಿ ಬಗ್ಗೆ ಯಡಿಯೂರಪ್ಪ, ಶೆಟ್ಟರ್‌, ಅಶೋಕ್‌ ವಿರೋಧ ಮಾಡುತ್ತಿರುವುದೇಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka Web 24 Oct 2017, 8:58 pm

ಬೆಂಗಳೂರು: ತಾವು ಅಧಿಕಾರದಲ್ಲಿದ್ದಾಗ ಟಿಪ್ಪು ವೇಷಧಾರಿಗಳಾಗಿ ಟಿಪ್ಪು ಜಯಂತಿ ಆಚರಣೆ ಮಾಡಿದ್ದ ಬಿಜೆಪಿ ನಾಯಕರಾದ ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಆರ್‌.ಅಶೋಕ್‌ ಮೊದಲಾದವರು ಈಗ ವಿರೋಧ ಮಾಡುತ್ತಿರುವುದೇಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka Web tippu jayanti siddaramaiah questions bjp
ಅಧಿಕಾರದಲ್ಲಿದ್ದಾಗ ಬಿಜೆಪಿ ಟಿಪ್ಪು ಜಯಂತಿ ಆಚರಿಸಿದ್ದೇಕೆ?: ಸಿದ್ದರಾಮಯ್ಯ


ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ''ಚುನಾವಣೆ ಹತ್ತಿರ ಬರುತ್ತಿದೆ ಎಂಬ ಕಾರಣಕ್ಕೆ ಟಿಪ್ಪು ಜಯಂತಿ ವಿರೋಧ ಮಾಡುತ್ತಿರುವ ಬಿಜೆಪಿಯವರ ಎರಡು ನಾಲಗೆಯನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ. ಟಿಪ್ಪು ವೇಷಧಾರಿಯಾಗಿ ಖಡ್ಗ ಹಿಡಿದು ಅಲ್ಲಾಹುವಿನ ಮೇಲೆ ಆಣೆ ಮಾಡಿದ್ದ ಯಡಿಯೂರಪ್ಪನವರು, ನಾನು ಮತ್ತೆ ಬಿಜೆಪಿ ಸೇರುವುದಿಲ್ಲ ಎಂದು ಕೂಗಿದ್ದರು. ಆಗೊಂದು, ಈಗೊಂದು ನಾಟಕವಾಡುವ ಯಡಿಯೂರಪ್ಪನವರ ಮಾತಿಗೆ ಏನಾದರೂ ಕಿಮ್ಮತ್ತಿದೆಯೇ,'' ಎಂದು ವ್ಯಂಗ್ಯವಾಡಿದರು.

''ಮುಖ್ಯಮಂತ್ರಿಯಾಗಿ ಜಗದೀಶ್‌ ಶೆಟ್ಟರ್‌, ಉಪ ಮುಖ್ಯಮಂತ್ರಿಯಾಗಿ ಅಶೋಕ್‌ ಟಿಪ್ಪು ವೇಷಧಾರಿಗಳಾಗಿ ಜಯಂತಿ ಆಚರಿಸಿದ್ದಷ್ಟೇ ಅಲ್ಲ ಟಿಪ್ಪು ಕುರಿತಾದ ಪುಸ್ತಕಕ್ಕೆ ಮುನ್ನುಡಿ ಬರೆದು ಶೆಟ್ಟರ್‌ ಅವರು ಟಿಪ್ಪು ವನ್ನು ಹಾಡಿ ಹೊಗಳಿದ್ದರು.ಆದರೆ ಈಗ ರಾಜಕೀಯ ಪ್ರೇರಿತರಾಗಿ ವಿರೋಧ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಹಿಂದು- ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ,'' ಎಂದು ಆರೋಪಿಸಿದರು.

''ಟಿಪ್ಪು ಜಯಂತಿ ನಡೆಸುವುದು ಸರಕಾರದ ತೀರ್ಮಾನ. ಅದನ್ನು ವಿರೋಧಿಸುವವರಿಗೆ ಸಂವಿಧಾನ ಗೊತ್ತಿಲ್ಲ.ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿಗೆ ವಿವಾದ ಸ್ವರೂಪ ನೀಡಲು ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳುವುದು ಅವರ ಲೆಕ್ಕಾಚಾರ. ದೇವನಹಳ್ಳಿಯಲ್ಲಿ ಜನಿಸಿದ ಟಿಪ್ಪು ಕನ್ನಡಿಗರಲ್ಲವೇ ? ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧ ಮಾಡಿಲ್ಲವೇ? ಮೂರನೇ ಯುದ್ಧದಲ್ಲಿ ಬ್ರಿಟಿಷರಿಗೆ ಯುದ್ಧ ವೆಚ್ಚ ನೀಡಲಾಗದೆ ತನ್ನ ಮಕ್ಕಳನ್ನೇ ಅಡ ಇಟ್ಟದ್ದ. ಅವರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ವೀರ ಮರಣವನ್ನಪ್ಪಿದ್ದು ಸುಳ್ಳೇ ? ಯಾರೇ ಆಗಲಿ, ಇತಿಹಾಸ ತಿರುಚಬಾರದು,'' ಎಂದು ಅಭಿಪ್ರಾಯಪಟ್ಟರು.

Tippu Jayanti: Siddaramaiah Questions BJP

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ