ಆ್ಯಪ್ನಗರ

ಕೊರೊನಾ ನಿಯಂತ್ರಣಕ್ಕೆ ಜೈವಿಕ ತಂತ್ರಜ್ಞಾನ ನೆರವು: ಬೆನೆಟ್‌ ವಿವಿ ಆನ್‌ ಲೈನ್‌ ಸಮಾವೇಶದಲ್ಲಿ ತಜ್ಞರ ಅಭಿಮತ

ಸೋಂಕಿನಿಂದ ರಕ್ಷಣೆಗೆ ಜೈವಿಕ ತಂತ್ರಜ್ಞಾನದ ನೆರವಿನ ನಾನಾ ಆಯಾಮಗಳ ಚರ್ಚೆ - ಟೈಮ್ಸ್‌ ಆಫ್‌ ಇಂಡಿಯೂ ಸಮೂಹದ ಬೆನೆಟ್‌ ವಿವಿಯಿಂದ ಆಯೋಜನೆ

Vijaya Karnataka Web 16 Apr 2020, 11:46 pm
ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಜೈವಿಕ ತಂತ್ರಜ್ಞಾನದಿಂದ ಪರಿಹಾರಗಳು ದೊರಕಲಿವೆಯೇ ಎಂಬ ಕುರಿತು 'ಟೈಮ್ಸ್‌ ಆಫ್‌ ಇಂಡಿಯಾ' ಸಮೂಹದ ಬೆನೆಟ್‌ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗ ಗುರುವಾರ ಆಯೋಜಿಸಿದ್ದ 'ಜಾಗತಿಕ ಆನ್‌ಲೈನ್‌ ಸಮಾವೇಶ'ದಲ್ಲಿ ತಜ್ಞರು ಚಿಂತನ ಮಂಥನ ನಡೆಸಿದರು.
Vijaya Karnataka Web ಬೆನೆಟ್‌ ವಿವಿ
ಬೆನೆಟ್‌ ವಿವಿ


ಸೋಂಕು ಪತ್ತೆ ಮತ್ತು ಪರೀಕ್ಷೆ, ಲಸಿಕೆ ಅಭಿವೃದ್ಧಿ, ಚಿಕತ್ಸಾ ಪದ್ಧತಿಗಳು, ಸೋಂಕು ನಿವಾರಣೆ, ಪೌಷ್ಟಿಕತೆ ಮತ್ತು ಸಾರ್ವಜನಿಕ ಆರೋಗ್ಯ ಮತ್ತಿತರ ವಿಚಾರಗಳ ಬಗ್ಗೆ ದೇಶ-ವಿದೇಶಗಳ ವಿಷಯ ತಜ್ಞರು ತಮ್ಮ ಅಭಿಪ್ರಾಯಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಂಡಿಸಿದರು.

ಉದ್ಘಾಟನಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಯೋಕಾನ್‌ ಮುಖ್ಯಸ್ಥೆ, ಡಾ. ಕಿರಣ್‌ ಮಜುಂದಾರ್‌ ಷಾ, ''ಈ ಸಾಂಕ್ರಾಮಿಕ ಜೈವಿಕ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಮಾಡಿದೆ. ಭಾರತ ಆರಂಭದಲ್ಲಿಸೋಂಕು ಪತ್ತೆ ಪರೀಕ್ಷಾ ಕಿಟ್‌ ಕೊರತೆಯನ್ನು ಎದುರಿಸುತ್ತಿತ್ತು. ಆದರೆ ಜೈವಿಕ ತಂತ್ರಜ್ಞಾನ ಇಲಾಖೆ ರಚಿಸಿದ ಒಕ್ಕೂಟದಿಂದಾಗಿ ಭಾರತದಲ್ಲೇ ಅಗತ್ಯವಿರುವಷ್ಟು ಕಿಟ್‌ಗಳನ್ನು ತಯಾರಿಸುವ ಮೂಲಕ ದೇಶ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ'' ಎಂದರು.

ವೆಲ್‌ ಕಮ್‌ ಟ್ರಸ್ಟ್‌ನ ಡಿಬಿಟಿ ಇಂಡಿಯಾ ಅಲಯನ್ಸ್‌ನ ಸಿಇಒ ಡಾ. ಶಾಹಿದ್‌ ಜಮೀಲ್‌, ''ಭಾರತದಲ್ಲಿ ದಿನೇ ದಿನೇ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್‌ ಪರಿಣಾಮದ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ. ಬಲಿಷ್ಠ ಪ್ರತಿಕಾಯಗಳನ್ನು(ಆಂಟಿ ಬಾಡೀಸ್‌) ಸೃಷ್ಟಿಸುವವರೆಗೆ ಸೋಂಕಿಗೆ ಲಸಿಕೆ ಕಂಡುಹಿಡಿಯುವುದು ಕಷ್ಟ. ಪ್ರಸ್ತುತ 100ಕ್ಕೂ ಅಧಿಕ ಲಸಿಕೆ ಕಂಡುಹಿಡಿಯುವ ಪ್ರಯತ್ನಗಳು ನಡೆದಿವೆ'' ಎಂದರು.

ಸನೋಫಿ ಹೆಲ್ತ್‌ ಕೇರ್‌ನ ಅಧ್ಯಕ್ಷ ಡಾ. ವರಪ್ರಸಾದ್‌ರೆಡ್ಡಿ, ''ಭಾರತದಲ್ಲಿ ಪ್ರಸ್ತುತ ಡಯಾಗ್ನಾಸ್ಟಿಕ್‌ ಕಿಟ್‌ಗಳ ಗುಣಮಟ್ಟ ಉತ್ತಮವಾಗಿಲ್ಲ. ಅವುಗಳ ಕೊರತೆ ಹೆಚ್ಚಿದೆ. ಸರಕಾರ ಅದಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ'' ಎಂದರು.

ಸಿಎಸ್‌ಐಆರ್‌ನ ಹಿರಿಯ ವಿಜ್ಞಾನಿ ದೇವಜ್ಯೋತಿ ಚಕ್ರವರ್ತಿ, ''ಕ್ಷಿಪ್ರವಾಗಿ ಕೋವಿಡ್‌-19 ಪತ್ತೆ ಹಚ್ಚುವ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಅದರಲ್ಲಿ ಕೇವಲ 45 ನಿಮಿಷಗಳಲ್ಲಿ ಸೋಂಕು ಪತ್ತೆ ಹಚ್ಚಬಹುದು'' ಎಂದು ಹೇಳಿದರು.

ಮೈ ಲ್ಯಾಬ್‌ ಡಿಸ್ಕವರಿ ಸೊಲ್ಯೂಷನ್ಸ್‌ನ ಹಶ್ಮುಖ್‌ ರಾವಲ್‌, ''ಸೋಂಕು ನಿಯಂತ್ರಣಕ್ಕೆ ತ್ವರಿತವಾಗಿ ಪರೀಕ್ಷೆಗಳ ಅಗತ್ಯವಿದೆ. ಭಾರತ ವಿದೇಶಗಳಿಂದ ಬರುವ ಪ್ರಯಾಣಿಕರ ತಪಾಸಣೆಯನ್ನು ಆರಂಭಿಸಿದೆ. ಮೈಲ್ಯಾಬ್ಸ್‌ ಸರಕಾರಕ್ಕೆ ಎಲ್ಲ ನೆರವನ್ನೂ ನೀಡುತ್ತಿದೆ'' ಎಂದರು.


ಕೋವಿಡ್‌-19 ಪರೀಕ್ಷೆಯ ಸಾಮರ್ಥ್ಯ ಹೆಚ್ಚಿಸಬೇಕು. ಸಂಶೋಧನೆ ಮತ್ತು ಅಭಿವೃದ್ಧಿ ಮೂಲಕ ಸೋಂಕು ಪತ್ತೆ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಳ ಮಾಡಬೇಕು. ವಿಜ್ಞಾನಿಗಳು, ವೈದ್ಯರು ಮತ್ತು ಉತ್ಪಾದಕರು ಎಲ್ಲರೂ ಸೇರಿ ಲಸಿಕೆ ಕಂಡು ಹಿಡಿಯಲು ಪ್ರಯತ್ನಿಸಬೇಕಿದೆ.
-ಕೆ.ಜಿ. ಅನಂತಕೃಷ್ಣನ್‌, ಪ್ರಧಾನ ನಿರ್ದೇಶಕರು, ಒಪಿಪಿಐ

ಸಾರ್ಸ್‌ ಸೋಂಕಿಗಿಂತ ಕೋವಿಡ್‌-19 ಸೋಂಕು ಹರಡುತ್ತಿರುವ ಪ್ರಮಾಣ ಭಾರೀ ಹೆಚ್ಚಿದೆ. ಅದು ಆರ್‌ಎನ್‌ಎ ಸೋಂಕು ಆಧಾರದ್ದು. ಅದನ್ನು ಭೇದಿಸಲು ಪ್ರೋಟಿನ್‌ ಮತ್ತು ಎಸಿಇ-2 ರಿಸೆಪ್ಟರ್‌ಗಳಿಂದ ಪರಿಹಾರ ಕಂಡುಕೊಳ್ಳಬೇಕಿದೆ.
-ಪ್ರೊ. ರಾಬರ್ಟ್‌, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ

ಭಾರತದಲ್ಲಿಈಗ ಭಾರೀ ಪ್ರಮಾಣದಲ್ಲಿಪರೀಕ್ಷೆ ನಡೆಸುವ ಸಾಮರ್ಥ್ಯವನ್ನು ವೃದ್ಧಿಸಲಾಗಿದೆ. ಆರ್‌ಟಿಪಿಸಿಆರ್‌ ಮತ್ತು ಪ್ರತಿಕಾಯ ಆಧಾರಿತ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಸೋಂಕು ತಡೆಗೆ ಲಾಕ್‌ಡೌನ್‌ ಅತ್ಯಂತ ಮಹತ್ವದ ಕ್ರಮ.
- ಡಾ. ಕೆ. ವಿಜಯ ರಾಘವನ್‌, ಪ್ರಧಾನ ವೈಜ್ಞಾನಿಕ ಸಲಹೆಗಾರರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ