ಆ್ಯಪ್ನಗರ

ಎನ್‌ಪಿಎಸ್‌ ಹಣ ರೈತರ ಸಾಲ ಮನ್ನಾಗೆ ಬಳಸಿ: ಸಿಎಂಗೆ ಸಲಹೆ

ರೈತರ ಸಾಲ ಮನ್ನಾಗೆ (ರಾಷ್ಟ್ರೀಯ ಪಿಂಚಣಿ ಯೋಜನೆ)ಎನ್‌ಪಿಎಸ್‌ ಹಣ ಬಳಸಿಕೊಳ್ಳುವಂತೆ ಸರಕಾರಿ ನೌಕರರ ಸಂಘವು ಸಿಎಂ ಕುಮಾರಸ್ವಾಮಿಗೆ ಸಲಹೆ ನೀಡಿದೆ.

Vijaya Karnataka 15 Jul 2018, 8:55 am
ಬೆಂಗಳೂರು: ರೈತರ ಸಾಲ ಮನ್ನಾಗೆ (ರಾಷ್ಟ್ರೀಯ ಪಿಂಚಣಿ ಯೋಜನೆ)ಎನ್‌ಪಿಎಸ್‌ ಹಣ ಬಳಸಿಕೊಳ್ಳುವಂತೆ ಸರಕಾರಿ ನೌಕರರ ಸಂಘವು ಸಿಎಂ ಕುಮಾರಸ್ವಾಮಿಗೆ ಸಲಹೆ ನೀಡಿದೆ.
Vijaya Karnataka Web nps


ರಾಜ್ಯ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಘೋಷಿಸಿ ಸಂಪನ್ಮೂಲ ಸಂಗ್ರಹಕ್ಕೆ ನಾನಾ ಆದಾಯ ಮೂಲ ಹುಡುಕುತ್ತಿರುವ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಅವರಿಗೆ ನೌಕರರ ಸಂಘ ಸ್ವಯಂ ಪ್ರೇರಿತವಾಗಿ ಈ ಪ್ರಸ್ತಾಪ ಮುಂದಿಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ರಮೇಶ್‌ ಸಂಗ ''2004ರಲ್ಲಿ ರಾಜ್ಯ ಸರಕಾರಿ ನೌಕರರಿಗೆ ಎನ್‌ಪಿಎಸ್‌ ಯೋಜನೆ ಅನ್ವಯಿಸಲಾಗಿದೆ. ಆ ದಿನಾಂಕದಿಂದ ಸೇವೆ ಸೇರ್ಪಡೆಯಾದ ನೌಕರರ ಸಂಖ್ಯೆ 2.10 ಲಕ್ಷದಷ್ಟಿದೆ. ಇವರ ಈವರೆಗಿನ ವಂತಿಗೆ ಹಾಗೂ ಸರಕಾರದ ಪ್ರೀಮಿಯಂ ಸೇರಿ ಒಟ್ಟು ಮೊತ್ತ 11 ಸಾವಿರ ಕೋಟಿ ರೂ. ಇದೆ. ಷೇರುಪೇಟೆಯಲ್ಲಿ ಹಣ ಬಳಸುವ ಬದಲು ರೈತರ ಸಾಲ ಮನ್ನಾಗೆ ಬಳಸಿಕೊಂಡರೆ ಸಂಘದ ಅಡ್ಡಿ ಇಲ್ಲ,'' ಎಂದರು.

''ಎನ್‌ಪಿಎಸ್‌ನಿಂದ ನೌಕರರಿಗೆ ಯಾವುದೇ ಅನುಕೂಲ ಇಲ್ಲ. ನಿವೃತ್ತಿ ಬಳಿಕ ನಿಶ್ಚಿತ ಹಣ ಪಡೆಯುವ ಕುರಿತು ಸರಕಾರಕ್ಕೂ ಖಾತರಿ ಇಲ್ಲ. ಅಧಿಕಾರಿ ವರ್ಗವೂ ಯೋಜನೆಯಿಂದ ಲಾಭವಿಲ್ಲವೆಂದು ಹೇಳಿದ್ದಾರೆ. ಹೀಗಾಗಿ ಷೇರುಪೇಟೆಯಿಂದ ಹಣ ಪಡೆದು ಸರಕಾರದ ಯೋಜನೆಗಳಿಗೆ ಬಳಸಿಕೊಂಡಲ್ಲಿ ಈವರೆಗಿನ ವಂತಿಗೆ ಹಣಕ್ಕೆ ಬಡ್ಡಿ ಬಿಟ್ಟುಕೊಡಲು ಸಿದ್ಧ,'' ಎಂದು ಸ್ಪಷ್ಟಪಡಿಸಿದರು.

ಸಿಎಂ ಜತೆ ಚರ್ಚೆ

''ವಿಧಾನಸಭೆ ಚುನಾವಣೆ ವೇಳೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಎನ್‌ಪಿಎಸ್‌ ರದ್ದುಪಡಿಸುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದರು. ಅಧಿಕಾರಕ್ಕೇರುತ್ತಿದ್ದಂತೆ ಅವರು ತಾವೇ ನೀಡಿದ ವಾಗ್ದಾನವನ್ನು ಈಡೇರಿಸುತ್ತಿಲ್ಲ. ಇತ್ತೀಚಿನ ಅಧಿವೇಶನದಲ್ಲೂ ಎನ್‌ಪಿಎಸ್‌ ಕುರಿತು ಸ್ಪಷ್ಟತೆ ಮೂಡಿಸದ ಕಾರಣ ಸಂಘವು ಸಿಎಂ ಜತೆ ಚರ್ಚಿಸಲು ನಿರ್ಧರಿಸಿದೆ,'' ಎಂದು ರಮೇಶ್‌ ಸಂಗ ವಿವರಿಸಿದರು.

ಬೆಂಗಳೂರು ಚಲೊ, ರಾಜ್ಯ ಬಂದ್‌

''ಎನ್‌ಪಿಎಸ್‌ ವಾಪಸ್‌ ಪಡೆದು ಹಳೇ ಪಿಂಚಣಿ ಯೋಜನೆ ಮುಂದುವರಿಸುವಂತೆ ಕೋರಿ ಸರಕಾರದ ಮೇಲೆ ಒತ್ತಡ ಹೇರಲು ಈ ತಿಂಗಳಾಂತ್ಯಕ್ಕೆ 'ಬೆಂಗಳೂರು ಚಲೊ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರತಿಭಟನೆ ಬದಲು ನೌಕರರ ವರ್ಗಕ್ಕೆ ಬೃಹತ್‌ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತದೆ. ಇದರ ಬೆನ್ನಲ್ಲೇ ಸಿಎಂ ಜತೆ ಮಾತುಕತೆ ನಡೆಸಲಿದ್ದು, ವಿಫಲವಾದ ಪಕ್ಷದಲ್ಲಿ ರಾಜ್ಯ ಬಂದ್‌ ನಡೆಸುವ ಆಲೋಚನೆ ಇದೆ,'' ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ