ಆ್ಯಪ್ನಗರ

26 ಮಂದಿ ಸಾವಿಗೆ ಕಾರಣವಾಗಿದ್ದ ವೀರಪ್ಪನ್‌ ಸಹಚರ ಸೈಮನ್‌ ಸಾವು

ಬಹು ಅಂಗಾಂಗ ವೈಫಲ್ಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ವೀರಪ್ಪನ್‌ ಸಹಚರ ಸೈಮನ್‌,ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ...

Vijaya Karnataka 16 Apr 2018, 5:00 am
ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ವೀರಪ್ಪನ್‌ ಸಹಚರ ಸೈಮನ್‌,ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕೊಳ್ಳೇಗಾಲದ ಪಾಲಾರ್‌ ಸೇತುವೆಯನ್ನು ಬಾಂಬ್‌ನಿಂದ ಸ್ಫೋಟಿಸಿ ಪೊಲೀಸ್‌ ಸಿಬ್ಬಂದಿ, ಅರಣ್ಯಾಧಿಕಾರಿಗಳೂ ಸೇರಿದಂತೆ 26 ಮಂದಿಗೆ ಸಾವಿಗೆ ಕಾರಣವಾಗಿದ್ದ ಆರೋಪಕ್ಕಾಗಿ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ಸೈಮನ್‌ನನ್ನು ಚಿಕಿತ್ಸೆಗಾಗಿ ನಾಲ್ಕು ದಿನಗಳ ಹಿಂದೆ ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಕರೆತರಲಾಗಿತ್ತು. ಶನಿವಾರ ರಾತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಂತೆಯೇ ಆತ ಮೃತಪಟ್ಟಿದ್ದಾನೆ ಎಂದು ಜೈಲು ಮೂಲಗಳು ತಿಳಿಸಿವೆ.
Vijaya Karnataka Web verappa

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಾರ್ತಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಡ್ಡರಹಟ್ಟಿ ನಿವಾಸಿಯಾದ ಈತ, 1994 ರಲ್ಲಿ ಬಂಧಿತನಾಗಿ 23 ವರ್ಷ 2 ತಿಂಗಳು ಜೈಲು ವಾಸ ಅನುಭವಿಸಿದ್ದ.ನ್ಯಾಯಾಧೀಶರ ಸಮ್ಮುಖದಲ್ಲಿ ಸೈಮನ್‌ ಶವಪರೀಕ್ಷೆ ನಡೆಸಿದ ವೈದ್ಯರು ಮೃತ ದೇಹವನ್ನು ಸಂಬಂಧಿಧಿಕರಿಗೆ ಒಪ್ಪಿಸಿದ್ದಾರೆ.
ನಾನಾ-ನೀನಾ
ಕಾಡುಗಳ್ಳ ವೀರಪ್ಪನ್‌ ಅಟ್ಟಹಾಸ ಜೋರಾಗಿದ್ದ ಸಂದರ್ಭ ಸೇಲಂನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆಗಿದ್ದ ಗೋಪಾಲಕೃಷ್ಣ ಮತ್ತು ವೀರಪ್ಪನ್‌ ನಡುವೆ ದೊಡ್ಡ ಜಟಾಪಟಿಯೇ ನಡೆದಿತ್ತು. ದೂರವಾಣಿ ಮೂಲಕ 'ನಾನಾ-ನೀನಾ' ಎನ್ನುವ ಮಟ್ಟದ ಜಗಳವೂ ನಡೆದಿತ್ತು. ಇದೇ ಕಾರಣಕ್ಕೆ ವೀರಪ್ಪನ್‌ ಎಸ್‌ಪಿ ಗೋಪಾಲಕೃಷ್ಣ ಅವರನ್ನು ಕೊಲೆ ಮಾಡುವ ಪಣ ತೊಟ್ಟಿದ್ದ. ಇದರ ಭಾಗವಾಗಿ 1993ರಲ್ಲಿ ಪೊಲೀಸ್‌, ಅರಣ್ಯಾಧಿಕಾರಿಗಳು ಬರುತ್ತಿದ್ದ ಪಾಲಾರ್‌ ಸೇತುವೆಯನ್ನು ಸ್ಫೋಟಿಸಿ ಗುಂಡಿನ ಮಳೆ ಸುರಿಸಿದ್ದರು. ಪರಿಣಾಮವಾಗಿ 26 ಮಂದಿ ಸಾವಿಗೀಡಾಗಿ ಗೋಪಾಲಕೃಷ್ಣ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ 43 ಮಂದಿ ಮಹಿಳೆಯರೂ ಸೇರಿ 176 ಮಂದಿಯನ್ನು ಬಂಧಿಸಲಾಗಿತ್ತು. ಟಾಡಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಉಳಿದೆಲ್ಲಾ ಆರೋಪಿಗಳನ್ನು ಬಿಡುಗಡೆಗೊಳಿಸಲಾಗಿತ್ತು. ಸೈಮನ್‌, ಬೆಲವೇಂದ್ರನ್‌, ಜ್ಞಾನಪ್ರಕಾಶ್‌ ಮತ್ತು ಮೀಸೆಕಾರ ಮಾದಯ್ಯ ಅವರನ್ನು ಮಾತ್ರ ಆರೋಪಿಗಳು ಎಂದು ಘೋಷಿಸಿದ್ದ ನ್ಯಾಯಾಲಯ, ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಜೀವಾವಧಿಯಿಂದ ಗಲ್ಲುಶಿಕ್ಷೆ
ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಸರಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿ ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡುವಂತೆ ಕೋರಿತ್ತು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, 'ಇದೊಂದು ಗಂಭೀರ ಪ್ರಕರಣವಾಗಿದ್ದು, ವೀರಪ್ಪನ್‌ ಎನ್ನುವ ಒಬ್ಬ ವ್ಯಕ್ತಿ ಸರಕಾರದ ವಿರುದ್ಧ ಯುದ್ಧ ಸಾರಿ 26 ಮಂದಿ ಸಾವಿಗೆ ಕಾರಣ ಆಗಿದ್ದಾನೆ. ಈ ನಾಲ್ವರು ವೀರಪ್ಪನ್‌ ಸಹಚರರಾಗಿರುವುದರಿಂದ ಗಲ್ಲು ಶಿಕ್ಷೆಗೆ ಅರ್ಹವಾಗಿದ್ದಾರೆ' ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ನಾಲ್ವರೂ ಸುಪ್ರೀಂಕೊರ್ಟ್‌ನ ಸಂವಿಧಾನ ಪೀಠಕ್ಕೆ ಮೇಲ್ಮನವಿ ಹೋಗಿದ್ದರು. ಮೇಲ್ಮನವಿಯ ವಿಚಾರಣೆ ನಡೆಯುವ ವೇಳೆಗೆ 10 ವರ್ಷ ಕಳೆದಿತ್ತು. ಹೀಗಾಗಿ, ಸಂವಿಧಾನ ಪೀಠ, 'ಈಗಾಗಲೇ ಆರೋಪಿಗಳು 10 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಮತ್ತೆ ಗಲ್ಲು ಶಿಕ್ಷೆ ನೀಡಿದರೆ ಜೈಲು ವಾಸದ ಜತೆಗೆ ಗಲ್ಲು ಶಿಕ್ಷೆಯೂ ಸೇರಿ ಒಂದೇ ಅಪರಾಧಕ್ಕೆ ಎರಡು ಶಿಕ್ಷೆ ಕೊಟ್ಟಂತಾಗುತ್ತದೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ' ಎಂದು ಹೇಳಿ ಗಲ್ಲು ಶಿಕ್ಷೆಯನ್ನು ಮತ್ತೆ ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಿತ್ತು.

ಕುಟುಂಬಸ್ಥರ ಆರೋಪ
ಮೈಸೂರಿನಿಂದ ಕರೆತಂದಿದ್ದ ಸೈಮನ್‌ ಜೈಲಿನಲ್ಲೇ ಮೃತಪಟ್ಟ ಬಳಿಕ ಆಸ್ಪತ್ರೆಗೆ ಕರೆ ತಂದಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಪೆರೋಲ್‌ಗೂ ಹೋಗಿರಲಿಲ್ಲ

ಸೈಮನ್‌ ಸಹಚರರು ಪೆರೋಲ್‌ ಮೇಲೆ 15 ದಿನ , 30 ದಿನ ಇದ್ದು ಬರುತ್ತಿದ್ದಾರೆ. ಆದರೆ ಸೈಮನ್‌ ಮಾತ್ರ ಪೆರೋಲ್‌ ಮೇಲೆಯೂ ಹೊರಗೆ ಹೋಗುತ್ತಿರಲಿಲ್ಲ. ''ಕುಟುಂಬದ ದುಸ್ಥಿತಿ ನೋಡಲಾಗದೆ ಅಲ್ಲಿಗೆ ಹೋಗುತ್ತಿರಲಿಲ್ಲ ,''ಎಂದು ಅವರ ಸಂಬಂಧಿಗಳು 'ವಿಜಯ ಕರ್ನಾಟಕ' ಜತೆ ದುಃಖ ತೋಡಿಕೊಂಡರು.


ತುರ್ತು ಚಿಕಿತ್ಸೆ ಕೊಡಿಸುವ ಉದ್ದೇಶದಿಂದಲೇ ನಾಲ್ಕು ದಿನಗಳ ಹಿಂದೆಯೇ ಮೈಸೂರು ಜೈಲಿನಿಂದ ಕರೆತಂದರೂ ತಕ್ಷಣ ಸೂಕ್ತ ಆಸ್ಪತ್ರೆಗೆ ದಾಖಲಿಸಲಿಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಿದ್ದರೆ ಸೈಮನ್‌ ಇನ್ನಷ್ಟು ದಿನ ಬದುಕುತ್ತಿದ್ದರು.

-ಸೈಮನ್‌ ಅಣ್ಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ