ಆ್ಯಪ್ನಗರ

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎನ್ನುತ್ತಲೇ ಕನ್ನಡಕ್ಕಾಗಿ ಸಂಕಲ್ಪ ಮಾಡಿದ ವಿಧಾನಸೌಧ ಸಿಬ್ಬಂದಿ

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸುಮಾರು ಎರಡು ಸಾವಿರ ಸಿಬ್ಬಂದಿ, ಅಧಿಕಾರಿಗಳು ಕನ್ನಡದ ಹಾಡುಗಳನ್ನು ಹಾಡಿದರು. ನಾಡ ಗೀತೆ ಹಾಡುವ ಮೂಲಕ ಗೀತ ಗಾಯನ ಕಾರ್ಯಕ್ರಮ ಆರಂಭಗೊಂಡಿತು. ಸಚಿವ ಸುನೀಲ್ ಕುಮಾರ್, ಕನ್ನಡದಲ್ಲಿ ಮಾತನಾಡುತ್ತೇನೆ, ಕನ್ನಡದಲ್ಲಿ ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡ ಬಳಕೆ ಮಾಡುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ ಹಾಗೂ ನಾಡು ನುಡಿ ಸಂಸ್ಕೃತಿ ಪರಂಪರೆ ಉಳಿಸಲು ಸಂಕಲ್ಪ ಮಾಡುತ್ತೇನೆ ಎಂದು ಸಚಿವಾಲಯದ ಸಿಬ್ಬಂದಿಗೆ ಸಂಕಲ್ಪ ಉಪದೇಶ ಬೋಧಿಸಿದರು.‌

Vijaya Karnataka Web 28 Oct 2021, 12:16 pm
ಬೆಂಗಳೂರು: ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ ಹಾಗೆಯೇ ಕವಿ ನಿಸಾರ್ ಅಹ್ಮದ್‌ರವರ ಜೋಗದ ಸಿರಿ ಬೆಳಗಿನಲ್ಲಿ ಹೀಗೆ ಕನ್ನಡದ ಪ್ರಸಿದ್ದ ಮೂರು ಹಾಡುಗಳನ್ನು ಹಾಡುವ ಮೂಲಕ ವಿಧಾನಸೌಧದ ಸಿಬ್ಬಂದಿ, ಅಧಿಕಾರಿಗಳು ಕನ್ನಡ ಪ್ರೇಮ ಮೆರೆದರು.
Vijaya Karnataka Web kannada vidhanasoudha


ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿರುವ ಹಿನ್ನೆಲೆ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಗುರುವಾರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸುಮಾರು ಎರಡು ಸಾವಿರ ಸಿಬ್ಬಂದಿ, ಅಧಿಕಾರಿಗಳು ಕನ್ನಡದ ಹಾಡುಗಳನ್ನು ಹಾಡಿದರು. ನಾಡ ಗೀತೆ ಹಾಡುವ ಮೂಲಕ ಗೀತ ಗಾಯನ ಕಾರ್ಯಕ್ರಮ ಆರಂಭಗೊಂಡಿತು. ಮೂರು ಹಾಡುಗಳನ್ನು ಹಾಡಿದ ಬಳಿಕ ಸಚಿವಾಲಯ ಸಿಬ್ಬಂದಿಗೆ ಸಚಿವ ಸುನೀಲ್ ಕುಮಾರ್, ಕನ್ನಡದಲ್ಲಿ ಮಾತನಾಡುತ್ತೇನೆ, ಕನ್ನಡದಲ್ಲಿ ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡ ಬಳಕೆ ಮಾಡುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ ಹಾಗೂ ನಾಡು ನುಡಿ ಸಂಸ್ಕೃತಿ ಪರಂಪರೆ ಉಳಿಸಲು ಸಂಕಲ್ಪ ಮಾಡುತ್ತೇನೆ ಎಂದು ಸಂಕಲ್ಪ ಉಪದೇಶ ಬೋಧಿಸಿದರು.‌
ಮಕ್ಕಳೊಂದಿಗೆ, ಕುಟುಂಬದ ಸದಸ್ಯರೊಂದಿಗೆ ಕನ್ನಡದಲ್ಲಿ ಮಾತನಾಡಿ; ಸುನೀಲ್ ಕುಮಾರ್ ಮನವಿ
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ,‌ಶಾಸಕ ಸುನೀಲ್ ನಾಯಕ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ಮಾತನಾಡಿದ ಸ್ಪೀಕರ್ ಕಾಗೇರಿ, ಸಚಿವ ಸುನೀಲ್ ಕುಮಾರ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೊಸ ಶಕ್ತಿ ಕೊಟ್ಟಿದ್ದಾರೆ. ರಾಜ್ಯೋತ್ಸವದ ಹೊಸ್ತಿಲಲ್ಲಿ ಕನ್ನಡ ಅಭಿಯಾನ ಪ್ರಭಾವಿಯಾಗಿ ನಡೆಯುತ್ತಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಹಾಡು ಹಾಡುವ ಮೂಲಕ ಕನ್ನಡದ ಬಗ್ಗೆ ಹೆಮ್ಮೆಯ ವಾತಾವರಣ ಸೃಷ್ಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭಾಷೆಗಳಿಗೆ ಅದರದ್ದೇ ಆದ ವಿಶಿಷ್ಟವಾದ ಸ್ಥಾನಮಾನ ಇದೆ. ಅದಕ್ಕೆ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಇದೆ. ಕನ್ನಡದ ಬಗ್ಗೆ ಹೊಸ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದರು.
ಕನ್ನಡ ರಾಜ್ಯೋತ್ಸವ ವಿಶೇಷ: ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಐದು ಲಕ್ಷ ಕಂಠಗಳಲ್ಲಿ ಮೊಳಗಲಿದೆ ಕನ್ನಡ ಗೀತೆಯ ಗಾಯನ
ಸಚಿವ ಸುನೀಲ್ ಕುಮಾರ್ ಮಾತನಾಡಿ, ಲಕ್ಷ ಕಂಠದಲ್ಲಿ ಗಾಯನ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಮನೆಗಳಲ್ಲಿ ಕನ್ನಡ ಮಾತನಾಡಬೇಕು. ಮಕ್ಕಳಿಗೆ ಕನ್ನಡ ಹಾಡು ಕಲಿಸುವ, ಪತ್ರಿಕೆ ಓದುವ, ಸಿನಿಮಾ ನೋಡುವ ಅಭ್ಯಾಸ ರೂಢಿಸಿ ಪ್ರೋತ್ಸಾಹ ನೀಡಬೇಕು. ಅನ್ಯಭಾಷೆಯ ಪ್ರಭಾವದ ಕಾರಣದಿಂದ ಕನ್ನಡ ಭಾಷೆಯ ಪ್ರಭಾವ ಕಡಿಮೆಯಾಗಬಾರದು. ಭಾಷೆ ಸಂಸ್ಕೃತಿ ನಡವಳಿಕೆ ಮೂಲಕ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ಭಾಷೆಯನ್ನು ಶ್ರೀಮಂತ, ಸಮೃದ್ಧಗೊಳಿಸುವ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುತ್ತಿದೆ ಎಂದರು.

ಎಂಇಎಸ್ ಪುಂಡಾಟಿಕೆ ಸಹಿಸಲ್ಲಇದೇ ಸಂದರ್ಭದಲ್ಲಿ ಎಂಇಎಸ್ ಪುಂಡಾಟಿಕೆಯ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಸುನೀಲ್ ಕುಮಾರ್ ಅವರು, ಎಂಇಎಸ್ ಪುಂಡಾಟವನ್ನು ಸರ್ಕಾರ ಸಹಿಸೋದಿಲ್ಲ. ಗೃಹ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ