ಆ್ಯಪ್ನಗರ

ಬೋಪಯ್ಯ ಬದಲು ಕಾಗೇರಿ ನಾಮಪತ್ರ ಸಲ್ಲಿಕೆ: ಬಿಜೆಪಿಯ ಸ್ಪೀಕರ್ ಅಭ್ಯರ್ಥಿ ದಿಢೀರ್ ಬದಲು

ಸ್ಪೀಕರ್‌ ಚುನಾವಣೆಗೆ ದೋಸ್ತಿ ಪಕ್ಷಗಳಿಂದ ಜಂಟಿ ಅಭ್ಯರ್ಥಿ ನಿಲ್ಲುಸುವುದು ಅನುಮಾನ. ಈ ಸಂಬಂಧ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಯಾವುದೇ ಚರ್ಚೆ ನಡೆದಿಲ್ಲವೆಂದು ಗೊತ್ತಾಗಿದೆ. ದೋಸ್ತಿ ಪಕ್ಷಗಳ ಅಭ್ಯರ್ಥಿ ನಾಮಪತ್ರ ಸಲ್ಲಿಸದಿದ್ದರೆ ಕಾಗೇರಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

Vijaya Karnataka Web 30 Jul 2019, 11:47 am
ಬೆಂಗಳೂರು: ಬಿಜೆಪಿಯ ಸ್ಪೀಕರ್ ಅಭ್ಯರ್ಥಿ ದಿಢೀರ್ ಬದಲಾಗಿದ್ದು ಬೋಪಯ್ಯ ಬದಲು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನಾಮಪತ್ರ ಸಲ್ಲಿಸಿದ್ದಾರೆ.
Vijaya Karnataka Web Kageri


ಹೈ ಕಮಾಂಡ್ ನಿರ್ದೇಶನದಂತೆ ಇಂದು ಮುಂಜಾನೆ 11.30ಕ್ಕೆ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿಗೆ ಕಾಗೇರಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಸೇರಿದಂತೆ ಪಕ್ಷದ ಮುಖಂಡರು ಹಾಜರಿದ್ದರು.

ಸ್ಪೀಕರ್‌ ಸ್ಥಾನಕ್ಕೆ ಕೆ.ಆರ್‌.ರಮೇಶ್‌ ಕುಮಾರ್‌ ರಾಜೀನಾಮೆ ಹಿನ್ನೆಲೆಯಲ್ಲಿ ವಿಧಾನಸಭೆಯ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಸ್ಪೀಕರ್‌ ಚುನಾವಣೆ ಸಂಬಂಧ ಡೆಪ್ಯೂಟಿ ಸ್ಪೀಕರ್‌ ಕೃಷ್ಣಾರೆಡ್ಡಿ ವಿಧಾನಸಭೆಯಲ್ಲಿ ಪ್ರಕಟಿಸಿದರು. ಡೆಪ್ಯೂಟಿ ಸ್ಪೀಕರ್‌ ಅವರೇ ಈ ಚುನಾವಣೆ ನಡೆಸಿಕೊಡಲಿದ್ದಾರೆ. ನಂತರ ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ. ಬಳಿಕ ನೂತನ ಡೆಪ್ಯೂಟಿ ಸ್ಪೀಕರ್‌ ಆಯ್ಕೆ ಪ್ರಕ್ರಿಯೆಯಾಗಲಿದೆ.

ಬುಧವಾರ ಬೆಳಗ್ಗೆ 11 ಗಂಟೆಗೆ ಹೊಸ ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಈ ಸಂಬಂಧ ಮಂಗಳವಾರ ಮಧ್ಯಾಹ್ನ 12 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕಿತ್ತು. ವಿಧಾನಸಭೆಯ ರಾಜ್ಯ ಸರ್ಕಾರದ ಕಾರ್ಯದರ್ಶಿಗಳಿಗೆ ಕಾಗೇರಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ವಿಧಾನಸಭೆ ಸಂಖ್ಯಾಬಲದ ಆಧಾರದಲ್ಲಿ ಅವರ ಆಯ್ಕೆ ನಿಶ್ಚಿತ.

ನಿನ್ನೆಯವರೆಗೆ ಕೆ.ಜಿ.ಬೋಪಯ್ಯನವರೇ ಬಿಜೆಪಿ ಅಭ್ಯರ್ಥಿ, ಅವರೇ ಆಯ್ಕೆಯಾಗುವುದು ಖಚಿತ ಎನ್ನಲಾಗಿತ್ತು. ಬೋಪಯ್ಯ ಈ ಹಿಂದೆಯೂ ಬಿಜೆಪಿ ಸರಕಾರದ ಅವಧಿಯಲ್ಲಿ ವಿಧಾನಸಭೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 15ನೇ ವಿಧಾನಸಭೆ ಅಸ್ತಿತ್ವಕ್ಕೆ ಬಂದಾಗಲೂ ಹಂಗಾಮಿ ಸ್ಪೀಕರ್‌ ಆಗಿ ಬೋಪಯ್ಯ ಕಾರ್ಯ ನಿರ್ವಹಿಸಿದ್ದರು.

ಒಲ್ಲೆ ಎಂದ ಮಹಾಶಯರು !

ಜಗದೀಶ ಶೆಟ್ಟರ್‌, ಸುರೇಶ್‌ ಕುಮಾರ್‌, ವಿಶ್ವೇಶ್ವರ ಹೆಗಡೆ ಕಾಗೇರಿ ಪೈಕಿ ಒಬ್ಬರನ್ನು ಈ ಹುದ್ದೆಗೆ ಪರಿಗಣಿಸಲು ಪಕ್ಷದ ವಲಯದಲ್ಲಿ ಚರ್ಚೆಯಾಗಿತ್ತು. ಆದರೆ, ಈ ಬಾರಿ ಕಲಾಪ ನಡೆಸಲು ಸೌಮ್ಯ ಸ್ವಭಾವದವರ ಬದಲು ಸ್ವಲ್ಪ ಖಡಕ್‌ ಆದ ಹಾಗೂ ಕಾನೂನಿನ ಬಗ್ಗೆ ಹೆಚ್ಚು ತಿಳಿವಳಿಕೆ ಉಳ್ಳವರೇ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಹಾಗಾಗಿ ಶೆಟ್ಟರ್‌ ಜತೆಗೆ ಬೋಪಯ್ಯ ಹೆಸರು ಪ್ರಸ್ತಾಪವಾಗಿತ್ತು. ಸಚಿವ ಸಂಪುಟ ಸೇರ್ಪಡೆಗೆ ಆಸಕ್ತಿ ತೋರಿದ ಶೆಟ್ಟರ್‌ ಸ್ಪೀಕರ್‌ ಹುದ್ದೆಯನ್ನು ನಿರಾಕರಿಸಿದ್ದರು. ಕೊನೆಗೆ ಬೋಪಯ್ಯನವರ ಹೆಸರೇ ಅಂತಿಮವಾಗಿತ್ತು. ಆದರೆ ಏಕಾಏಕಿ ಈಗ ಅವರ ಬದಲು ಕಾಗೇರಿಗೆ ನಾಮಪತ್ರ ಸಲ್ಲಿಸಲು ಸೂಚಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ