ಆ್ಯಪ್ನಗರ

ಸುರೇಶ್‌ ಕುಮಾರ್‌ ಅವರೇ ಹೇಳಿದ 65 ವರ್ಷಗಳ ಹಿಂದಿನ ಸ್ವಾರಸ್ಯಕರ ಕತೆ!

ದೂರದ ಊರಿಂದ ಸ್ವಂತ ಊರಿಗೆ ವರ್ಗಾವಣೆಯಾದ ಸಂತೋಷ, ಆಗಲೇ ಗಂಡು ಮಗು ಜನಿಸಿದ ಖುಷಿ ಒಟ್ಟೊಟ್ಟಿಗಿದ್ದರೂ, ಚಾಲನಾ ಆದೇಶ ಪತ್ರವನ್ನು ತರುವುದೇ ದೊಡ್ಡ ಸಮಸ್ಯೆಯಾಗಿತ್ತು. ಯಾಕೆಂದರೆ ಚಾಲನಾ ಆದೇಶ ಪತ್ರವನ್ನು ಖುದ್ದಾಗಿ ಅವರೇ ತಂದುಕೊಳ್ಳಬೇಕಿತ್ತು.

Vijaya Karnataka Web 17 Sep 2019, 2:48 pm
ಬೆಂಗಳೂರು: ಚಿತ್ರದುರ್ಗದಿಂದ ಸ್ವಂತ ಊರಿಗೆ ವರ್ಗಾವಣೆ ಸಿಕ್ಕಿದಾಗ ತುಂಬ ಸಂತೋಷ ಪಟ್ಟಿದ್ದರು. ಆಗಲೇ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಒಂದೆಡೆ ಹುಟ್ಟೂರಿಗೆ ವರ್ಗಾವಣೆಯಾದ ಸಂತೋಷ, ಮತ್ತೊಂದೆಡೆ ಮಗು ಜನನದ ಖುಷಿ ಮನೆ ಮಾಡಿತ್ತು. ಇವುಗಳ ಮಧ್ಯೆ ಸಮಸ್ಯೆಯಾಗಿ ಕಾಡಿತ್ತು ಚಾಲನಾ ಆದೇಶ ಪತ್ರವನ್ನು ಖುದ್ದಾಗಿ ತರುವಂತದ್ದು. ಮುಂದಿನ ಶಾಲೆಗೆ ಶಿಕ್ಷಕಿಯಾಗಿ ಪ್ರವೇಶಿಸಬೇಕು ಎಂದರೆ ಚಾಲನಾ ಆದೇಶ ಪತ್ರ ಬೇಕೇಬೇಕು. ಎಳೆಗೂಸನ್ನು ಬಿಟ್ಟು ಬೆಂಗಳೂರಿಂದ ಚಿತ್ರದುರ್ಗದ ವರೆಗೆ ಹೋಗಿ ಬರುವಂತಿಲ್ಲ. ಆದರೆ ಹೋಗಲೇ ಬೇಕಾದ ಅನಿವಾರ್ಯತೆ. ಕೊನೆಗೆ 15 ದಿನದ ಎಳೆಗೂಸನ್ನು ಹೊತ್ತು ಚಿತ್ರದುರ್ಗದ ಬಸ್‌ ಹತ್ತೇ ಬಿಡುತ್ತಾರೆ ಆ ತಾಯಿ.
Vijaya Karnataka Web Suresh Kumar


15 ದಿನಗಳ ಆ ಪುಟ್ಟ ಮಗು ಬೇರಾರು ಅಲ್ಲ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಸುರೇಶ್‌ ಕುಮಾರ್‌. ಸುಮಾರು 65 ವರ್ಷಗಳ ಹಿಂದಿನ ಘಟನೆಯನ್ನು ಸುರೇಶ್‌ ಕುಮಾರ್‌ ನೆನಪಿಸಿಕೊಂಡರು. ತಮ್ಮ ಹುಟ್ಟಿನ ಗುಟ್ಟನ್ನು ಬಿಟ್ಟುಕೊಟ್ಟರು. ಬೆಂಗಳೂರಿನ ವಿಜಯ ಕರ್ನಾಟಕ ಕಚೇರಿಯಲ್ಲಿ ನಡೆದ ವಿಕ ಟೀಚರ್ಸ್‌ ಕಾರ್ನರ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರು ತಮ್ಮ ತಾಯಿಗೆ ವರ್ಗಾವಣೆಯಾದ ಸಂದರ್ಭವನ್ನು ಸ್ಮರಿಸಿದರು.

ವಿದ್ಯಾರ್ಥಿಗಳ ಮೊಬೈಲ್‌ ಹುಚ್ಚು ಬಿಡಿಸಲು ಏನಾದರು ಕ್ರಮ ಕೈಗೊಳ್ಳಿ: ಶಿಕ್ಷಣ ಸಚಿವರಿಗೆ ದುಂಬಾಲು ಬಿದ್ದ ಶಿಕ್ಷಕರು

ನನ್ನ ತಾಯಿ ಚಿತ್ರದುರ್ಗದಲ್ಲಿ ಶಿಕ್ಷಕಿಯಾಗಿದ್ದರು. ನಾನು ಜನಿಸಿದ ಸಂದರ್ಭದಲ್ಲೇ ತಾಯಿಗೆ ಬೆಂಗಳೂರಿಗೆ ವರ್ಗಾವಣೆ ಆಯಿತು. ಚಾಲನಾ ಆದೇಶವನ್ನು ತರಲು ಚಿತ್ರದುರ್ಗಕ್ಕೆ ಪ್ರಯಾಣಿಸಬೇಕಾಗಿತ್ತು. ವರ್ಗಾವಣೆಯಾದ ಶಾಲೆಗೆ ಕೆಲಸ ಮುಂದುವರಿಸಲು ಚಾಲನಾ ಆದೇಶ ಅಗತ್ಯ. ವರ್ಗಾವಣೆಗೊಂಡ ಶಿಕ್ಷಕರು ಖುದ್ದಾಗಿ ಎಇಒ ಕಚೇರಿಗೆ ಹೋಗಿ ಚಾಲನಾ ಆದೇಶವನ್ನು ತರಬೇಕಿತ್ತು. ನಾನು ಹುಟ್ಟಿ ಕೇವಲ 15 ದಿನವಾಗಿತ್ತು. ಪುಟ್ಟ ಮಗುವನ್ನು ಹೊತ್ತುಕೊಂಡೇ ಬೆಂಗಳೂರಿಂದ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಿದರು.


ಎಐಒ ಕಚೇರಿಗೆ ಹೋದಾಗ ತಾಯಿಯ ಕೈಯಲ್ಲಿದ್ದ ಪುಟ್ಟ ಮಗುವನ್ನು ನೋಡಿ ಅಧಿಕಾರಿ ದಂಗಾಗಿ ಹೋದರು. ಇಷ್ಟು ಪುಟ್ಟ ಮಗುವನ್ನು ಅಷ್ಟು ದೂರದಿಂದ ಚಾಲನಾ ಆದೇಶಕ್ಕಾಗಿ ಕರೆದುಕೊಂಡು ಬಂದಿದ್ದಾರಲ್ಲ ಎಂದು ಪರಿತಪಿಸಿದರು. ತಕ್ಷಣ ಹೆಚ್ಚುವರಿ ಶಿಕ್ಷಣ ಅಧಿಕಾರಿಗಳು ಚಾಲನಾ ಆದೇಶವನ್ನು ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಊಟವನ್ನು ತರಿಸಿಕೊಟ್ಟು, ನನ್ನ ತಾಯಿಯನ್ನು ಬಸ್‌ ನಿಲ್ದಾಣದ ವರೆಗೆ ಬಿಟ್ಟು ಬರಲು ಮತ್ತು ಬೆಂಗಳೂರು ಬಸ್‌ ಹತ್ತಿಸಿ ಬರಲು ಅಧಿಕಾರಿಗಳಿಗೆ ಆದೇಶಿಸಿದರು ಎಂದು ಸುರೇಶ್‌ ಕುಮಾರ್‌ ವಿವರಿಸಿದರು.

ಆದರೆ ಇಂದು ಅಂತಹ ಅಂತಃಕರುಣೆಯ ಅಧಿಕಾರಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಸುರೇಶ್‌ ಕುಮಾರ್‌ ವಿಷಾಧ ವ್ಯಕ್ತ ಪಡಿಸಿದರು.

ಸಚಿವ ಸುರೇಶ್‌ ಕುಮಾರ್‌ ಜೊತೆಗಿನ ವಿಕ ಟೀಚರ್ಸ್‌ ಕಾರ್ನರ್‌ ಫೋನ್‌ ಇನ್‌ ಕಾರ್ಯಕ್ರಮದ ಪೂರ್ಣ ವರದಿ ಮತ್ತು ಆಸಕ್ತಿಕರ ಸಂಗತಿಗಳು ಮಂಗಳವಾರ ವಿಡಿಯೋ ಸಮೇತ ಪ್ರಕಟಗೊಳ್ಳಲಿದೆ.

ಶಿಕ್ಷಕರಿಗಿರುವ ಪಠ್ಯೇತರ ಕೆಲಸಗಳು ಒಂದಾ ಎರಡಾ? ಹೀಗಾದರೆ ಪಾಠಗಳಿಗೆ ಪ್ರಾಮುಖ್ಯತೆ ನೀಡುವುದು ಹೇಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ