ಆ್ಯಪ್ನಗರ

ಪ್ಲಾಸ್ಟಿಕ್‌ ಬಾಟಲ್‌ನಲ್ಲಿ ನೀರು ಮಾರಾಟ ನಿಷೇಧವಾಗಲಿ: ಖಾದರ್‌

ಪ್ಲಾಸ್ಟಿಕ್‌ ಬಾಟೆಲ್‌ಗಳಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾದುದು. ಹೀಗಾಗಿ ಬಾಟೆಲ್‌ಗಳಲ್ಲಿ ನೀರು ಮಾರಾಟವನ್ನು ನಿಷೇಧಿಸುವ ತುರ್ತು ಅಗತ್ಯವಿದೆ.

ವಿಕ ಸುದ್ದಿಲೋಕ 29 May 2017, 2:23 pm
ಬೆಂಗಳೂರು: ಪ್ಲಾಸ್ಟಿಕ್‌ ಬಾಟೆಲ್‌ಗಳಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾದುದು. ಹೀಗಾಗಿ ಬಾಟೆಲ್‌ಗಳಲ್ಲಿ ನೀರು ಮಾರಾಟವನ್ನು ನಿಷೇಧಿಸುವ ತುರ್ತು ಅಗತ್ಯವಿದೆ. ನೀರಿನ ಬಾಟೆಲ್‌ಗಳನ್ನು ಪ್ಲಾಸ್ಟಿಕ್‌ ನಿಷೇಧ ಕಾಯಿದೆಯೊಳಗೆ ಒಳಪಡಿಸದಿರುವುದು ವಿಷಾದನೀಯ ಎಂದು ಆಹಾರ ತಜ್ಞ ಡಾ.ಖಾದರ್‌ ಹೇಳಿದರು.
Vijaya Karnataka Web water in plastic bottles
ಪ್ಲಾಸ್ಟಿಕ್‌ ಬಾಟಲ್‌ನಲ್ಲಿ ನೀರು ಮಾರಾಟ ನಿಷೇಧವಾಗಲಿ: ಖಾದರ್‌


ಗ್ರಾಮೀಣ ನ್ಯಾಚುರಲ್‌ ಸಂಸ್ಥೆಯು ಗ್ರಾಮೀಣ ಕುಟುಂಬದ ಸಹಯೋಗದೊಂದಿಗೆ ಲಾಲ್‌ಬಾಗ್‌ನ ಡಾ.ಎಂ.ಎಚ್‌.ಮರಿಗೌಡ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ 5ನೇ ವಾರ್ಷಿಕ ಸಿರಿಧಾನ್ಯ ಉತ್ಸವದಲ್ಲಿ ‘ವಿಶ್ವ ಚೇತನ’ ಪ್ರಶಸ್ತಿ (20 ಸಾವಿರ ನಗದು ಹಾಗೂ ಫಲಕ) ಸ್ವೀಕರಿಸಿ ಅವರು ಮಾತನಾಡಿದರು.

ವೈದ್ಯರು ಎಲ್ಲಿದ್ದಾರೆ?

‘ಜನ ದಿನನಿತ್ಯ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸಿರಿಧಾನ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡುವಲ್ಲಿ ವೈದ್ಯರು ಏಕೆ ಆಸಕ್ತಿ ತೋರುತ್ತಿಲ್ಲ,’ಎಂದು ಪ್ರಶ್ನಿಸಿದ ಖಾದರ್‌, ‘‘ಸಮಾಜದ ಬದಲಾವಣೆಯ ಪ್ರಕ್ರಿಯೆಯಲ್ಲಿ ಸಿರಿಧಾನ್ಯಗಳ ಬಳಕೆ ಅತಿಮುಖ್ಯ ಪಾತ್ರ ವಹಿಸುತ್ತದೆ. ಹೀಗಾಗಿ ವೈದ್ಯರೂ ಈ ಕುರಿತು ಆಸಕ್ತಿ ವಹಿಸಬೇಕು,’ ಎಂದರು.

‘ರೋಗಮುಕ್ತ ಜೀವನ ನಡೆಸಲು ಸಿರಿಧಾನ್ಯಗಳಿಂದ ಮಾತ್ರ ಸಾಧ್ಯ. ಅದರಲ್ಲೂ ನಗರದ ಜನರಿಗೆ ಬಿಪಿ, ಶುಗರ್‌, ಹೃದಯ ತೊಂದರೆ, ನರ ರೋಗ, ಮೂರ್ಛೆ ರೋಗದವರಿಗೆ ಸಿರಿಧಾನ್ಯಗಳ ಬಳಕೆ ಹೆಚ್ಚು ಉಪಯುಕ್ತವಾದುದು,’’ ಎಂದು ವಿವರಿಸಿದರು. ‘‘ವಿದೇಶಗಳಿಂದ ಬಂದಿರುವ ತಂಪು ಪಾನೀಯಗಳು ಆರೋಗ್ಯಕ್ಕೆ ಹಾನಿಕರ. ಇವುಗಳನ್ನು ತ್ಯಜಿಸಿ, ನಮ್ಮ ಸ್ವದೇಶಿ ನೆಲದಲ್ಲಿ ಬೆಳೆದ ಬೇಲದಹಣ್ಣು, ಎಳನೀರಿನಂತಹ ಪದಾರ್ಥಗಳನ್ನು ಸೇವಿಸಿ, ಆರೋಗ್ಯ ಪಡೆಯಿರಿ,’ ಎಂದು ಸಲಹೆ ನೀಡಿದರು.

ನಟ ಹಾಗೂ ನಿರ್ದೇಶಕ ಬಿ.ಸುರೇಶ್‌ ಮಾತನಾಡಿ, ‘‘ನಾನು ಸಿರಿಧಾನ್ಯಗಳ ಮಹತ್ವವನ್ನು ಅರಿತಿದ್ದೇನೆ. ಮನೆಯಲ್ಲಿ ಮಾತ್ರವಲ್ಲ ನಾನಾ ಭಾಗಗಳಿಗೆ ಶೂಟಿಂಗ್‌ಗೆ ಹೋದಾಗ ಕೂಡ ನಾನು ಮನೆಯಿಂದ ನವಣೆಯಂತ ಕೆಲವು ಸಿರಿಧಾನ್ಯಗಳನ್ನು ಜತೆಯಲ್ಲಿ ಹೊತ್ತೊಯ್ಯುತ್ತೇನೆ. ಅಲ್ಲಿ ಅನ್ನ ಮಾಡಿಕೊಂಡು ಊಟ ಮಾಡುತ್ತೇನೆ,’’ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. ನಟ ಅಚ್ಯುತಕುಮಾರ್‌ ಕೂಡ ಇವರಿಗೆ ಮಾತಿನ ಮೂಲಕ ಸಾಥ್‌ ನೀಡಿದರು.

ಸಿರಿಧಾನ್ಯಗಳ ಗಿರಣಿಗಳು ಬರಲಿ
ಗ್ರಾಮೀಣ ಕುಟುಂಬದ ಸಂಸ್ಥಾಪಕ ಎಂ.ಎಚ್‌. ಶ್ರೀಧರಮೂರ್ತಿ ಮಾತನಾಡಿ, ‘ಕರ್ನಾಟಕದಲ್ಲಿ ಸಿರಿಧಾನ್ಯಗಳ ಗಿರಣಿಗಳು (ಮಿಲ್‌ಗಳು) ಇಲ್ಲದಿರುವುದರಿಂದ ಇಲ್ಲಿ ಬೆಳೆದ ಸಿರಿಧಾನ್ಯಗಳು ತಮಿಳುನಾಡು ಮತ್ತು ಮಹಾರಾಷ್ಟ್ರಕ್ಕೆ ಹೋಗುತ್ತವೆ. ನಂತರ ಅವರ ನಾಮಫಲಕದಡಿ ಕರ್ನಾಟಕದವರು ದುಬಾರಿ ಬೆಲೆಗೆ ಖರೀದಿಸುವಂತಾಗಿದೆ. ಇದನ್ನು ತಪ್ಪಿಸಬೇಕೆಂದರೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸಿರಿಧಾನ್ಯಗಳ ಗಿರಣಿಗಳನ್ನು ಹಾಕಬೇಕು. ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೆ ಅಗತ್ಯ ನೆರವು ನೀಡಲು ಸರಕಾರ ಮುಂದಾಗಬೇಕು,’ ಎಂದು ಒತ್ತಾಯಿಸಿದರು.

ಆರೋಗ್ಯ ಪ್ರಶ್ನೋತ್ತರ

ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಋುತುಚಕ್ರ ಸಮಸ್ಯೆ, ಕೂದಲು ಉದುರುವ ಸಮಸ್ಯೆ, ಮಕ್ಕಳು ಸರಿಯಾಗಿ ಊಟ, ತಿಂಡಿ ಸೇವಿಸದಿರುವುದು, ಕ್ಯಾನ್ಸರ್‌ , ಬೆನ್ನು, ಕತ್ತು ನೋವು ಹೀಗೆ ನಾನಾ ಸಮಸ್ಯೆಗಳ ಕುರಿತಾದ ನೂರಾರು ಪ್ರಶ್ನೆಗಳು ಸಾರ್ವಜನಿಕರಿಂದ ತೂರಿಬಂದವು. ಈ ಎಲ್ಲ ಪ್ರಶ್ನೆಗಳಿಗೂ ಖಾದರ್‌ ಅವರು ಅತ್ಯಂತ ಚುಟುಕಾಗಿ ಉತ್ತರಿಸಿದರು.

ದಾಖಲೆ ನಿರ್ಮಾಣ
‘ಮೇ 26ರಿಂದ ಮೇ 28ರವರೆಗೆ ನಡೆದ ಮೇಳದಲ್ಲಿ ಸುಮಾರು 20 ಸಾವಿರ ಮಂದಿ ಆಗಮಿಸಿದ್ದರು. 30 ಟನ್‌ವರೆಗೆ ಧಾನ್ಯಗಳು ಮಾರಾಟವಾಗಿದ್ದು,ಸುಮಾರು 35 ಲಕ್ಷ ರೂ. ವಹಿವಾಟು ನಡೆದಿದೆ. ಈ ಮೂಲಕ ಸಿರಿಧಾನ್ಯ ಉತ್ಸವ ದಾಖಲೆ,’ನಿರ್ಮಿಸಿತು ಎಂದು ಗ್ರಾಮೀಣ ಕುಟುಂಬದ ಸಂಸ್ಥಾಪಕ ಎಂ.ಎಚ್‌. ಶ್ರೀಧರಮೂರ್ತಿ ಸಂತಸ ವ್ಯಕ್ತಪಡಿಸಿದರು. ಮೇ 29ರಂದೂ ಉತ್ಸವ ಮುಂದುವರಿಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ