ಆ್ಯಪ್ನಗರ

ಭಯಮುಕ್ತ ಭಾರತಕ್ಕಾಗಿ ನಾವೆಲ್ಲಾ ಗೌರಿಗಳಾಗಬೇಕು : ಇರೋಮ್‌ ಶರ್ಮಿಳಾ

ಗಾಂಧಿಯನ್ನು ಹತ್ಯೆಗೈದವರೇ ಪತ್ರಕರ್ತೆ ಗೌರಿಯನ್ನೂ ಹತ್ಯೆಗೈದಿದ್ದಾರೆ.

Vijaya Karnataka 23 Sep 2017, 7:54 am

ಧ್ವನಿ ದಮನದ ವಿರುದ್ಧ ಧ್ವನಿ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ್ತಿ ಕರೆ

ಬೆಂಗಳೂರು: ಗಾಂಧಿಯನ್ನು ಹತ್ಯೆಗೈದವರೇ ಪತ್ರಕರ್ತೆ ಗೌರಿಯನ್ನೂ ಹತ್ಯೆಗೈದಿದ್ದಾರೆ. ಭಯಗ್ರಸ್ಥ ಭಾರತ ನಿರ್ಮಿಸುವುದು ಹಂತಕರ ಉದ್ದೇಶವಾಗಿದ್ದು, ಭಯಮುಕ್ತ ಭಾರತ ನಿರ್ಮಾಣ ಮಾಡಲು ನಾವೆಲ್ಲಾ ಗೌರಿಗಳಾಗಬೇಕು. ಇದನ್ನು ಹೇಳುವುದಕ್ಕಾಗಿಯೇ ಮಣಿಪುರದಿಂದ ಬೆಂಗಳೂರಿಗೆ ಬಂದಿದ್ದೇನೆ. ಇಡೀ ದೇಶ ಸುತ್ತಿ ಗೌರಿ ಹತ್ಯೆ ಖಂಡಿಸುತ್ತೇನೆ ಎಂದು ಸಾಮಾಜಿಕ ಹೋರಾಟಗಾರ್ತಿ ಇರೋಮ್‌ ಶರ್ಮಿಳಾ ಹೇಳಿದರು.

ಸಾಮಾಜಿಕ ನ್ಯಾಯಕ್ಕಾಗಿ ವಕೀಲರ ವೇದಿಕೆ, ರೀಚ್‌ ಲಾ ಸೇರಿದಂತೆ ವಕೀಲರ ಹಲವು ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸೆಂಟ್ರಲ್‌ ಕಾಲೇಜ್‌ ಸೆನೆಟ್‌ ಹಾಲ್‌ನಲ್ಲಿ ಶುಕ್ರವಾರ ನಡೆದ 'ಧ್ವನಿ ದಮನದ ವಿರುದ್ಧ ಧ್ವನಿ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

''ಬಹುತ್ವ-ಬಹುಭಾಷಾ-ಪ್ರಜಾತಾಂತ್ರಿಕ ದೇಶವಾಗಿದ್ದ ಭಾರತವನ್ನು ಹಂತಕರು ದ್ವೇಷ-ದಮನಕಾರಿ-ಹಲ್ಲೆ-ಕೊಲೆಗಳ ದೇಶವಾಗಿ ಮಾರ್ಪಡಿಸಲು ಯತ್ನಿಸುತ್ತಿದ್ದಾರೆ. ಗಾಂದಿ ಹತ್ಯೆಯಿಂದ ಗೌರಿ ಹತ್ಯೆಯವರೆಗೂ ಇರುವ ಉದ್ದೇಶ ಭಿನ್ನ ಧ್ವನಿಗಳನ್ನು ಅಡಗಿಸುವುದಾಗಿದೆ. ಕೊಲ್ಲುವ ದಾಹದಲ್ಲಿರುವವರು ಸಂಸ್ಕೃತಿ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಸ್ಥಿತಿಗೆ ದೇಶವನ್ನು ದೂಡುತ್ತದೆ. ನಮ್ಮಗಳ ಮೌನವೇ ಹಂತಕರ ಶಕ್ತಿಯಾಗಿದೆ. ಗೌರಿ ಬಲಿದಾನ ವ್ಯರ್ಥವಾಗಬಾರದು,''ಎಂದರು.

ಹೈದರಾಬಾದಿನ ಕೌನ್ಸಿಲ್‌ ಫಾರ್‌ ಸೋಷಿಯಲ್‌ ಡೆವಲಪ್‌ಮೆಂಟ್‌ನ ನಿರ್ದೇಶಕಿ ಪ್ರೊ.ಡಾ.ಕಲ್ಪನಾ ಕನ್ನಾಬಿರನ್‌ ಮಾತನಾಡಿ, ''ಗೌರಿ ಹತ್ಯೆ ದೇಶ ಸಾಗುತ್ತಿರುವ ದಿಕ್ಕನ್ನು ತೋರಿಸುತ್ತಿದೆ. ತುರ್ತು ಪರಿಸ್ಥಿತಿಯಲ್ಲೂ ಇಷ್ಟೊಂದು ಕ್ರೌರ್ಯ ಇರಲಿಲ್ಲ. ಸಂವಿಧಾನದ ಬಗ್ಗೆ ಮಾತನಾಡಲು ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದಲಿತರು, ಅಲ್ಪಸಂಖ್ಯಾತರು, ವಿದ್ಯಾರ್ಥಿ ನಾಯಕರು, ಪತ್ರಕರ್ತರು, ಮಹಿಳೆಯರು ಯಾರೂ ಸುರಕ್ಷಿತರಲ್ಲದ ವಾತಾವರಣ ದೇಶದಲ್ಲಿ ಸೃಷ್ಟಿಯಾಗುತ್ತಿದೆ. ನೋಟು ನಿಷೇಧದಿಂದ ಧ್ವನಿ ನಿಷೇಧದತ್ತ ದೇಶ ಜಾರುತ್ತಿದೆ. ನಮ್ಮ ಧ್ವನಿಯನ್ನು ಇನ್ನಷ್ಟು ಗಟ್ಟಿಯಾಗಿ ಧ್ವನಿಸಬೇಕಾದ ಸಂದರ್ಭ ಬಂದಿದೆ,'' ಎಂದರು.

ಸಿಪಿಐ ಕೇಂದ್ರ ಸಮಿತಿ ಸದಸ್ಯ ಸಿದ್ದನಗೌಡ ಪಾಟೀಲ್‌ , ವಕೀಲರಾದ ಬಿ.ಟಿ.ವೆಂಕಟೇಶ್‌, ಬಹುಜನ ವಕೀಲ ವೇದಿಕೆಯ ಸುರೇಶ್‌, ಸಾಮಾಜಿಕ ನ್ಯಾಯಕ್ಕಾಗಿ ವಕೀಲರ ವೇದಿಕೆ ಸಂಘಟನೆಯ ಶ್ರೀನಿವಾಸ್‌ ಬಾಬು ಮಾತನಾಡಿದರು.

ಗೌರಿ ಹತ್ಯೆ ತನಿಖೆಗೆ ಗಡವು ವಿಧಿಸಿಲ್ಲ

ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಗೆ ಯಾವುದೇ ಗಡುವು ವಿಧಿಸಿಲ್ಲ . ಈ ವಿಚಾರದಲ್ಲಿ ಎಡ ಮತ್ತು ಬಲಪಂಥೀಯರು ಪರಸ್ಪರ ದೋಷಾರೋಪಣೆ ಮಾಡುತ್ತಿದ್ದಾರೆ. ಸರಕಾರ ನಿಷ್ಪಕ್ಷಪಾತ ತನಿಖೆ ಮಾಡಿಸುತ್ತಿದೆ. ಆದಷ್ಟು ಬೇಗ ತನಿಖೆ ಪೂರ್ಣಗೊಳಿಸುವಂತೆ ಎಸ್‌ಐಟಿಗೆ ಸೂಚನೆ ನೀಡಲಾಗಿದೆ .

Vijaya Karnataka Web we all need to be gauri irom sharmila
ಭಯಮುಕ್ತ ಭಾರತಕ್ಕಾಗಿ ನಾವೆಲ್ಲಾ ಗೌರಿಗಳಾಗಬೇಕು : ಇರೋಮ್‌ ಶರ್ಮಿಳಾ

-ರಾಮಲಿಂಗಾರೆಡ್ಡಿ, ಗೃಹ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ