ಆ್ಯಪ್ನಗರ

ಆಪರೇಷನ್‌ ಕಮಲ ಆಡಿಯೋ: ಎಸ್‌ಐಟಿ ತನಿಖೆ ಬಿಲ್‌ಕುಲ್‌ ಒಪ್ಪಲ್ಲ ಎಂದ ಬಿಎಸ್‌ವೈ

ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮನ್ನು ಇದರಲ್ಲಿ ಸಿಲುಕಿಸಲಾಗಿದೆ, ಇದು ಪ್ರತಿಪಕ್ಷಕ್ಕೆ ಶೋಭೆ ತರುವಂತದ್ದಲ್ಲ, ಮುಖ್ಯಮಂತ್ರಿಗಳು ಐಪಿಸಿ ಸೆಕ್ಷನ್‌ಗಳನ್ನು ಉಲ್ಲಂಘನೆ ಮಾಡಿದ್ದಾರೆ, ಆಡಿಯೋವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ.

Vijaya Karnataka Web 12 Feb 2019, 8:13 pm
ಬೆಂಗಳೂರು: ಆಪರೇಷನ್ ಕಮಲ ಆಡಿಯೋ ವಿಷಯ ಮಂಗಳವಾರ ಎರಡನೇ ದಿನವೂ ಕೂಡ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.
Vijaya Karnataka Web ಯಡಿಯೂರಪ್ಪ
ಯಡಿಯೂರಪ್ಪ

ಆಡಳಿತ ಪ್ರತಿಪಕ್ಷಗಳ ಸದಸ್ಯರ ವಾದ-ಪ್ರತಿವಾದಗಳು, ಗದ್ದಲ, ಕೋಲಾಹಲದಿಂದಾಗಿ ಕಲಾಪ ಕೆಲ ಬಾರಿ ಮುಂದೂಡಿದ ಪ್ರಸಂಗಗಳು ನಡೆಯಿತು.

ಈ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆಗೆ ಸರ್ಕಾರ ಮುಂದಾಗಿರುವ ಬಗ್ಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಸದನ ಸಮಿತಿಯಿಂದ ತನಿಖೆ ನಡೆಯಬೇಕೆಂದು ಆಗ್ರಹಿಸಿದರು.

ದಿನವಿಡೀ ಈ ವಿಷಯ ಕುರಿತು ನಡೆದ ಚರ್ಚೆಯ ಕೊನೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಆಡಿಯೋ ಪ್ರಕರಣವನ್ನು ಎಸ್.ಐ.ಟಿಗೆ ವಹಿಸುವುದರ ಕುರಿತು ತಮಗೆ ವಿಶ್ವಾಸವಿಲ್ಲ, ಈ ಪ್ರಕರಣದ ತನಿಖೆಯನ್ನು ಸದನ ಸಮಿತಿಗೆ ವಹಿಸಬೇಕೆಂದು ಆಗ್ರಹಿಸಿದರು.

ತಮ್ಮನ್ನು ರಾಜಕೀಯ ದುರುದ್ದೇಶದಿಂದ ಸಿಲುಕಿಸಲು ಎಳೆದು ತರಲಾಗಿದೆ, ಜೆಡಿಎಸ್ ಶಾಸಕರ ಪುತ್ರನಿಗೆ ಸಭಾಧ್ಯಕ್ಷರ ವಿಚಾರದಲ್ಲಿ ತಾವೇ ಖುದ್ದಾಗಿ ಆಮಿಷ ಒಡ್ಡಿರುವ ಕುರಿತು ಸಾಕ್ಷ್ಯಗಳಿದ್ದರೆ ತಾವು ರಾಜಕೀಯದಿಂದಲೇ ನಿವೃತ್ತಿಯಾಗುವುದಾಗಿ ಯಡಿಯೂರಪ್ಪ ಸವಾಲು ಹಾಕಿದರು.

ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮನ್ನು ಇದರಲ್ಲಿ ಸಿಲುಕಿಸಲಾಗಿದೆ, ಇದು ಪ್ರತಿಪಕ್ಷಕ್ಕೆ ಶೋಭೆ ತರುವಂತದ್ದಲ್ಲ, ಮುಖ್ಯಮಂತ್ರಿಗಳು ಐಪಿಸಿ ಸೆಕ್ಷನ್‌ಗಳನ್ನು ಉಲ್ಲಂಘನೆ ಮಾಡಿದ್ದಾರೆ, ಆಡಿಯೋವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಇದಕ್ಕೆ ಮುನ್ನ ಬೆಳಗ್ಗೆ ಸದನ ಆರಂಭವಾಗುತ್ತಲೇ ಬಿಜೆಪಿಯ ಹಿರಿಯ ಶಾಸಕ ಜೆ.ಸಿ.ಮಾದುಸ್ವಾಮಿ ಮಾತನಾಡಿ, ಎಸ್‌ಐಟಿ ತನಿಖೆ ನಡೆಸಲು ಮುಂದಾಗಿರುವುದು ಕಾನೂನು ಬದ್ದವಲ್ಲ, ಈ ಕುರಿತಂತೆ ಸಭಾಧ್ಯಕ್ಷರು ಮರುಪರಿಶೀಲನೆ ನಡೆಸಬೇಕೆಂದು ಹೇಳಿದರು.

ಬಿಜೆಪಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಪೊಲೀಸ್ ಅಧಿಕಾರಿಗಳ ತಂಡದಿಂದ ತನಿಖೆ ಅನಗತ್ಯ ಎಂದು ಆಗ್ರಹಪಡಿಸಿದರು.

ಬಿಜೆಪಿ ಶಾಸಕ ಸುರೇಶ್ ಕುಮಾರ್ ಮಾತನಾಡಿ, ಆಡಿಯೋ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ಸರ್ಕಾರ ಒಪ್ಪಿಸಲಿದೆ ಎಂದು 2 ದಿನದ ಮೊದಲೇ ಮೇಲ್ಮನೆಯ ಶಾಸಕರೊಬ್ಬರು ಸುಳಿವು ನೀಡಿದ್ದರು. ಈ ವಿಷಯ ವಿಧಾನಸಭೆಯಲ್ಲಿ ಪ್ರಸ್ತಾಪವಾಗುವ ಮೊದಲೇ ಸೋರಿಕೆಯಾಗಿರುವುದು ಅಚ್ಚರಿ ಮೂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ