ಆ್ಯಪ್ನಗರ

ಮೂಲ್ಕಿಯಲ್ಲಿ 300 ಮಿ.ಮೀ. ಮಳೆ, ಕರಾವಳಿಯಲ್ಲಿ ಶನಿವಾರ ಆರೆಂಜ್‌ ಅಲರ್ಟ್‌

ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್‌ 15ರವರೆಗೆ ಹೆಚ್ಚಿನ ಮಳೆಯಾಗಲಿದೆ. ಮಲೆನಾಡು ಜಿಲ್ಲೆಗಳಲ್ಲಿ ಸೆ. 14ರವರೆಗೆ ಹಾಗೂ ಒಳನಾಡು ಪ್ರದೇಶಗಳಲ್ಲಿ ಭಾನುವಾರದವರೆಗೆ ಮಳೆ ಮುಂದುವರಿಯಲಿದೆ.

Vijaya Karnataka 11 Sep 2020, 9:49 pm
ಬೆಂಗಳೂರು: ನೈಋುತ್ಯ ಮುಂಗಾರು ಕರಾವಳಿಯಲ್ಲಿ ಚುರುಕಾಗಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನ ಪ್ರದೇಶಗಳ ಹೆಚ್ಚಿನ ಸ್ಥಳಗಳಲ್ಲಿ ಮಳೆಯಾಗಿದೆ.
Vijaya Karnataka Web Rain in Mangaluru


ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ತೀರದುದ್ದಕ್ಕೂ 45-55 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿಯಿಂದ ಬಿರುಗಾಳಿಯ ವಾತಾವರಣ ಸೃಷ್ಟಿಯಾಗಲಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ ಹಾಗೂ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಬೀದರ್‌, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ನಾನಾ ಜಿಲ್ಲೆಗಳ ಕೆಲ ಸ್ಥಳಗಳಲ್ಲಿ ಮಿಂಚಿನಿಂದ ಕೂಡಿದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಕರಾವಳಿ ಜಿಲ್ಲೆಗಳಲ್ಲಿ ಸೆ. 15ರವರೆಗೆ ಹೆಚ್ಚಿನ ಮಳೆಯಾಗಲಿದೆ. ಮಲೆನಾಡು ಜಿಲ್ಲೆಗಳಲ್ಲಿ ಸೆ. 14ರವರೆಗೆ ಹಾಗೂ ಒಳನಾಡು ಪ್ರದೇಶಗಳಲ್ಲಿ ಭಾನುವಾರದವರೆಗೆ ಮಳೆ ಮುಂದುವರಿಯಲಿದೆ.

ಮೂಲ್ಕಿಯಲ್ಲಿ ಭಾರಿ ಮಳೆ

ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಭಾರಿ ಪ್ರಮಾಣದ ಮಳೆ (300 ಮಿ.ಮೀ.) ದಾಖಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ 260 ಮಿ.ಮೀ. ಹಾಗೂ ಪಣಂಬೂರಿನಲ್ಲಿ 230 ಮಿ.ಮೀ.ನಷ್ಟು ಭಾರಿ ಮಳೆಯಾಗಿದೆ.

ಮಂಗಳೂರು 190, ಕೋಟ, ಮೂಡಬಿದಿರೆ, ಕುಂದಾಪುರ, ಕಾರ್ಕಳ ತಲಾ 130, ಬೆಳ್ತಂಗಡಿ 120, ಮಾಣಿ 90, ಕೊಟ್ಟಿಗೆಹಾರ 80, ಕೊಲ್ಲೂರು, ಭಟ್ಕಳದಲ್ಲಿ ತಲಾ 70 ಮಿ.ಮೀ.ನಷ್ಟು ಭಾರಿ ಮಳೆಯಾಗಿದೆ.

ಉಡುಪಿ, ಶಿರಾಲಿ, ಕೆರೂರು ತಲಾ 60, ಆಗುಂಬೆ, ಕಾರವಾರ, ಭಾಗಮಂಡಲ ತಲಾ 50, ಧರ್ಮಸ್ಥಳ, ವಿರಾಜಪೇಟೆ ತಲಾ 40, ಬೈಲಹೊಂಗಲ, ಕಳಸ, ಕಂಪ್ಲಿತಲಾ 30, ಪುತ್ತೂರು, ಹೊನ್ನಾವರ, ಮೂಡಿಗೆರೆ ತಲಾ 20, ಗೋಕರ್ಣ, ಉಪ್ಪಿನಂಗಡಿ, ನಿಪ್ಪಾಣಿ, ಮಸ್ಕಿ, ಹಿರಿಯೂರು, ಪಾವಗಡದಲ್ಲಿ ತಲಾ 10 ಮಿ.ಮೀ.ನಷ್ಟು ಸಾಧಾರಣ ಮಳೆಯಾಗಿದೆ.

ಮಳೆಯಿಂದ ಕುಸಿದ ಮನೆ

ಸಿಂಧನೂರು (ರಾಯಚೂರು): ತಾಲೂಕಿನ ವಿರುಪಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಮನೆಯೊಂದು ಕುಸಿದಿದೆ. ಯಮನಮ್ಮ ಹುಸೇನಪ್ಪ ಅವರಿಗೆ ಈ ಮನೆ ಸೇರಿದೆ. ಸ್ಥಳಕ್ಕೆ ಪಿಡಿಒ ವೀರಭದ್ರಪ್ಪ, ಗ್ರಾಮ ಲೆಕ್ಕಾಧಿಕಾರಿ ದೇವರಾಜ, ಜೆಇ ರಮೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ