ಆ್ಯಪ್ನಗರ

ಮಹಿಳಾ ದೌರ್ಜನ್ಯ ತಡೆಗೆ ಕಾನೂನು ಭಯವಷ್ಟೇ ಸಾಕೇ! ಬದಲಾವಣೆ ನಡೆಯಬೇಕಾಗಿರುವುದೆಲ್ಲಿ?

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಿದೆ. ಸುದೀರ್ಘ ಏಳು ವರ್ಷದ ಹೋರಾಟದಲ್ಲಿ ನಿರ್ಭಯಾ ಪೋಷಕರಿಗೆ ಜಯ ಸಿಕ್ಕಿದೆ. ಆದರೆ ಕೇವಲ ಕಾನೂನಿನ ಭಯದ ಮೂಲಕ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಹಿಡಿಯಲು ಸಾಧ್ಯವೇ? ಈ ಕುರಿತಾಗಿ ಮಹಿಳಾ ಮುಖಂಡರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇರ್ಷಾದ್ ಉಪ್ಪಿನಂಗಡಿ | Vijaya Karnataka Web 20 Mar 2020, 1:37 pm
ಬೆಂಗಳೂರು: ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಅಪರಾಧಿಗಳಿಗೆ ಕೊನೆಗೂ ಗಲ್ಲು ಶಿಕ್ಷೆಯಾಗಿದೆ. ಮಾರ್ಚ್ 20 ರಂದು ನಾಲ್ವರು ಅಪರಾಧಿಗಳನ್ನು ನೇಣಿಗೇರಿಸಲಾಗಿದೆ. ಈ ಮೂಲಕ ನಿರ್ಭಯಾ ಪೋಷಕರ ಏಳು ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ.
Vijaya Karnataka Web nirbhaya memory


ಈ ನೆಲದ ಕಾನೂನಿನ ಪ್ರಕಾರ ಅತ್ಯಾಚಾರಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಿರುವುದಕ್ಕೆ ಜನರು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೇವಲ ಕಾನೂನಿನ ಭಯದಿಂದ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರಕ್ಕೆ ಪೂರ್ಣವಿರಾಮ ಹಾಕಲು ಸಾಧ್ಯವೇ ಎಂಬ ಚರ್ಚೆಗಳು ನಡೆಯುತ್ತಿವೆ.

ಕಠಿಣ ಕಾನೂನು ಜಾರಿಗೊಳಿಸುವುದರ ಜೊತೆಗೆ ಸಮಾಜದ ಮನಸ್ಥಿತಿಯಲ್ಲಿ ಬದಲಾವಣೆ ತರುವ ತುರ್ತು ಅಗತ್ಯವೂ ಇದೆ. ಈ ಕುರಿತಾಗಿ ವಿಜಯ ಕರ್ನಾಟಕದ ಜೊತೆಗೆ ಮಹಿಳಾ ಜನಪ್ರತಿನಿಧಿಗಳು ಹಾಗೂ ಮಹಿಳಾಪರ ಹೋರಾಟಗಾರರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ನಿರ್ಭಯಾ ಪೋಷಕರು ಕೈಗೊಂಡಿದ್ದ ಆ ಶಪಥ ಕೊನೆಗೂ ಈಡೇರಿತು !

ನಿರ್ಭಯಾ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದ್ದು ಖಂಡಿತಾ ಸಂತೋಷ ನೀಡಿದೆ. ಆದರೆ ಮುಂದಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಕೊನೆಯಾಗಲಿದೆಯಾ ಎಂದು ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಪ್ರಶ್ನಿಸಿದ್ದಾರೆ. ನಿರ್ಭಯಾ ಪ್ರಕರಣದಲ್ಲಿ ಸುದೀರ್ಘ ಏಳು ವರ್ಷಗಳ ಕಾನೂನು ಹೋರಾಟದ ಬಳಿಕ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಈ ಘಟನೆಯ ಬಳಿಕ ಸಾಕಷ್ಟು ಪ್ರತಿಭಟನೆಗಳು ನಡೆದರೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಂತಿಲ್ಲ.

ಮಹಿಳೆಯರು ಇಂದಿಗೂ ರಸ್ತೆಗಳಲ್ಲಿ ಓಡಾಡುವಾಗ, ಕೆಲಸ ಮಾಡುತ್ತಿರುವ ಪರಿಸರಗಳಲ್ಲಿ ಸುರಕ್ಷಿತವಾಗಿಲ್ಲ. ನಿರ್ಭಯಾ ಪ್ರಕರಣದ ಬಳಿಕ ಊನ್ನಾವೋದಲ್ಲಿ, ಕಥ್ವಾದಲ್ಲಿ, ತೆಲಂಗಾಣದಲ್ಲಿ ನಡೆದ ಪ್ರಕರಣಗಳು ಮಹಿಳೆಯರಲ್ಲಿ ಭಯ ಮೂಡಿಸಿದೆ.

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಹಿಡಿಯಲು ಕೇವಲ ಕಾನೂನು ಭಯದಿಂದ ಮಾತ್ರ ಸಾಧ್ಯವಿಲ್ಲ, ಸಮಾಜದಲ್ಲಿ ಪುರುಷಪ್ರಧಾನ ಮನಸ್ಥಿತಿ ಬದಲಾವಣೆಯಾಗಬೇಕಿದೆ. ಮಹಿಳೆಯರನ್ನು ಗೌರವಿಸುವುದನ್ನು ಗಂಡು ಮಕ್ಕಳಿಗೆ ಮನೆಯಲ್ಲೇ ಕಲಿಸಬೇಕಿದೆ. ಜೊತೆಗೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಆರೋಪಿಗಳಿಗೆ ತ್ವರಿತ ಶಿಕ್ಷೆಯಾಗುವ ನಿಟ್ಟಿನಲ್ಲಿ ಫಾಸ್ಟ್‌ ಟ್ರ್ಯಾಕ್ ನ್ಯಾಯಾಲಯಗಳ ಸ್ಥಾಪನೆಯ ಅಗತ್ಯವಿದೆ ಎಂದರು.

ಇನ್ನಿಲ್ಲ ನಿರ್ಭಯ ಅತ್ಯಾಚಾರಿಗಳು: ಮರಣೋತ್ತರ ಪರೀಕ್ಷೆ, ಪೋಷಕರಿಗೆ ಹಸ್ತಾಂತರ ನಂತರ ದಫನ!

ಮಹಿಳಾ ಪರ ಹೋರಾಟಗಾರರಾದ ಕೆ.ಎಸ್‌ ವಿಮಲಾ ಪ್ರತಿಕ್ರಿಯಿಸಿ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಕಾನೂನು ಬಹಳ ಮುಖ್ಯ, ಆದರೆ ಕೇವಲ ಕಾನೂನಿನಿಂದ ಎಲ್ಲವನ್ನು ಬಗೆಹರಿಸಲು ಸಾಧ್ಯವಿಲ್ಲ. ಕಾನೂನು ಪ್ರತಿಯೊಂದನ್ನು ಸರಿಪಡಿಸುತ್ತದೆ ಎಂಬುವುದು ಕೇವಲ ಭ್ರಮೆಯಾಗಿದೆ. ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಿದೆ ಎಂಬ ಕಾರಣಕ್ಕೆ ನಾಳೆಯಿಂದ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ನಿಲ್ಲುತ್ತದಾ? ಎಂದು ಪ್ರಶ್ನಿಸಿದರು.

ಕಾನೂನಿನ ಜೊತೆಗೆ ಸಮಾಜದಲ್ಲಿ ಲಿಂಗಸಂವೇದನೆ ಮೂಡಿಸುವ ಕೆಲಸ ನಡೆಯಬೇಕು. ಮನೆ ಹಾಗೂ ಸಮಾಜದದಲ್ಲಿ ಬದಲಾವಣೆಯಾಗಬೇಕಿದೆ, ನನ್ನ ಜೊತೆಗೆ ಬದುಕುವ ಪ್ರತಿಯೊಬ್ಬರಿಗೂ ನನ್ನಷ್ಟೇ ಬದುಕುವ ಹಕ್ಕು ಇದೆ ಎಂಬ ಭಾವವನ್ನು ಮೂಡಿಸಬೇಕಿದೆ. ಇದನ್ನು ಮೀರಿ ತಪ್ಪು ಎಸಗಿದವರಿಗೆ ಕಾನೂನಿನ ಮೂಲಕ ಶಿಕ್ಷೆ ಕೊಡಿಸುವ ಕೆಲಸ ಆಗಬೇಕಿದೆ ಎಂದರು.

ಬಿಜೆಪಿ ವಕ್ತಾರೆ ಹಾಗೂ ನಟಿ ಮಾಳವಿಕ ಅವಿನಾಶ್ ಪ್ರಕಾರ “ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಸಮಾಜ, ಶಾಸನಸಭೆ ಹಾಗೂ ನ್ಯಾಯಾಂಗದ ಪಾತ್ರ ಮಹತ್ವವಾಗಿದೆ. ಈ ಮೂರು ವ್ಯವಸ್ಥೆಗಳಲ್ಲಿ ಸುಧಾರಣೆ ನಡೆಯಬೇಕಿದೆ” ಎಂದರು.

ಪ್ರತಿ ಮನೆಯಲ್ಲಿ ಹೆಣ್ಣಿನ ಮೇಲೆ ತಾರತಮ್ಯ ನಡೆಯುತ್ತಿದ್ದು, ಸುಶಿಕ್ಷಿತ ವರ್ಗವೂ ಇದಕ್ಕೆ ಹೊರತಾಗಿಲ್ಲ. ಜೊತೆಗೆ ಹೆಣ್ಣುಮಕ್ಕಳ ರಕ್ಷಣೆಯ ಹೊಣೆಯನ್ನು ಪುರುಷರಿಗೆ ವಹಿಸಲಾಗುತ್ತಿದೆ. ಇದರ ಅಗತ್ಯವಿಲ್ಲ, ಬದಲಾಗಿ ನಮ್ಮಂತೆ ನೀವು ಕೂಡ ಅಂದುಕೊಂಡು ಹೆಣ್ಣಿಗೆ ತೊಂದರೆ ನೀಡದಿದ್ದರೆ ಸಾಕು.

ನಿರ್ಭಯಾ ಪ್ರಕರಣ Live: ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ತರಿಗೆ ಮೃತದೇಹಗಳ ಹಸ್ತಾಂತರ!

ನಿರ್ಭಯಾ ಪ್ರಕರಣದಲ್ಲಿ ಆಕೆಯ ತಾಯಿ ಆಶಾ ದೇವಿಯ ದಿಟ್ಟತನದ ಹೋರಾಟ ಎಲ್ಲರಿಗೂ ಮಾದರಿಯಾಗಬೇಕಿದೆ. ಇಂತಹ ಕಿಚ್ಚನ್ನು ಪ್ರತಿ ಮಹಿಳೆಯರು ತಮ್ಮಲ್ಲಿ ಉಳಿಸಿಕೊಳ್ಳಬೇಕಿದೆ. ಜೊತೆಗೆ ನಿರ್ಭಯಾ ಅತ್ಯಾಚಾರಿಗಳಲ್ಲಿ ಕಾಣಿಸಿಕೊಂಡ ಮೃತ್ಯುವಿನ ಭಯವನ್ನು ಸಮಾಜದ ಮುಂದೆ ಇಡಬೇಕಾದ ಅಗತ್ಯವಿದೆ. ಈ ಮೂಲಕ ನಿಧಾನಗತಿಯಲ್ಲಿ ಸಮಾಜವನ್ನು ಬದಲಾವಣೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗೆ ಕಾನೂನು ಭಯದ ಜೊತೆಗೆ ಸಮಾಜದಲ್ಲಿ ಹಾಗೂ ಪ್ರತಿ ಮನೆಗಳಲ್ಲಿ ಬದಲಾವಣೆ ನಡೆಯಬೇಕಿದೆ. ಜನರ ಮನಸ್ಥಿತಿಗಳಲ್ಲಿ ಬದಲಾವಣೆಯಾಗಬೇಕಿದೆ. ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಹೀಗಾದಲ್ಲಿ ಮಾತ್ರ ಸಮಾಜದಲ್ಲಿ ಅತ್ಯಾಚಾರ, ದೌರ್ಜನ್ಯದಂತಹ ಕೃತ್ಯಗಳನ್ನು ತಡೆಗಟ್ಟಬಹುದಾಗಿದೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ