ಆ್ಯಪ್ನಗರ

‘ಕರ್ನಾಟಕ ಬಂದ್’ ಪರಿಣಾಮವೇನು? ಕನ್ನಡ ಪರ ಹೋರಾಟಗಾರರ ಮುಂದಿನ ಹೆಜ್ಜೆ ಯಾವುದು?

ಮರಾಠ ಅಭಿವೃದ್ದಿ ಪ್ರಾಧಿಕಾರ ರಚನೆ ವಿರೋಧಿಸಿ ನಡೆದ ಕರ್ನಾಟಕ ಬಂದ್ ನಿಂದ ಆದ ಪರಿಣಾಮವೇನು? ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಾ? ಹಾಗಾದರೆ ಕನ್ನಡಿಗರ ಮುಂದಿನ ಹೋರಾಟ ಯಾವ ಸ್ವರೂಪದ್ದು? ಇಲ್ಲಿದೆ ಮಾಹಿತಿ

Vijaya Karnataka Web 5 Dec 2020, 3:44 pm
ಮರಾಠ ಅಭಿವೃದ್ದಿ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡ ಸಂಘಟನೆಗಳ ಒಕ್ಕೂಟ ನೀಡಿದ್ದ ಕರ್ನಾಟಕ ಬಂದ್‌ ಕರೆಗೆ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ಬೆಂಗಳೂರು ನಗರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಬಂದ್‌ ಯಶಸ್ವಿ ಆಗದಿದ್ದರೂ ಪ್ರತಿಭಟನೆ, ಬಂಧನದ ಮೂಲಕ ಕನ್ನಡ ಪರ ಹೋರಾಟಗಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಎಚ್ಚರಿಕೆಯ ನಡುವೆಯೂ ಬಂದ್‌ ಯಶಸ್ವಿಗೊಳಿಸಲು ಕನ್ನಡ ಸಂಘಟನೆಗಳು ಹರಸಾಹಸ ಪಟ್ಟಿದ್ದವು. ಹೈಕೋರ್ಟ್‌ ಎಚ್ಚರಿಕೆಯ ಗಂಟೆ, ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಜನರಿಂದ ಸಿಗದ ನಿರೀಕ್ಷಿತ ಬೆಂಬಲ ಬಂದ್ ಯಶಸ್ವಿ ಆಗದಿರಲು ಕಾರಣವಾಗಿದೆ. ಆದರೆ ಕನ್ನಡ ಪರ ಸಂಘಟನೆಗಳು ಮುಂದಿನ ನಡೆ ಏನು? ಮರಾಠಿ ಪ್ರಾಧಿಕಾರ ರಚನೆ ವಿರುದ್ಧದ ಹೋರಾಟ ಮುಗಿದು ಹೋದ ಕಥೆಯೋ? ಈ ಕುರಿತಾದ ವರದಿ ಇಲ್ಲಿದೆ.
Vijaya Karnataka Web what is the impact on karnataka bandh
‘ಕರ್ನಾಟಕ ಬಂದ್’ ಪರಿಣಾಮವೇನು? ಕನ್ನಡ ಪರ ಹೋರಾಟಗಾರರ ಮುಂದಿನ ಹೆಜ್ಜೆ ಯಾವುದು?




​ಕರ್ನಾಟಕ ಬಂದ್ ನಿಂದ ಆಗಿರುವ ಪರಿಣಾಮವೇನು?

ಅಷ್ಟಕ್ಕೂ ಸಾಕಷ್ಟು ಸದ್ದು ಮಾಡಿದ್ದ ಕರ್ನಾಟಕದ ಬಂದ್‌ನಿಂದ ಏನು ಪರಿಣಾಮ ಆಗಿದೆ ಎಂಬುವುದು ಸದ್ಯದ ಚರ್ಚೆಯಲ್ಲಿರುವ ವಿಚಾರ. ಬಂದ್‌ ಅಂದರೆ ಅದರ ನೇರ ಬಿಸಿ ಸರ್ಕಾರಕ್ಕೆ ತಟ್ಟಬೇಕು. ಸಾರಿಗೆ ಸಂಚಾರ ರದ್ದು, ಸರ್ಕಾರಿ ಕಚೇರಿಗಳು ಕಾರ್ಯಾಚರಣೆ ರದ್ದು ಹಾಗೂ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆದರೆ ಇದು ಪರಿಣಾಮಕಾರಿಯಾಗಿ ಮಾರ್ಪಡುತ್ತಿತ್ತು. ಆದರೆ ಕನ್ನಡ ಪರ ಸಂಘಟನೆಗಳು ನೀಡಿದ ಕರ್ನಾಟಕ ಬಂದ್‌ನಲ್ಲಿ ಇದ್ಯಾವುದು ನಡೆದಿಲ್ಲ. ಈ ನಿಟ್ಟಿನಲ್ಲಿ ಇದರ ಬಿಸಿ ದೊಡ್ಡ ಮಟ್ಟದಲ್ಲಿ ಯಾರಿಗೂ ತಟ್ಟಿಲ್ಲ. ಒಂದು ಅರ್ಥದಲ್ಲಿ ಇದು ಕನ್ನಡ ಪರ ಸಂಘಟನೆಗಳಿಗೆ ಆದ ಹಿನ್ನಡೆ. ಇದರಿಂದ ಸರ್ಕಾರ ಮರಾಠಿ ಪ್ರಾಧಿಕಾರ ರಚನೆಯ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆಗಳು ತೀರಾ ಕಡಿಮೆ.

​ಕನ್ನಡ ಪರ ಹೋರಾಟಗಾರರಿಗೆ ಆಗಿರುವ ಲಾಭವೇನು?

ಕರ್ನಾಟಕದಲ್ಲಿ ಮರಾಠಿ ಅಭಿವೃದ್ದಿ ಪ್ರಾಧಿಕಾರ ಬೇಡ ಎಂಬುವುದು ಕನ್ನಡ ಪರ ಸಂಘಟನೆಗಳ ವಾದವಾಗಿದೆ. ರಾಜ್ಯ ಸರ್ಕಾರ ಉಪಚುನಾವಣೆಯ ದೃಷ್ಟಿಯಿಂದ ಮರಾಠಿಗರಿಗೆ ಆದ್ಯತೆ ನೀಡುತ್ತಿದೆ. ಬೆಳಗಾವಿಯಲ್ಲಿ ಮರಾಠಿಗರ ಕನ್ನಡ ವಿರೋಧಿ ವರ್ತನೆಯ ನಡುವೆಯೂ ಮರಾಠ ಅಭಿವೃದ್ದಿ ಪ್ರಾಧಿಕಾರ ರಚನೆ ಮಾಡುವ ಮೂಲಕ ಕನ್ನಡಿಗರಿಗೆ ದ್ರೋಹ ಬಗೆದಿದೆ ಎಂಬುವುದು ಕನ್ನಡ ಪರ ಹೋರಾಟಗಾರರ ವಿರೋಧವಾಗಿದೆ. ಈ ನಿಟ್ಟಿನಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಕನ್ನಡ ಒಕ್ಕೂಟದ ಹೆಸರಿನಲ್ಲಿ ಒಂದುಗೂಡಿ ಕರ್ನಾಟಕ ಬಂದ್‌ ಕರೆ ನೀಡಿದ್ದವು. ಕೆಲವೊಂದು ಭಿನ್ನಮತಗಳ ನಡುವೆಯೂ ಬಹುತೇಕ ಕನ್ನಡ ಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದರು. ಆದರೆ ಪೂರ್ವ ತಯಾರಿ ಹಾಗೂ ಸಂಘಟನೆಯ ಕೊರತೆಯಿಂದ ಬಂದ್‌ ಪೂರ್ಣ ಪ್ರಮಾಣದಲ್ಲಿ ಯಶಸ್ವಿ ಆಗಿಲ್ಲ. ಆದರೆ ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

​ಕನ್ನಡ ಹೋರಾಟಗಾರರ ಮುಂದಿನ ನಡೆಯೇನು?

ಆದರೆ ಇಷ್ಟಕ್ಕೆ ಕನ್ನಡ ಹೋರಾಟಗಾರರು ಸುಮ್ಮನಾಗುತ್ತಾರಾ ಎಂಬ ಪ್ರಶ್ನೆ ಕಾಡುತ್ತದೆ. ಕನ್ನಡ ಪರ ಸಂಘಟನೆಗಳ ಪ್ರಕಾರ ಇದು ಮೊದಲನೇ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿವಿಧ ಸ್ವರೂಪದಲ್ಲಿ ಹೋರಾಟ ನಡೆಸಲು ಕನ್ನಡ ಪರ ಸಂಘಟನೆಗಳು ಮುಂದಾಗಿವೆ. ಜೈಲ್ ಭರೋ ಚಳವಳಿಯ ಮೂಲಕ ಮರಾಠ ಪ್ರಾಧಿಕಾರ ರಚನೆಯನ್ನು ವಿರೋಧಿಸಲು ಕನ್ನಡ ಪರ ಸಂಘಟನೆಗಳು ಯೋಜನೆ ರೂಪಿಸುತ್ತಿವೆ. ಆದರೆ ಸಂಘಟಕರ ಹೋರಾಟಕ್ಕೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ ಬಹಿರಂಗ ಬೆಂಬಲ ನೀಡದೆ ಇರುವುದು ಒಂದು ರೀತಿಯಲ್ಲಿ ಹಿನ್ನಡೆ ಉಂಟಾಗಿದೆ.

​ಸರಕಾರ ನಿಲುವೇನು? ಮರಾಠಾ ಸಂಘಟನೆಗಳು ಏನು ಹೇಳುತ್ತಿವೆ?

ಮರಾಠ ಅಭಿವೃದ್ದಿ ಪ್ರಾಧಿಕಾರ ರಚನೆ ಮಾಡಿರುವ ರಾಜ್ಯ ಸರ್ಕಾರ ಹಾಗೂ ಸಿಎಂ ಬಿಎಸ್‌ ಯಡಿಯೂರಪ್ಪ ತಮ್ಮ ನಡೆಯನ್ನು ಆರಂಭದಿಂದಲೇ ಸಮರ್ಥನೆ ಮಾಡುತ್ತಾ ಬಂದಿದ್ದಾರೆ. ಯಾವುದೇ ಕಾರಣಕ್ಕೂ ಬಂದ್ ನಡೆಸದಂತೆ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಈ ಕುರಿತಾಗಿ ಬೆಳಗಾವಿಯಲ್ಲಿ ಶನಿವಾರ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಿರೀಕ್ಷೆಯಂತೆ ಬಂದ್ ಕರೆಗೆ ಜನ ಸಹಕಾರ ಕೊಟ್ಟಿಲ್ಲ. ಬೆಂಗಳೂರು ಸೇರಿ ಎಲ್ಲಾ ಜಿಲ್ಲೆಯಲ್ಲಿ ಯಥಾಸ್ಥಿತಿ ಇದೆ. ಜನಜೀವನ, ಬಸ್ ಸಂಚಾರ ಎಂದಿನಂತೆ‌ ಇದೆ ಎಂದಿದ್ದಾರೆ. ಒತ್ತಾಯ ಪೂರ್ವಕ ಬಂದ್ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದಿರುವ ಅವರು ಕರ್ನಾಟಕದ ಜನರಿಗೆ ಧನ್ಯವಾನ ಸಲ್ಲಿಸಿದ್ದಾರೆ. ಇದೇ ವಿಚಾರವಾಗಿ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿ, ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಗೆ ಜನ ಸ್ಪಂದನೆ ಸಿಕ್ಕಿಲ್ಲ. ನಾವೂ ಕೂಡ ಬಂದ್ ಕೈ ಬಿಡುವಂತೆ ಮನವಿ ಮಾಡಿದ್ದೆವು. ಅವರು ಸರ್ಕಾರದ ಗಮನ ಸೆಳೆಯಬೇಕೆನ್ನುವ ಉದ್ದೇಶದಿಂದ ಪ್ರತಿಭಟನೆಗೆ ಮುಂದಾಗಿದ್ದರು. ಆದರೆ, ರಾಜ್ಯ ಸರಕಾರ ಸಾಧಕಬಾಧಕ ನೋಡಿಕೊಂಡು ಮರಾಠಾ ಅಭಿವೃದ್ದಿ ಪ್ರಾಧಿಕಾರ ರಚನೆ ಮಾಡಿರುವುದರಿಂದ ಬಂದ್ ಗೆ ಬೆಲೆ ಸಿಕ್ಕಿಲ್ಲ ಎಂದಿದ್ದಾರೆ. ಇನ್ನು ಮರಾಠಿ ಸಂಘಟನೆಗಳು ಸದ್ಯಕ್ಕೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಅದೇನೇ ಇದ್ದರೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಬಂದ್ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿವೆ. ಆದರೆ ಇದಕ್ಕೆ ಸರ್ಕಾರ ಹೇಗೆ ಸ್ವಂದಿಸುತ್ತದೆ ಎಂಬುವುದನ್ನು ಕಾದುನೋಡಬೇಕಿದೆ.



6

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ