ಆ್ಯಪ್ನಗರ

ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆ ಕ್ಯಾತೆ! ಬಿಎಸ್‌ವೈಗೆ ಹೊಸ ತಲೆನೋವು

ಸಂಪುಟ ವಿಸ್ತರಣೆ ಆದರೂ ಖಾತೆ ಕ್ಯಾತೆ ಬಗೆಹರಿಯುತ್ತಿಲ್ಲ. ಪ್ರಮುಖ ಖಾತೆಯ ಮೇಲೆ ನೂತನ ಸಚಿವರು ಕಣ್ಣಿಟ್ಟಿದ್ದು ಖಾತೆ ಹಂಚಿಕೆ ವಿಳಂಬಕ್ಕೆ ಕಾರಣವಾಗುತ್ತಿದೆ. ಆದರೆ ಹಿರಿಯ ಸಚಿವರ ಜೊತೆಗೆ ಚರ್ಚೆ ನಡೆಸಿ ಬುಧವಾರ ಖಾತೆ ಹಂಚಿಕೆ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ.

Vijaya Karnataka Web 19 Jan 2021, 11:57 am
ಬೆಂಗಳೂರು: ಸಂಪುಟ ವಿಸ್ತರಣೆ ಹಾಗೂ ಅಸಮಾಧಾನ ಸ್ಫೋಟದ ನಡುವೆ ಖಾತೆ ಕ್ಯಾತೆ ಕೂಡಾ ಶುರುವಾಗಿದೆ. ನೂತನ ಸಚಿವರು ಪ್ರಮುಖ ಖಾತೆಗಳತ್ತ ಕಣ್ಣಿಟ್ಟಿದ್ದು ಖಾತೆ ಹಂಚಿಕೆ ಮಾಡುವುದು ಸಿಎಂ ಬಿಎಸ್ ಯಡಿಯೂರಪ್ಪ ಪಾಲಿಗೆ ಹೊಸ ಸವಾಲಾಗಿ ಪರಿಣಮಿಸಿದೆ. ಸದ್ಯ ಹಂಚಿಕೆ ಆಗದ ಉಳಿದಿರುವ ಖಾತೆಗಳನ್ನು ನೂತನ ಸಚಿವರಿಗೆ ನೀಡಲಾಗುತ್ತದಾ ಅಥವಾ ಮಹತ್ವದ ಬದಲಾವಣೆಗಳು ನಡೆಯಲಿದ್ಯಾ ಎಂಬುವುದು ಕುತೂಹಲ ಕೆರಳಿಸಿದೆ.
Vijaya Karnataka Web new ministers



ಪ್ರಮುಖ ಖಾತೆಗಳತ್ತ ನೂತನ ಸಚಿವರ ಕಣ್ಣು

ನೂತನವಾಗಿ ಬಿಎಸ್‌ವೈ ಸಂಪುಟಕ್ಕೆ ಸೇರ್ಪಡೆಗೊಂಡಿರುವ ಸಚಿವರು ಪ್ರಮುಖ ಖಾತೆಗಳತ್ತ ಕಣ್ಣಿಟ್ಟಿದ್ದಾರೆ. ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಂಟಿಬಿ ನಾಗರಾಜ್ ಪ್ರಮುಖ ಖಾತೆಗಳು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಖಾತೆ ಹಂಚಿಕೆ ಮಾಡುವುದು ಕೂಡಾ ಬಿಎಸ್‌ವೈ ಪಾಲಿಗೆ ಸವಾಲಿನ ಸಂಗತಿಯಾಗಿದೆ. ಖಾತೆಗಳ ಹಂಚಿಕೆ ಕುರಿತಾಗಿ ಬಿಎಸ್‌ವೈಗೆ ಪರಮಾಧಿಕಾರವಿದ್ದು ಹೈಕಮಾಂಡ್‌ ಕೂಡಾ ಈ ವಿಚಾರವನ್ನು ಸಿಎಂ ವಿವೇಚನೆಗೆ ಬಿಟ್ಟಿದೆ.

ಸಂಪುಟ ಸಂಕಷ್ಟ: ಸಿ.ಪಿ ಯೋಗೇಶ್ವರ್ ವಿರುದ್ಧ ಅರುಣ್ ಸಿಂಗ್‌ಗೆ ಎಂ.ಪಿ ರೇಣುಕಾಚಾರ್ಯ ದೂರು!

ಹಂಚಿಕೆಯಾಗದಿರುವ ಹಾಗೂ ಹೆಚ್ಚುವರಿ ಖಾತೆಗಳು ಯಾವುವು?

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಬಳಿ ಹಣಕಾಸು, ಇಂಧನ, ಬೆಂಗಳೂರು ಅಭಿವೃದ್ಧಿಯಂತಹ ಪ್ರಮುಖ ಖಾತೆಗಳಿವೆ. ಇದು ಅವರಲ್ಲೇ ಮುಂದುವರಿಯಲಿದೆ. ಉಳಿದಂತೆ ಹೆಚ್ಚುವರಿಯಾಗಿ ಇರುವ ಸಣ್ಣ ಕೈಗಾರಿಕೆ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವಜನ ಸಬಲೀಕರಣ, ಕ್ರೀಡೆ, ಅಬಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳನ್ನು ಹಂಚಿಕೆ ಮಾಡಬೇಕಿದೆ. ಜೊತೆಗೆ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಅವರ ಬಳಿಯೂ ಹೆಚ್ಚುವರಿ ಖಾತೆಗಳಿವೆ.

ಸಂಭವನೀಯ ಖಾತೆಗಳು

ಹಿರಿಯರಾಗಿರುವ ಉಮೇಶ್ ಕತ್ತಿ ಅವರಿಗೆ ಪ್ರವಾಸೋದ್ಯಮ ಸಿಗುವುದು ಬಹುತೇಕ ಖಚಿತವಾಗಿದೆ. ಇನ್ನು ಮುರುಗೇಶ್ ನಿರಾಣಿ ಇಂಧನ ಖಾತೆಯ ನಿರೀಕ್ಷೆಯಲ್ಲಿದ್ದಾರೆ. ಎಂಟಿಬಿ ನಾಗರಾಜ್‌ ಅಬಕಾರಿ ಸಾಧ್ಯತೆ ಇದೆ. ಅದರಂತೆ ಸಿ.ಪಿ ಯೋಗೇಶ್ವರ್‌ ಬೆಂಗಳೂರು ಅಭಿವೃದ್ದಿ ಖಾತೆಯಲ್ಲಿ ಕಣ್ಣಿಟ್ಟಿದ್ದಾರೆ. ಆರ್‌. ಶಂಕರ್‌ಗೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅರವಿಂದ ಲಿಂಬಾಳಿಗೆ ಯುವಜನ ಹಾಗೂ ಕ್ರೀಡಾ ಖಾತೆ ಸಿಗುವ ಸಾಧ್ಯತೆ ಇದೆ. ಿದರ ಹೊರತಾಗಿಯೂ ಕೆಲವು ಬದಲಾವಣೆಗಳು ಆಗುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ.

ಅಮಿತ್ ಶಾ ರಾಜ್ಯ ಪ್ರವಾಸ ಮುಗಿದ ಬಳಿಕ ಖಾತೆ ಹಂಚಿಕೆ ಮಾಡಲಾಗುವುದು ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಹೇಳಿದ್ದರು. ಆದರೆ ಶಾ ಪ್ರವಾಸ ಮುಗಿದಿದ್ದು ಖಾತೆ ಹಂಚಿಕೆ ಇನ್ನೂ ನಡೆದಿಲ್ಲ. ಕೆಲವು ಸಚಿವರು ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟಿದ್ದು ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಆದರೆ ಹಿರಿಯ ಸಚಿವರ ಜೊತೆ ಚರ್ಚಿಸಿ ಬುಧವಾರ ಯಾರಿಗೆ ಯಾವ ಖಾತೆ ಎಂಬುವುದನ್ನು ಪ್ರಕಟಿಸುತ್ತೇನೆ ಎಂದು ಬಿಎಸ್‌ವೈ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ