ಆ್ಯಪ್ನಗರ

ಲಿಂಗಾಯತ ಧರ್ಮ ವಿಚಾರಕ್ಕೆ ಕೈ ಹಾಕಿದ್ದು ತಪ್ಪು ಎಂದ ಡಿಕೆಶಿ, ಕಾಂಗ್ರೆಸ್‌ನಲ್ಲಿ ತಳಮಳ

ಧರ್ಮದ ವಿಚಾರಕ್ಕೆ ಕೈ ಹಾಕಿದ್ದು ತಪ್ಪು, ಕ್ಷಮೆಯಾಚಿಸುತ್ತೇನೆ ಎಂದು ಡಿಕೆ ಶಿವಕುಮಾರ್‌

Vijaya Karnataka Web 18 Oct 2018, 7:48 pm
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಪ್ರತ್ಯೇಕ ಲಿಂಗಾಯತ ಧರ್ಮ ವಿಷಯವನ್ನು ಕೆದಕಿದ್ದು ನಿಜಕ್ಕೂ ತಪ್ಪಾಗಿದೆ. ಈ ವಿಷಯದಲ್ಲಿ ರಾಜಕಾರಣಿಗಳು, ರಾಜಕೀಯ ಪಕ್ಷಗಳು ದುಡುಕಬಾರದು. ಆದರೆ ಕಾಂಗ್ರೆಸ್‌ ಜೇನುಗೂಡಿಗೆ ಕೈ ಹಾಕಿ ಕೈ ಸುಟ್ಟುಕೊಂಡಿದೆ. ಇದರಿಂದ ನಾವೇ ಪ್ರತಿಫಲ ಅನುಭವಿಸಿದ್ದೇವೆ. ವಿಧಾನಸಭೆ ಚುನಾವಣೆಯಲ್ಲಿ ನಮಗೆ ಸೋಲಾಗಿದೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.
Vijaya Karnataka Web DKShivakumar


ಕಾಂಗ್ರೆಸ್‌ನ 'ಪವರ್‌'ಫುಲ್‌ ನಾಯಕ ಡಿಕೆ ಶಿವಕುಮಾರ್‌ ನೀಡಿರುವ ಈ ಹೇಳಿಕೆ ಈಗ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಡಿಕೆಶಿ ಹೇಳಿಕೆಯಿಂದ ರಾಜ್ಯ ರಾಜಕೀಯ ಅಂಗಳದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಪರ ವಿರೋಧ ಹೇಳಿಕೆಗಳು ಜೋರಾಗಿ ಕೇಳಿಬಂದಿವೆ.

ಗದಗ ಸಮೀಪದ ಲಕ್ಷ್ಮೇಶ್ವರದಲ್ಲಿರುವ ರಂಭಾಪುರಿ ಪೀಠದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಶಿವಕುಮಾರ್‌, ರಾಜಕಾರಣಿಗಳು ಧರ್ಮ, ಜಾತಿ, ಸಂಸ್ಕೃತಿ ವಿಷಯದಲ್ಲಿ ತಲೆ ಹಾಕಬಾರದು. ಇದರಿಂದ ಸಾಕಷ್ಟು ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದರೆ ನಾನೂ ಸೇರಿದಂತೆ ಕಳೆದ ಬಾರಿಯ ಸರಕಾರ ತಪ್ಪು ಹೆಜ್ಜೆ ಇಟ್ಟಿದೆ. ಇದರಿಂದ ಯಾರಿಗಾದರೂ ತೊಂದರೆ ಆಗಿದ್ದಲ್ಲಿ, ಅಂದಿನ ಸರಕಾರದ ಪರವಾಗಿ ಕ್ಷಮೆ ಕೋರುತ್ತೇನೆ. ಏಕೆಂದರೆ ಸರಕಾರ ಎಂದರೆ ನಾನು ಕೂಡ ಸಚಿವನಾಗಿದ್ದೆ. ನಮ್ಮ ಸಂಪುಟ ಸದಸ್ಯರು ಹಲವು ಅಭಿಪ್ರಾಯಗಳನ್ನು ಆ ಸಂದರ್ಭದಲ್ಲಿ ಮಂಡಿಸಿದ್ದರು. ಇದಕ್ಕಾಗಿ ನಾನು ಆತ್ಮಸಾಕ್ಷಿಯಾಗಿ ಕ್ಷಮೆ ಕೋರುತ್ತೇನೆ ಎಂದರು.


ಬೆಂಗಳೂರಿನಲ್ಲಿ ಸ್ಪಷ್ಟನೆ

ಈ ಕುರಿತು ಬೆಂಗಳೂರಿನಲ್ಲಿಯೂ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್‌, ನನ್ನ ಆತ್ಮಸಾಕ್ಷಿಯಾಗಿ ನಾನು ಅಭಿಪ್ರಾಯಮಂಡಿಸಿದ್ದೇನೆ. ನಮ್ಮ ಪಕ್ಷದ ಕೆಲವು ಈ ವಿಷಯವನ್ನು ಮುಂಚೂಣಿಗೆ ತಂದಿದ್ದರು. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಧರ್ಮದ ವಿಷಯಕ್ಕೆ ಕೈ ಹಾಕಿ ನಾವು ಎಡವಿದ್ದೇವೆ. ಜನರಿಂದ ಪಾಠವನ್ನೂ ಕಲಿಸಿದ್ದೇವೆ ಎಂದರು.

ಕೆಲವರಿಗೆ ಆ ವಿಷಯ ಸರಿ ಎನಿಸಿರಲೂ ಬಹುದು. ಆದರೆ ಒಟ್ಟಾರೆಯಾಗಿ ಪರಾಮರ್ಶಿಸಿ ನೋಡಿದಾಗ ಅದರಿಂದ ನಮಗೆ ಲಾಸ್‌ ಆಗಿದೆ. ಇದನ್ನು ಯಾರೂ ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಡಿಕೆ ಶಿವಕುಮಾರ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ